ಬೆಳಗಾವಿಯ ಮೊದಲ ಕನ್ನಡ ಮೇಯರ್ ನಿಧನ: ಸಚಿವ ಜಾರಕಿಹೊಳಿ ಕಂಬನಿ
ಬೆಳಗಾವಿ, ಆಗಸ್ಟ್ 26: ನಾಡದ್ರೋಹಿ ಎಂಇಎಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಹಾಗೂ ಬೆಳಗಾವಿಯ ಮೊದಲ ಕನ್ನಡ ಭಾಷಿಕ ಮೇಯರ್ ಎಂಬ ಕೀರ್ತಿ ಹೊಂದಿದ್ದ ಸಿದ್ಧನಗೌಡ ಪಾಟೀಲ (87) ಅವರು ಶಿವಬಸವ ನಗರದಲ್ಲಿ ಇಂದು ನಿಧನರಾದರು.
ಗಡಿ ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಅವರು ನಾಡು, ನುಡಿ, ಜಲಕ್ಕಾಗಿ ಜೀವನದುದ್ದಕ್ಕೂ ಹೋರಾಟ ಮಾಡಿದ್ದರು. ಬುಧವಾರ ಮಧ್ಯಾಹ್ನ 3ಕ್ಕೆ ಬೈಲಹೊಂಗಲ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಸಿದ್ಧನಗೌಡ ಪಾಟೀಲರ ಅಂತ್ಯಕ್ರಿಯೆ ನೆರವೇರಲಿದೆ.
ಮಲಪ್ರಭಾ ನದಿ ಪಾತ್ರದಲ್ಲಿ ಒತ್ತುವರಿಯಾಗಿದೆ; ಸಚಿವ ರಮೇಶ್ ಜಾರಕಿಹೊಳಿ
ನಾಡು ನುಡಿಗಾಗಿ ಸಲ್ಲಿಸಿದ ಸೇವೆಗೆ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳಿಗೆ ಬೆಳಗಾವಿ ಮಾಜಿ ಮೇಯರ್ ಸಿದ್ಧನಗೌಡ ಪಾಟೀಲ ಅವರು ಭಾಜನರಾಗಿದ್ದಾರೆ.
1956 ರಿಂದಲೂ ಕನ್ನಡ ಹೋರಾಟದ ಮುಂಚೂಣಿಯಲ್ಲಿದ್ದ ಅವರು, 1984 ರಲ್ಲಿ ಬೆಳಗಾವಿ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾದರು. 1990 ರಲ್ಲಿ ಮತ್ತೆ ಪುನರಾಯ್ಕೆಗೊಂಡು 1991 ರಲ್ಲಿ ಪ್ರಥಮ ಕನ್ನಡ ಮಹಾಪೌರರಾಗಿ ಆಯ್ಕೆಗೊಂಡರು.
ಸಿದ್ಧನಗೌಡ ಪಾಟೀಲ ಅವರ ನಿಧನಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಕಂಬನಿ ಮಿಡಿದಿದ್ದು, ಬೆಳಗಾವಿ ನಗರ ಪಾಲಿಕೆಯ ಪ್ರಥಮ ಕನ್ನಡ ಭಾಷಿಕ ಮಹಾಪೌರರಾಗಿದ್ದ ಸಿದ್ದನಗೌಡ ಪಾಟೀಲ್ ಅವರ ನಿಧನ ವೈಯಕ್ತಿಕವಾಗಿ ನನಗೆ ತುಂಬಾ ನಷ್ಟ ಉಂಟುಮಾಡಿದೆ ಎಂದರು.
ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಕನ್ನಡ ಭಾಷೆಯ ಹೋರಾಟದ ಮುಂಚೂಣಿ ನಾಯಕರಾಗಿದ್ದರು. 1991 ರಲ್ಲಿ ಪ್ರಥಮ ಕನ್ನಡ ಭಾಷಿಕ ಮಹಾಪೌರರಾಗಿ, ಗ್ರಾಹಕರ ಮಹಾಮಂಡಳಿಯ ಅಧ್ಯಕ್ಷರಾಗಿ, ಕನ್ನಡ ನಾಡು, ನುಡಿ ಮತ್ತು ಗಡಿ ಹೋರಾಟದ ಅಗ್ರಗಣ್ಯ ನಾಯಕರಾಗಿದ್ದರು ಮತ್ತು ವೈಯಕ್ತಿಕವಾಗಿ ನನಗೆ ಮಾರ್ಗದರ್ಶಕರಾಗಿದ್ದರು ಎಂದು ಸಚಿವ ಜಾರಕೊಹೊಳಿ ತಿಳಿಸಿದರು.
ಸಿದ್ದನಗೌಡ ಪಾಟೀಲ್ ರನ್ನು ಕಳೆದುಕೊಂಡ ನಮಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ, ಕನ್ನಡ ಭಾಷಿಕ ಹೋರಾಟಗಾರರಿಗೆ ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಶೋಕ ವ್ಯಕ್ತಪಡಿಸಿದ್ದಾರೆ.