ನಾಮಪತ್ರ ವಾಪಸ್ ಪಡೆದು ಕಣ್ಣೀರಿಟ್ಟ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ
ಬೆಳಗಾವಿ, ನವೆಂಬರ್ 21: ಉಪಚುನಾವಣೆ ಕಣದಲ್ಲಿದ್ದ ಅಭ್ಯರ್ಥಿ ಪಕ್ಷದ ಒತ್ತಡದಿಂದಾಗಿ ನಾಮಪತ್ರ ವಾಪಸ್ ಪಡೆಯುತ್ತಾ ಕಣ್ಣೀರಿಟ್ಟ ಘಟನೆ ಅಥಣಿಯಲ್ಲಿ ನಡೆಯಿತು.
ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ್ ನಾಮಪತ್ರ ಸಲ್ಲಿಸಿದ್ದರು. ಆದರೆ ಇಂದು ನಾಮಪತ್ರವನ್ನು ವಾಪಸ್ ಪಡೆದರು. ನಾಮಪತ್ರ ವಾಪಸ್ ಪಡೆವಾಗ ಅವರು ಕಣ್ಣೀರು ಹಾಕಿದರು.
ಫಲಕೊಟ್ಟ ಲಕ್ಷ್ಮಣ ಸವದಿ ಸಂಧಾನ; ಜೆಡಿಎಸ್ಗೆ ಹಿನ್ನಡೆ!
ಅಳುತ್ತಲೇ ಮಾಧ್ಯಮಗಳ ಮುಂದೆ ಮಾತನಾಡಿದ ಶಹಜಹಾನ್ ಡೊಂಗರಗಾಂವ್, 'ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನಿದ್ದೇನೆ. ಒಂದು ಕಡೆ ಪಕ್ಷ, ಒಂದು ನನ್ನನ್ನು ನಂಬಿದ ಜನ' ಎಂದು ಬಿಕ್ಕಿ-ಬಿಕ್ಕಿ ಅತ್ತರು.
'ನಾಮಪತ್ರ ವಾಪಸ್ ಪಡೆಯುವಂತೆ ನನಗೆ ಬಹಳ ಒತ್ತಡ ಬಂದಿದೆ. ಪಕ್ಷದ ಹಿರಿಯರು ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ. ಕ್ಷೇತ್ರ ಹಾಗೂ ಪಕ್ಷದ ಹಿತದೃಷ್ಠಿಯಿಂದಾಗಿ ನಾನು ನಾಮಪತ್ರ ವಾಪಸ್ ಪಡೆಯುತ್ತಿದ್ದೇನೆ' ಎಂದು ಅವರು ಹೇಳಿದ್ದಾರೆ.
"ರಮೇಶ್ ಸೋಲಿಸುವುದಕ್ಕಿಂತ ಅಶೋಕ ಪೂಜಾರಿ ಗೆಲ್ಲಿಸುವುದೇ ನನ್ನ ಹೋರಾಟ"
'ನಾನು ಕಾಂಗ್ರೆಸ್ ಅಭ್ಯರ್ಥಿ ಆಗಬೇಕು ಎಂಬುದು ಜನರ ಆಸೆಯಾಗಿತ್ತು, ಹಾಗಾಗಿ ನಾಮಪತ್ರ ಸಲ್ಲಿಸಿದ್ದೆ ಆದರೆ ಕಾಂಗ್ರೆಸ್ ಪಕ್ಷದ ಹಿರಿಯರು ನಾಮಪತ್ರ ವಾಪಸ್ ಪಡೆಯುವಂತೆ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ನೀಡಿರುವ ಕೊಡುಗೆ ದೊಡ್ಡದು, ಪಕ್ಷಕ್ಕೆ ಗೌರವ ನೀಡಿ ನಾಮಪತ್ರ ವಾಪಸ್ ಪಡೆಯುತ್ತಿದ್ದೇನೆ' ಎಂದರು.
ಅಥಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ 'ಅನರ್ಹ' ಮಹೇಶ್ ಕುಮಟಳ್ಳಿ ಸ್ಪರ್ಧೆ ಮಾಡಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಗಜಾನನ ಮಂಗಸುಳಿ ಸ್ಪರ್ಧಿಸಿದ್ದಾರೆ. ಜೆಡಿಎಸ್ನಿಂದ ಗುರಪ್ಪ ಶಿವಲಿಂಗ ದಾಸ್ಯಾಳ ಸ್ಪರ್ಧಿಸಿದ್ದಾರೆ.