ಬೆಳಗಾವಿಯಲ್ಲಿ ರಫ್ತು ವಹಿವಾಟು ಕಚೇರಿ ಸ್ಥಾಪನೆ
ಬೆಳಗಾವಿ, ಆಗಸ್ಟ್, 21: ಇನ್ನು ಮುಂದೆ ಬೆಳಗಾವಿಯಲ್ಲಿ ಬೆಳೆದ ತರಕಾರಿ ನೇರವಾಗಿ ದುಬೈಗೆ ತೆರಳುತ್ತದೆ. ಹೌದು..ಇಂಥದ್ದೊಂದು ಕಾಲ ಬಂದರೆ ಹೇಗಿರುತ್ತದೆ? ಎಂಬ ಆಲೋಚನೆಗೆ ಕೇಂದ್ರ ಸರ್ಕಾರ ಸ್ಪಂದನೆ ನೀಡಿದೆ.
ಬೆಳಗಾವಿಯಲ್ಲಿ ರಫ್ತು ವಹಿವಾಟು ಕಚೇರಿ ಸ್ಥಾಪನೆ ಮಾಡಿ, ರೈತರು ಮತ್ತು ಉದ್ಯಮಿಗಳಿಗೆ ಉತ್ತೇಜನ ನೀಡಲಾಗುವುದು ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.[ಸುಡುಗಾಡು ಬಾಲ್ಯವಿವಾಹ ಮೆಟ್ಟಿನಿಂತ ಬೆಳಗಾವಿ ಹುಡುಗಿ ತುಳಸಿ]
ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ 'ದೇಶಭಕ್ತಿ-ತಿರಂಗಾ ಯಾತ್ರೆ ಅಭಿಯಾನ' ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ, ರಾಜ್ಯ ಸರ್ಕಾರ ಜಾಗ ಕೊಟ್ಟರೆ ಅಥವಾ ಬಾಡಿಗೆ ಕಟ್ಟಡದಲ್ಲಿಯಾದರೂ ರಫ್ತು ಕಚೇರಿ ಆರಂಭಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು. ರಫ್ತು ವಹಿವಾಟು ಮಾರ್ಗದರ್ಶನ, ಪ್ರೋತ್ಸಾಹದಾಯಕ ಕಾರ್ಯಕ್ರಮಗಳ ಮೂಲಕ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
ಬೆಳಗಾವಿ ಸುತ್ತಮುತ್ತ ಹಣ್ಣು ಹಾಗೂ ತರಕಾರಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಕೃಷಿ ಉತ್ಪನ್ನಗಳನ್ನು ವಿಮಾನದ ಮೂಲಕ ವಿದೇಶಕ್ಕೆ ಕಳುಹಿಸುವ ಕುರಿತು ಕ್ರಮ ಕೈಗೊಳ್ಳಬೇಕು ಎಂಬ ಮಾತು ಕೇಳಿ ಬಂದಿದ್ದು ಕೇಂದ್ರ ಕೃಷಿ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದರು.[ಹುಕ್ಕೇರಿ: ಅರಳಬೇಕಿದ್ದ ಜೀವಗಳ ಬಲಿ ಪಡೆದ ಶಾಲೆಯ ಗೋಡೆ]
ನಂತರ ಮಾತನಾಡಿದ ಸಂಸದ ಸುರೇಶ ಅಂಗಡಿ, ವಿಮಾನ ಬಿಡಿಭಾಗಗಳ ತಯಾರಿಕೆ ಸಹ ಬೆಳಗಾವಿಯಲ್ಲಿ ನಡೆಯುತ್ತಿದೆ. ಹೀಗಾಗಿ ಇಲ್ಲಿ ರಫ್ತು ವಹಿವಾಟು ಕಚೇರಿ ಆರಂಭಿಸುವುದರಿಂದ, ಉದ್ಯಮಿಗಳು ಮತ್ತು ರೈತರಿಗೆ ನೆರವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.