ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದರಲ್ಲಿ ಡೌಟೇ ಇಲ್ಲ: ಸಿಎಂ ವಿಶ್ವಾಸ
ಬೆಲಗಾವಿ, ಏಪ್ರಿಲ್ 7: ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಲ ಸುರೇಶ್ ಅಂಗಡಿ ಅವರು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಈ ಕುರಿತು ಮಾತನಾಡಿದ ಅವರು, ""ನನಗೆ ಭರವಸೆ ಇದೆ, 3 ಲಕ್ಷ ಅಂತರದಿಂದ ಮಂಗಲ ಸುರೇಶ್ ಅಂಗಡಿ ಗೆಲವು ಸಾಧಿಸುತ್ತಾರೆ'' ಎಂದರು.
ಬೆಳಗಾವಿ ಉಪ ಚುನಾವಣೆ: ಮತದಾನಕ್ಕೆ 10 ದಿನ ಮುನ್ನವೇ ಭವಿಷ್ಯ ನುಡಿದ ಬಿಎಸ್ವೈ
ಮಂಗಳವಾರ ತಡರಾತ್ರಿವರೆಗೆ ಶಾಸಕರು, ಪಕ್ಷದ ಮುಖಂಡರು ಹಾಗೂ ಎಲ್ಲ ಸಮಾಜದ ಮುಖಂಡರ ಸಭೆ ನಡೆಸಿದ್ದೇನೆ. ನಮ್ಮ ಅಭ್ಯರ್ಥಿ 3 ಲಕ್ಷ ಮತಗಳ ಅಂತರದ ಗೆಲುವು ದಾಖಲಿಸಲಿದ್ದಾರೆ ಎಂದು ತಿಳಿಸಿದರು.
ದಿ.ಸುರೇಶ್ ಅಂಗಡಿ ಅವರು ಈ ಹಿಂದೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ, ನಮ್ಮ ಅಭಿವೃದ್ಧಿ ಕಾರ್ಯಗಳೇ ಮಂಗಲ ಅವರ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಇನ್ನು, ಸಾರಿಗೆ ನೌಕರರ ಮುಷ್ಕರದ ಕುರಿತು ಮಾತನಾಡಿದ ಸಿಎಂ ಯಡಿಯೂರಪ್ಪ, ""9 ಬೇಡಿಕೆಗಳ ಪೈಕಿ 8 ಬೇಡಿಕೆ ಈಡೇರಿಸಿದ್ದೇವೆ. ಸಾರಿಗೆ ನೌಕರರು ಹಠ ಮಾಡುವುದು ಸರಿಯಲ್ಲ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮುಷ್ಕರ ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರು.
ಖಾಸಗಿಯವರು ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆದರೆ ಕ್ರಮ ಕೈಗೊಳ್ಳುತ್ತೇವೆ. ಜನರ ಸುಲಿಗೆ ಮಾಡಬೇಡಿ ಎಂದು ಅವರಿಗೂ ಮನವಿ ಮಾಡುವೆ. ಸಾರಿಗೆ ಮುಷ್ಕರ ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ. ಎಸ್ಮಾ ಜಾರಿ ಬಗ್ಗೆ ಚರ್ಚೆ ನಡೆಯುತ್ತಿದೆ, ಪರಿಸ್ಧಿತಿ ನೋಡಿಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸಾರಿಗೆ ಮುಷ್ಕರ ನಿಲ್ಲಿಸಿ ಮಾತುಕತೆಗೆ ಬನ್ನಿ, ಆಗ ನಾನು ಯಾರ ಜೊತೆಗಾದರೂ ಮಾತನಾಡಲು ಸಿದ್ಧ ಎಂದ ಸಿಎಂ ಬಿಎಸ್ವೈ, ಇದೇ ವೇಳೆ ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನ್ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.