ಕಾಗವಾಡ; ಉಪಚುನಾವಣೆ ಹೊತ್ತಲ್ಲಿ ಬಂತು "ವಾಮಾಚಾರ"ದ ಗುಮ್ಮ
ಚಿಕ್ಕೋಡಿ, ನವೆಂಬರ್ 23: ಬೆಳಗಾವಿ ಜಿಲ್ಲೆ ಉಪ ಚುನಾವಣೆಗೆ ಸಜ್ಜಾಗುತ್ತಿದೆ. ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದ್ದು, ಪ್ರತಿ ಕ್ಷೇತ್ರದಲ್ಲೂ ಪ್ರಚಾರ ಕಾರ್ಯ ಬಿರುಸಾಗಿ ಸಾಗಿದೆ. ಈ ನಡುವೆ ಕಾಗವಾಡ ಮತ ಕ್ಷೇತ್ರದಲ್ಲಿ ವಾಮಾಚಾರ ಹಾವಳಿ ಶುರುವಾಗಿದೆ.
ಕಾಗವಾಡದ ಚೆನ್ನಮ್ಮ ವೃತ್ತದ ರಸ್ತೆಯಲ್ಲಿ ತೆಂಗಿನ ಕಾಯಿ, ನಿಂಬೆ ಹಣ್ಣು, ಕುಂಕುಮ, ಭಂಡಾರವನ್ನು ಕಿಡಿಗೇಡಿಗಳು ಇಟ್ಟಿದ್ದಾರೆ. ಕ್ಷೇತ್ರದ ಇಬ್ಬರು ಅಭ್ಯರ್ಥಿಗಳು ಓಡಾಡುವ ಮುಖ್ಯ ರಸ್ತೆ ಇದಾಗಿದ್ದು, ಅವರ ವಿರುದ್ಧ ವಾಮಾಚಾರ ಮಾಡಿದ್ದಾರೆ ಎನ್ನಲಾಗಿದೆ. ಕಾಗವಾಡದಲ್ಲಿ ಬಿಜೆಪಿಯಿಂದ ಶ್ರೀಮಂತ ಪಾಟೀಲ, ಕಾಂಗ್ರೆಸ್ ನಿಂದ ರಾಜು ಭರಮಗೌಡ ಕಾಗೆ ಹಾಗೂ ಜೆಡಿಎಸ್ ನಿಂದ ಶ್ರೀಶೈಲ ತುಗಶೆಟ್ಟಿ ಕಾಗವಾಡ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಮಹಿಳೆ ವಶೀಕರಣಕ್ಕೆ ಬಂದಿದ್ದ ಯುವಕರಿಗೆ ಉಚ್ಚಂಗಿಪುರ ಗ್ರಾಮಸ್ಥರಿಂದ ಗೂಸಾ
ಇಂದು ಕಾಗವಾಡಕ್ಕೆ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಪರ ಪ್ರಚಾರಕ್ಕೆ ಸಿಎಂ ಯಡಿಯೂರಪ್ಪ ಬಂದಿದ್ದು, ಅದಕ್ಕೇ ಈ ವಾಮಾಚಾರ ನಡೆಸಿದ್ದಾರೆ ಎಂದೂ ಜನ ಶಂಕೆ ವ್ಯಕ್ತಪಡಿಸಿದ್ದಾರೆ.
ಆದರೆ ಈ ವಾಮಾಚಾರದ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ, "ಇದಕ್ಕೆಲ್ಲ ನಾವು ಸೊಪ್ಪು ಹಾಕಲ್ಲ, ಇಂಥದ್ದರ ಮೇಲೆ ಎಳ್ಳಷ್ಟೂ ನಂಬಿಕೆಯಿಲ್ಲ. ನನಗೆ ಏನೂ ಆಗಲ್ಲ. ವಾಮಾಚಾರಕ್ಕೆ ಇಟ್ಟ ಲಿಂಬೆ ಹಣ್ಣಿನಿಂದ ಶರಬತ್ ಮಾಡಿ ಕುಡಿದರೆ ಹೊಟ್ಟೆಯಾದರೂ ತುಂಬುತ್ತದೆ. ಎಲ್ಲರೆ ಒಗೆದ್ರೆ ಅದು ನನಗೆ ಇಷ್ಟ ಆಗಲ್ಲ" ಎಂದು ನಗುತ್ತಲೇ ಉತ್ತರಿಸಿದ್ದಾರೆ.
ಅರಕಲಗೂಡಿನ ಅಂಗನವಾಡಿ ಬಳಿ ವಾಮಾಚಾರ; ಮಕ್ಕಳನ್ನು ಕಳಿಸಲು ಹಿಂದೇಟು
"ವಾಮಾಚಾರದಿಂದ ಎಲ್ಲ ಕೆಲಸ ಆಗೋದಿದ್ದರೆ ಅಮೆರಿಕದ ಪ್ರೆಸಿಡೆಂಟ್ ಆಗುತ್ತಿದ್ದರು. ನಮ್ಮ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಪ್ರತಿವರ್ಷ ವಾಮಾಚಾರ ನಡೆಸುತ್ತಾರೆ. ಕಳೆದ ಚುನಾವಣೆಯಲ್ಲಿ ಇದೇ ರೀತಿ ಮಾಡಿ ಇಟ್ಟಿದ್ದರು, ಆದ್ರೆ ಚುನಾವಣೆಯಲ್ಲಿ 33 ಸಾವಿರ ಮತಗಳಿಂದ ಆರಿಸಿ ಬಂದೆ. ಜನರ ಆಶೀರ್ವಾದ ಇದೆ. ದಿನವೂ ಈ ಕೆಲಸ ಮಾಡಲಿ, ನಾನೇನೂ ತಲೆ ಕೆಡಿಸಿಕೊಳ್ಳಲ್ಲ" ಎಂದು ಹೇಳಿದರು.