ಬೆಳಗಾವಿಯಲ್ಲಿ ಬಿಜೆಪಿ ಭರ್ಜರಿ ಚುನಾವಣಾ ತಯಾರಿ
ಬೆಳಗಾವಿ, ಮಾರ್ಚ್ 18: ಮುಂಬರುವ ಮಹಾನಗರ ಪಾಲಿಕೆಯ ಚುನಾವಣಾ ಪೂರ್ವಭಾವಿ ಸಭೆಯನ್ನು ಈಚೆಗೆ ಶಾಸಕರ ಕಾರ್ಯಾಲಯದಲ್ಲಿ ನಡೆಸಲಾಯಿತು.
Recommended Video
ಪಕ್ಷದ ಟಿಕೆಟ್ ಬಯಸುವ ಅಭ್ಯರ್ಥಿಗಳು ದಕ್ಷಿಣ ಮತ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲಾ ವಾರ್ಡ್ ಗಳ ಕೆಲಸ ಕಾರ್ಯಗಳ ಬಗ್ಗೆ ಶಾಸಕರಿಗೆ ವಿವರಣೆ ನೀಡಿದರು. ಜೊತೆಗೆ ಚುನಾವಣಾ ರೂಪರೇಷೆಯ ಕುರಿತೂ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ಇಡೀ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುವ ದೃಢ ಸಂಕಲ್ಪದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿ ಚುನಾವಣಾ ಸಿದ್ಧತೆಗೆ ಮುನ್ನುಡಿ ಬರೆದಿದ್ದಾರೆ.
ಸಿಎಎ, ಎನ್ಆರ್ಸಿ ಪರ ಜಾಗೃತಿ ಮೂಡಿಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ "ಬಿ ಫಾರ್ಮ್"
ಪ್ರಥಮ ಬಾರಿಗೆ ಪಕ್ಷದ ಚಿಹ್ನೆಯ ಮೇಲೆ ಚುನಾವಣೆ ನಡೆಸುವುದರಿಂದ ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಪಕ್ಷದ "ಬಿ ಫಾರ್ಮ್" ನೀಡಬೇಕು, ಯಾವುದೇ ಲಾಬಿಗೆ ಮಣಿಯದೇ ನಿಷ್ಠಾವಂತ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕೆಂದು ಸಭೆಯಲ್ಲಿ ಒಕ್ಕೂರಲ ಅಭಿಪ್ರಾಯ ಮಂಡನೆ ಆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಭಯ ಪಾಟೀಲರವರು ಈಗಾಗಲೇ ದಕ್ಷಿಣ ಮತ ಕ್ಷೇತ್ರದಲ್ಲಿ ಸುಮಾರು 800 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳು ಪ್ರಾರಂಭವಾಗಿದ್ದು, ಮೇ15ರವರೆಗೆ ಶೇ 80ರಷ್ಟು ಕಾಮಗಾರಿಗಳು ಮುಕ್ತಾಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಎರಡು ವರ್ಷಗಳಲ್ಲಿ ಸ್ಮಾರ್ಟ್ ಸಿಟಿಯಾಗುವ ಬೆಳಗಾವಿ
ರಸ್ತೆ, ಚರಂಡಿ, ಒಳಚರಂಡಿ, ಲೈಟ್ ಕಂಬಗಳು, ಡೆಕೊರೇಟ್ ಲೈಟ್ ಗಳು, ಮ್ಯೂಸಿಕ್ ಲೈಟ್ ಗಳು, ಯು.ಜಿ. ಕೇಬಲ್ ಅಳವಡಿಕೆ, 24 ಗಂಟೆಗಳ ಕಾಲ ಕುಡಿಯುವ ನೀರು, 1.5 ಲಕ್ಷಗಳ ಅನುದಾನದಲ್ಲಿ ಬಡವರಿಗೆ ಮನೆ ನಿರ್ಮಾಣ, ಸುಮಾರು 60 ಸಾವಿರ ಫಲಾನುಭವಿಗಳಿಗೆ ಆಯುಷ್ಯಮಾನ-ಆರೋಗ್ಯ ಕರ್ನಾಟಕ ಕಾರ್ಡ್ ವಿತರಣೆ, ಅಂಡರ್ ಗ್ರೌಂಡ್ ಕೇಬಲ್, ಉದ್ಯಾನ, ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ನಿರ್ಮಾಣ, ಕುಡಿಯುವ ನೀರಿನ ಪೈಪ್ ಲೈನ್, ಬಹುಮುಖ್ಯವಾಗಿ ಕಸ ವಿಲೇವಾರಿ ಪರಿಹಾರ, ಕೆರೆಗಳ ಅಭಿವೃದ್ಧಿ ಹೀಗೆ, ಸಂಪೂರ್ಣ ದಕ್ಷಿಣ ಮತಕ್ಷೇತ್ರದ ನಗರ ಪ್ರದೇಶಗಳು ಎರಡು ವರ್ಷಗಳಲ್ಲಿ "ಸ್ಮಾರ್ಟ್ ಸಿಟಿ ಬೆಳಗಾವಿ ಚಿತ್ರಣ" ಕಾಣುತ್ತದೆ ಎಂಬ ಅಭಿಲಾಷೆ ವ್ಯಕ್ತಪಡಿಸಿದರು.
ಸ್ವಚ್ಛ ಸುಂದರ ವಾರ್ಡ್ ಸ್ಪರ್ಧೆ
ಸ್ವಚ್ಛತಾ ಅಭಿಯಾನದಡಿ "ಸ್ವಚ್ಛ ಸುಂದರ ವಾರ್ಡ್ ಸ್ಪರ್ಧೆ" ಎಂಬ ಹೊಸ ಕಲ್ಪನೆಗೆ ಚಾಲನೆ ನೀಡಲಾಗುವುದು. ಈ ಮೂಲಕ ಸಾರ್ವಜನಿಕರ ಸಹಭಾಗಿತ್ವದ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುವುದು ಎಂದರು. ಇಡೀ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡುವ ದೃಢ ಸಂಕಲ್ಪ ನನ್ನದಾಗಿದ್ದು, ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ಶಿವಚರಿತ್ರೆ, ಆರ್ಟ್ ಗ್ಯಾಲರಿ ನಿರ್ಮಾಣ
ಮುಂಬರುವ ದಿನಗಳಲ್ಲಿ ಬೆಳಗಾವಿ ಪ್ರವಾಸೋದ್ಯಮ ಕೇಂದ್ರದ ಆಕರ್ಷಣೆಗಾಗಿ ಶಿವಚರಿತ್ರೆ, ಹೆರಿಟೇಜ್ ಪಾರ್ಕ್ ನಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣ ಮಾಡಲಾಗುವುದು. ಅದೇ ರೀತಿ ಬೆಳಗಾವಿಯ ಯುವಕ ಯುವತಿಯರಿಗಾಗಿ, ಉದ್ಯೋಗ ಸಮಸ್ಯೆ ನಿವಾರಿಸುವ ಭಾಗವಾಗಿ, IT ಪಾರ್ಕ್ ನಿರ್ಮಾಣದ ಸಂಕಲ್ಪದ ಜೊತೆಗೆ ದೊಡ್ಡ ದೊಡ್ಡ ಕಂಪನಿಗಳಿಗೆ ಕಾರ್ಖಾನೆ ಪ್ರಾರಂಭಿಸಲು ಆದ್ಯತೆ ನೀಡುವ ಮೂಲಕ ಅವಶ್ಯ ಸೌಲಭ್ಯ ಒದಗಿಸುವ ನಿಲುವು ಹೊಂದಲಾಗಿದೆ ಎಂದರು.