ಆಕ್ರೋಶ್ ದಿವಸ್ : ರಾಜ್ಯದಲ್ಲಿ ಸೋಮವಾರ ಅಧಿವೇಶನ ರದ್ದು
ಬೆಳಗಾವಿ. ನವೆಂಬರ್ 25: ಆಕ್ರೋಶ್ ದಿವಸ್ ಕಾರಣದಿಂದಾಗಿ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನವನ್ನು ಸೋಮವಾರ ರದ್ದುಗೊಳಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಸೋಮವಾರ ರಜೆಯ ನಷ್ಟ ತುಂಬಲು ಡಿ.3 ಶನಿವಾರವೂ ಅದಿವೇಶನ ನಡೆಸಲಿದೆ.
ವಿಧಾನ ಸಭೆಯ ಸ್ಪೀಕರ್ ಕೆ.ಬಿ.ಕೋಳಿವಾಡ ಈ ನಿರ್ದಾರವನ್ನು ಸಭೆಯಲ್ಲಿ ಪ್ರಕಟಿಸಿದ್ದು, ಆಕ್ರೋಶ್ ದಿವಸ್ ಬಗ್ಗೆ ಸೋಮವಾರದ ಬದಲಿಗೆ ಮುಂದಿನ ಶನಿವಾರ ಕಾರ್ಯನಿರ್ವಹಿಸುವ ಬಗ್ಗೆ ಸದಸ್ಯರ ಸಲಹೆ ಹಾಗು ಆಕ್ಷೇಪ ಗಳಿದ್ದಲ್ಲಿ ತಿಳಿಸಲು ಹೇಳಿದರು. ಅಧ್ಯಕ್ಷೀಯ ಅಧಿವೇಶನವು ನ.28 ಸೋಮವಾರದ ಬದಲಿಗೆ ಡಿ.3 ಕ್ಕೆ ಮುಂದೂಡಲಾಗಿದೆ ಎಂದು ಘೋಷಿಸಿದರು.
ಆದರೆ ಸದನದಲ್ಲಿ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸೋಮವಾರವೂ ಎರಡೂ ಸದನಗಳಲ್ಲಿ ಚರ್ಚೆ ಮುಂದುವರೆಯಬೇಕು ಎಂದು ಕೇಳಿಕೊಂಡರು. ಅಲ್ಲದೆ ಸ್ಪೀಕರ್ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದರು. ಕೋಳಿವಾಡ ಅವರು ಘೋಷಿಸಿದ ನಿರ್ಧಾರ ಶುಕ್ರವಾರ ಸದನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದಗಳು ನಡೆದವು.