ಸತೀಶ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿ ಗೇಮ್ ಪ್ಲ್ಯಾನ್ ಬದಲು; ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್
ಬೆಳಗಾವಿ, ಮಾರ್ಚ್ 25: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಮಾಜಿ ಕೇಂದ್ರ ಸಚಿವ ದಿ.ಸುರೇಶ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
ಕುಟುಂಬಕ್ಕೆ ಮಣೆ ಹಾಕುವುದಿಲ್ಲ ಎನ್ನುವ ಮಾತನ್ನು ಮೀರಿ ಸುರೇಶ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿರುವ ಹಿಂದಿನ ಉದ್ದೇಶ ಅನುಕಂಪದ ಮತಗಳನ್ನು ಕೇಂದ್ರಿಕರಿಸುವುದಾಗಿದೆ.
1 ಲೋಕಸಭೆ, 2 ವಿಧಾನಸಭೆ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿಗೆ ಬಂದಿದ್ದ ಸಂದರ್ಭದಲ್ಲಿ ಬಿಜೆಪಿಯಲ್ಲಿ ಇನ್ನು ಮುಂದೆ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೂ ತಮ್ಮ ಸೊಸೆ (ಸುರೇಶ ಅಂಗಡಿ ಪುತ್ರಿ) ಶ್ರದ್ಧಾ ಶೆಟ್ಟರ್ ಅವರಿಗೆ ಟಿಕೆಟ್ ಕೊಡಿಸಲು ಜಗದೀಶ್ ಶೆಟ್ಟರ್ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು.
ಇದಕ್ಕೂ ಮುನ್ನ ಮಂಗಳಾ ಅಂಗಡಿ ಅವರು ಹೆಸರು ಮುನ್ನೆಲೆಗೆ ಬಂದಿತ್ತಾದರೂ ಅವರು ತಮ್ಮ ಬದಲಿಗೆ ಮಗಳಿಗೆ ಟಿಕೆಟ್ ನೀಡುವಂತೆ ಖುದ್ದು ಅವರೇ ಕೋರಿದ್ದರು.
ಕಾಂಗ್ರೆಸ್ ಪಕ್ಷದಿಂದ ಸತೀಶ್ ಜಾರಕಿಹೊಳಿ ಹೆಸರು ಫೈನಲ್ ಆಗುತ್ತಿದ್ದಂತೆ, ಬಿಜೆಪಿ ಗೇಮ್ ಪ್ಲ್ಯಾನ್ ಬದಲಾಯಿಸಿದೆ. ಅಲ್ಲಿಯವರೆಗೂ ಬೇರೆ ಬೇರೆ ಹೆಸರಿತ್ತು. ಈಗ ಬಿಜೆಪಿಗೆ ಅನುಕಂಪದ ಅಸ್ತ್ರ ಬಳಸುವುದು ಅನಿವಾರ್ಯವೆನಿಸಿದೆ.