ಇಳಿಮುಖವಾದ ಮಳೆ; ಮುಳುಗಡೆ ಆಗಿದ್ದ ಬೆಳಗಾವಿಯ ಬಹುತೇಕ ಸೇತುವೆಗಳು ಸಂಚಾರಕ್ಕೆ ಮುಕ್ತ
ಬೆಳಗಾವಿ, ಆಗಸ್ಟ್ 22: ನಿರಂತರ ಮಳೆಯಿಂದ ಗಡಿ ಜಿಲ್ಲೆ ಬೆಳಗಾವಿಯ ಸಪ್ತನದಿಗಳು ಅಪಾಯಮಟ್ಟ ಮೀರಿ ಹರಿದ ಪರಿಣಾಮ ನದಿ ಪಾತ್ರದ ಅನೇಕ ಸೇತುವೆಗಳು ಜಲಾವೃತಗೊಂಡಿದ್ದವು. ಇದೀಗ ಕಳೆದ ಮೂರು ದಿನಗಳಿಂದ ಮಳೆ ನಿಂತಿದ್ದು, ಜಿಲ್ಲೆಯ ಬಹುತೇಕ ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಿವೆ.
ಘಟಪ್ರಭಾ ನದಿಯಿಂದ ಮುಳುಗಡೆ ಆಗಿದ್ದ ಗೋಕಾಕ ಹೊರವಲಯದ ಲೋಳಸೂರ ಸೇತುವೆ ಮೇಲೆ ಸಂಚಾರ ಪುನರಾರಂಭವಾಗಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೇತುವೆಯ ತಾತ್ಕಾಲಿಕ ದುರಸ್ತಿ ಮಾಡಿದ್ದು, ವಾಹನಗಳ ಸಂಚಾರ ಪುನರಾರಂಭವಾಗಿದೆ. ಸೇತುವೆ ಮುಳುಗಡೆ ಆಗಿದ್ದರ ಪರಿಣಾಮ ಜತ್ತ-ಜಾಂಬೋಟಿ ಹೆದ್ದಾರಿ ಬಂದ್ ಆಗಿತ್ತು. ಅಲ್ಲದೇ ಸಂಕೇಶ್ವರ-ಗೋಕಾಕ ಹಾಗೂ ಗೋಕಾಕ-ಯರಗಟ್ಟಿ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೀಗ ಸಂಚಾರ ಮರು ಆರಂಭವಾಗಿದೆ.
ಘಟಪ್ರಭಾ ನದಿ ನೀರು ಇಳಿಕೆ: ನಿಟ್ಟುಸಿರು ಬಿಟ್ಟ ಗೋಕಾಕ್ ಜನತೆ
ನಗರದ ಸಿಂಗಳಾಪುರ ಸೇತುವೆ ಮೇಲಿಂದ ನೀರು ಹಿಂದೆ ಸರಿದಿಲ್ಲ. ನಗರಕ್ಕೆ ಸಂಪರ್ಕ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಲೋಳಸೂರ ಸೇತುವೆ ಮೂಲಕ ಕನಿಷ್ಠ ನಾಲ್ಕು ಕಿ.ಮೀ. ದೂರ ಸುತ್ತು ಬಳಸಿ ಪ್ರಯಾಣಿಸಬೇಕಿದೆ. ಕೊಣ್ಣೂರ, ಮೇಲ್ಮಟ್ಟಿ, ಸಾವಳಗಿ, ನಂದಗಾಂವ ಮೊದಲಾದ ತಾಲ್ಲೂಕಿನ ಪ್ರಮುಖ ಗ್ರಾಮಗಳಿಗೆ ತೆರಳಲು ಸಂಪರ್ಕ ಕೊಂಡಿಯಾಗಿದ್ದ ಚಿಕ್ಕೋಳಿ ಸೇತುವೆ ಕೂಡ ಸಂಚಾರಕ್ಕೆ ಮುಕ್ತಗೊಂಡಿದೆ.
ಮಲಪ್ರಭಾ ನದಿಯ ರಭಸಕ್ಕೆ ಮುಳುಗಡೆ ಆಗಿದ್ದ ಜಿಲ್ಲೆಯ ಖಾನಾಪುರ ತಾಲೂಕಿನ ಯಡೋಬಾ- ಚಾಪಾಗಾವಿ, ಪಾರಿಶ್ವಾಡ ರಸ್ತೆಗಳಲ್ಲಿ ಇದೀಗ ಜನರು ಸಂಚರಿಸುತ್ತಿದ್ದಾರೆ.