ಧರ್ಮಸ್ಥಳ, ಇಸ್ಕಾನ್ನಲ್ಲಿ ಹೊಸ ವರ್ಷಾಚರಣೆಗೆ ಪ್ರಮೋದ್ ಮುತಾಲಿಕ್ ಗರಂ
ಬೆಳಗಾವಿ, ಜನವರಿ 9: ಧರ್ಮಸ್ಥಳ ಹಾಗೂ ಬೆಂಗಳೂರಿನ ಇಸ್ಕಾನ್ನಲ್ಲಿ ಹೊಸ ವರ್ಷಾಚರಣೆ ಮಾಡಿದ್ದಕ್ಕೆ ಬೆಳಗಾವಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನವರಿ ಒಂದು ಹೊಸ ವರ್ಷ ಎಂಬುದು ಅವೈಜ್ಞಾನಿಕವಾಗಿದ್ದು, ಶಾಸ್ತ್ರೋಕ್ತವಾಗಿ ಯುಗಾದಿಯಂದು ಹೊಸ ವರ್ಷ ಆಚರಣೆ ಮಾಡುತ್ತಾ ಬಂದಿದ್ದೇವೆ. ನಮ್ಮ ರಾಜ್ಯದ ದೇವಸ್ಥಾನಗಳಲ್ಲಿ ಜನವರಿ 1ರಂದು ಹೊಸ ವರ್ಷಾಚರಣೆ ಮಾಡುತ್ತಿರುವುದು ದುರ್ದೈವ ಎಂದು ಹೇಳಿದರು.
ಧರ್ಮಸ್ಥಳದಂತ ಪವಿತ್ರ ಕ್ಷೇತ್ರದಲ್ಲಿ ನ್ಯೂ ಇಯರ್ಗಾಗಿ ಅಲಂಕಾರ ಮಾಡುತ್ತಾರೆ. ನ್ಯೂ ಇಯರ್ಗಾಗಿ ಇನ್ವೈಟ್ ಮಾಡ್ತಾರೆ, ಆಚರಣೆ ಮಾಡ್ತಾರೆ ಇದು ನೋವಿನ ಸಂಗತಿ. ಇಸ್ಕಾನ್ ಕೃಷ್ಣನ ಪವಿತ್ರ ದೇವಸ್ಥಾನ, ಅಲ್ಲಿಯೂ ನ್ಯೂ ಇಯರ್ ಆಚರಣೆ ಮಾಡಿದ್ದಾರೆ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದ ಪ್ರಮೋದ್ ಮುತಾಲಿಕ್ ತಿಳಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರು ಇದನ್ನು ವಾಪಸ್ ಪಡೆಯಬೇಕು, ಇಸ್ಕಾನ್ನವರೂ ಹೊಸ ವರ್ಷಾಚರಣೆಯನ್ನು ವಾಪಸ್ ಪಡೆಯಬೇಕು. ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಹಿಂದೂಗಳು ಆರಾಧನೆ ಮಾಡುವ ದೇವಸ್ಥಾನದಲ್ಲಿ ಕ್ರಿಶ್ಚಿಯನ್ ಆಚರಣೆ ಮಾಡ್ತೀರಾ? ಒಂದೆಡೆ ನಾವು ಮತಾಂತರವನ್ನು ವಿರೋಧ ಮಾಡುತ್ತಿದ್ದೇವೆ. ಮತಾಂತರ ವಿರೋಧಿ ಕಾಯ್ದೆಗಳು ಬರುವ ಪ್ರಕ್ರಿಯೆ ನಡೆಯುತ್ತಿವೆ ಎಂದರು.
ಕನ್ನಡದ ಧ್ವಜ; ಎಂಇಎಸ್ಗೆ ಎಚ್ಚರಿಕೆ ನೀಡಿದ ಲಕ್ಷ್ಮಣ ಸವದಿ
ಗೋವಾದಲ್ಲಿ 460 ದೇಗುಲಗಳನ್ನು ಕ್ರಿಶ್ಚಿಯನ್ರು, ಪೋರ್ಚುಗೀಸ್ರು ಒಡೆದಿದ್ದಾರೆ. ಇಂದಿಗೂ ಈ ಬಗ್ಗೆ ದಾಖಲೆಗಳು ಇವೆ. ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ ವೇಷಾನೇ ಹಾಕಿಕೊಂಡಿದ್ದಾರೆ. ಇವರಿಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.
ಹಿಂದೂತ್ವಕ್ಕೆ ಹೋರಾಟ ಮಾಡಿ ನಾವು ಜೈಲು, ಕೇಸ್ ಅಂತಾ ಅನುಭವಿಸುವುದು, ನೀವು ಈ ರೀತಿ ನ್ಯೂ ಇಯರ್ ಅಂತಾ ಮೆರೆಯಾದಾ? ನೀವು ಮತಾಂತರಕ್ಕೆ ಪ್ರೇರಣೆ ಕೊಡುತ್ತಿದೀರಾ, ಇದನ್ನೇ ಪಾದ್ರಿಗಳು ಹಿಡಿದುಕೊಂಡು ಹೋಗುತ್ತಿದ್ದಾರೆ ಬೆಳಗಾವಿಯಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.