ಮುಖಕ್ಕೆ ಮಸಿ ಬಳಿಸಿಕೊಂಡಿದ್ದವನಿಗೆ ಬಿಜೆಪಿ ಮಣೆ
ಬೆಳಗಾವಿ, ನವೆಂಬರ್ 21 : ಚುನಾವಣೆಯನ್ನು ಗೆಲ್ಲಲೇ ಬೇಕೆಂದು ಹಠ ತೊಟ್ಟಿರುವ ಬಿಜೆಪಿ ತಮ್ಮ ಕಾರ್ಯಕರ್ತರ, ಮುಖಂಡರ ಸಂಖ್ಯೆ ಹೆಚ್ಚುಮಾಡಿಕೊಳ್ಳಲು ಸಿಕ್ಕ ಸಿಕ್ಕವರನ್ನೆಲ್ಲಾ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಇದಕ್ಕೆ ತಾಜಾ ಉದಾಹರಣೆ ನಾಡದ್ರೋಹಿ ಬೆಳಗಾವಿಯ ಶಿವಾಜಿ ಸುಂಟಕರ ಅವರನ್ನು ರಾಜ್ಯ ಬಿಜೆಪಿ ಮುಖಂಡರೇ ಹೂಗುಚ್ಛ ನೀಡಿ ಪಕ್ಷಕ್ಕೆ ಸ್ವಾಗತಿಸಿರುವುದು.
ಪಕ್ಷದ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಭರದಲ್ಲಿ ಬಿಜೆಪಿ ಅಭ್ಯರ್ಥಿಯ ಹಿನ್ನೆಲೆ ಕೂಡ ನೋಡದೆ ಪಕ್ಷಕ್ಕೆ ಸೇರಿಸಿಕೊಂಡು ಮುಜುಗರಕ್ಕೆ ಒಳಗಾಗುತ್ತಿದೆ. ಇದೀಗ ನಾಡವಿರೋಧಿ ಎಂಇಎಸ್ ನಾಯಕನಿಗೆ ಮಣೆ ಹಾಕಿ ರಾಜ್ಯದ ಜನರ ಕೈಲಿ, ವಿಶೇಷವಾಗಿ ಬೆಳಗಾವಿಯ ಬಿಜೆಪಿ ಕಾರ್ಯಕರ್ತರ ಕೈಯಲ್ಲಿಯೇ ಸರಿಯಾಗಿ ತಪರಾಕಿ ಹಾಕಿಸಿಕೊಳ್ಳುತ್ತಿದೆ ರಾಜ್ಯ ಬಿಜೆಪಿ.
ಈ ಹಿಂದೆ ಬೆಳಗಾವಿ ಪಾಲಿಕೆಯ ಉಪಮೇಯರ್ ಆಗಿದ್ದಾಗ ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಒತ್ತಾಯ ಮಾಡಿ ಠೆರಾವ್ ಹೊರಡಿಸಿದ್ದ ಎಂಇಎಸ್ ಮುಖಂಡ ಶಿವಾಜಿ ಸುಂಟಕರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ರಾಜ್ಯ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ ಸಮ್ಮುಖದಲ್ಲಿ ಶಿವಾಜಿ ಸುಂಟಕರ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರಿಕೊಂಡಿದ್ದಾರೆ.
ಎಂಇಎಸ್ ಪಕ್ಷದಲ್ಲಿನ ಒಳಜಗಳದಿಂದ ಬೇಸತ್ತು ಬಿಜೆಪಿ ಸೇರಿರುವುದಾಗಿ ಅವರು ಹೇಳಿದ್ದಾರೆ.
ಈ ಹಿಂದೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಠರಾವು ಹೊರಡಿಸಿದ್ದರಿಂದ ಶಿವಾಜಿ ಸುಂಟಕರ್ ಮುಖಕ್ಕೆ ಬೆಂಗಳೂರಲ್ಲಿ ಕನ್ನಡಪರ ಸಂಘಟನೆಗಳು ಮಸಿ ಬಳಿದಿದ್ದವು.