ವಿಧಾನ ಪರಿಷತ್ ನಲ್ಲಿ ಗಮನ ಸೆಳೆದ ಇಲಿ - ಹುಲಿ ಚರ್ಚೆ
ಬೆಳಗಾವಿ, ನವೆಂಬರ್ 13: ನಗರದಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಕಲಾಪದಲ್ಲಿ ಇಂದು ನಡೆದ ಇಲಿ - ಹುಲಿ ಚರ್ಚೆ ಗಮನ ಸೆಳೆಯಿತು.
ಈ ಇಲಿ - ಹುಲಿ ಚರ್ಚೆ ಆರಂಭವಾಗಿದ್ದು ಹೀಗೆ..
ಡಿವೈಎಸ್ಪಿ ಎಂಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜ್ ರಾಜೀನಾಮೆ ಬಗ್ಗೆ ವಿಧಾನ ಪರಿಷತ್ ನಲ್ಲಿ ಚರ್ಚೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಜಾರ್ಜ್ ರನ್ನು ಪ್ರಭಾವಿ ಎಂದು ಬಿಜೆಪಿಯ ಸುನೀಲ್ ಸುಬ್ರಮಣ್ಯ ಸಂಬೋಧಿಸಿದರು. ಆಗ ಎದ್ದು ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ "ಹಾಗಾದ್ರೆ ನೀವು ಪ್ರಭಾವಿ ಅಲ್ವಾ?" ಎಂದು ಮರು ಪ್ರಶ್ನೆ ಹಾಕಿದರು.
ತಕ್ಷಣ ತಮ್ಮ ಶಾಸಕನ ಬೆಂಬಲಕ್ಕೆ ಧಾವಿಸಿದ ಈಶ್ವರಪ್ಪ, "ಪಾಪ ಅವರು ಹೊಸ ಶಾಸಕ. ಇಲಿ ಮೇಲೆ ಯಾಕೆ ಹುಲಿ ಥರಾ ಬೀಳುತ್ತಿದ್ದೀರಾ," ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಾಸ್ಯ ಚಟಾಕಿಗಳಿಗೆ ಹೆಸರುವಾಸಿಯಾಗಿರುವ ಸಿಎಂ ತಕ್ಷಣ "ನೋಡಿ ಶಾಸಕರನ್ನು ಈಶ್ವರಪ್ಪ ಇಲಿ ಅಂತಿದ್ದಾರೆ," ಅಂತಾ ಕಾಲೆಳೆದರು.
"ಹಾಗಾದ್ರೆ ನೀವು ಹುಲಿಯಾ?" ಅಂತಾ ಈಶ್ವರಪ್ಪ ಅಷ್ಟೇ ವೇಗವಾಗಿ ತೀಕ್ಷ್ಣ ಪ್ರಶ್ನೆ ಎಸೆದರು.
ಆಗ ಗಂಭೀರ ಹೇಳಿಕೆ ನೀಡಿದ ಸಿಎಂ, "ನಾನು ಹುಲಿಯೂ ಅಲ್ಲ. ಇಲಿಯೂ ಅಲ್ಲ. ಮಾನವೀಯ ಮೌಲ್ಯಗಳನ್ನು ಗೌರವಿಸುವ ಮನುಷ್ಯ," ಎಂದು ಉತ್ತರಿಸಿದರು. ಅಲ್ಲಿಂದ ಚರ್ಚೆ ಮತ್ತೆ ಮುಖ್ಯ ವಿಷಯದತ್ತ ಹೊರಳಿತು.