ಗುರು ಪರಂಪರೆಗೆ ಹೊಸ ಭಾಷ್ಯ: ನಿವೃತ್ತರಾದ ನೆಚ್ಚಿನ ಶಿಕ್ಷಕನಿಗೆ ವಿಶಿಷ್ಟ ಗುರುದಕ್ಷಿಣೆ
ಬೆಳಗಾವಿ, ಸೆಪ್ಟೆಂಬರ್ 3: ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈ ಶ್ರೀ ಗುರುವೇ ನಮಃ ಎಂದು ಗುರುವನ್ನು ದೇವರ ರೂಪದಲ್ಲಿ ಕಾಣಲಾಗುತ್ತಿದೆ. ಹೀಗೆ ಅನೇಕರ ಬಾಳಿಗೆ ಬೆಳಕಾಗಿ ನಿವೃತ್ತಿ ಹೊಂದಿದ ಶಿಕ್ಷಕನಿಗೆ ತನ್ನ ಶಿಷ್ಯವೃಂದ ವಿಶಿಷ್ಟವಾಗಿ ಬೀಳ್ಕೊಡಲಾಗಿದೆ.
Recommended Video
ಹಳೇ ವಿದ್ಯಾರ್ಥಿಗಳೇ ಸೇರಿ ಹಣ ಸೇರಿಸಿ ನಿವೃತ್ತಿ ಹೊಂದಿದ ತಮ್ಮ ನೆಚ್ಚಿನ ಶಿಕ್ಷಕನಿಗೆ ಬೈಕ್ ನ್ನು ಕಾಣಿಕೆಯಾಗಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣ ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ.
ಶಿಕ್ಷಕರ ದಿನ: ಗುರುನಮನ ಸಲ್ಲಿಸಿದ ಟ್ವಿಟ್ಟಿಗರು
ಕಿತ್ತೂರು ಪಟ್ಟಣದ ಗುರುವಾರ ಪೇಟೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿ ನಿವೃತ್ತರಾದ ಎಂ.ಎಫ್ ಜಕಾತಿ ಅವರು ಶಿಷ್ಯ ವರ್ಗದಿಂದ ಈ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ.
ಗುರು ನಿವೃತ್ತಿಯಾದ ದಿನದಂದು ಇಲ್ಲಿಯ ಶಿಷ್ಯ ಬಳಗ ಸೇರಿ ಕಾರ್ಯಕ್ರಮ ಆಯೋಜಿಸಿ ಅದ್ಧೂರಿ ಬೀಳ್ಕೊಡುಗೆ ನೀಡಿದ್ದಾರೆ. ಮೂರು ದಶಕಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಜಕಾತಿ ಅವರು ವಿದ್ಯಾರ್ಥಿಗಳ ಪ್ರೀತಿ ಕಂಡು ಭಾವುಕರಾದರು.
ಅಲ್ಲದೇ ವಿದ್ಯಾರ್ಥಿಗಳು ಇದೇ ವೇಳೆ ಶಿಕ್ಷಕರಿಗೆ ಬುಲೆಟ್ ಬೈಕ್ ನೀಡಿ ನೀಡಿದರು. ಗುರುದಕ್ಷಿಣೆಯಾಗಿ ಬೈಕ್ ಸ್ವೀಕರಿಸಿದ ಶಿಕ್ಷಕ ಜಕಾತಿ ಖುಷಿಯಿಂದಲೇ ಶಾಲೆ ಆವರಣದಲ್ಲಿ ಒಂದು ರೌಂಡ್ ಹಾಕಿದರು.
ಸುಮಾರು ಮೂರು ದಶಕಗಳ ಕಾಲ ಶಿಕ್ಷಕ ವೃತ್ತಿಯನ್ನು ಮನಸಾರೆ ಪ್ರೀತಿಸಿದ, ಶಿಕ್ಷಕರ ಸಂಘಟನೆಯನ್ನು ಎತ್ತರಕ್ಕೆ ಕೊಂಡೊಯ್ದ, ತಾವು ಸೇವೆ ಮಾಡಿದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಿದ ಕೀರ್ತಿಗೆ ಜಕಾತಿ ಅವರು ಪಾತ್ರರಾಗಿದ್ದಾರೆ.
ಗುರು-ಶಿಷ್ಯ ಸಂಬಂಧ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಲಿ ಹಳೇ ವಿದ್ಯಾರ್ಥಿಗಳ ಈ ಗೌರವ ಇತರರಿಗೂ ಮಾದರಿಯಾಗಿದೆ. ಶಿಕ್ಷಕ ಜಕಾತಿ ಅವರ ನಿವೃತ್ತಿ ಜೀವನ ಸುಖಕರವಾಗಲಿ. ಆರೋಗ್ಯದ ಜೀವನ ತಮ್ಮದಾಗಲಿ, ಸಮಾಜಮುಖಿ ಕೆಲಸಗಳು ಅವರಿಂದ ಸಾಗಲಿ ಎಂದು ಅವರ ಶಿಷ್ಯ ಬಳಗವು ಶುಭ ಹಾರೈಸಿದೆ.