ಬೆಳಗಾವಿ: ಶಿವಸೇನೆಯವರಿಗೆ ಬೇರೇನೂ ಕೆಲ್ಸ ಇಲ್ವಾ?
ಮುಂಬೈ, ಬೆಳಗಾವಿ, ನ 5: ಬಿಜೆಪಿ ಜೊತೆ ಅಸೆಂಬ್ಲಿ ಚುನಾವಣೆಗೆ ಹೊಂದಾಣಿಕೆ ಮಾಡಿಕೊಳ್ಳದೇ ಅಂಡುಸುಟ್ಟ ಬೆಕ್ಕಿನಂತಾಗಿರುವ ಶಿವಸೇನೆ ಈಗ ಮತ್ತೆ ಕರ್ನಾಟಕದ ತಂಟೆಗೆ ಬಂದಿದೆ.
ಬೆಳಗಾಂ ಅನ್ನು ಬೆಳಗಾವಿ ಮಾಡಿರೋದಕ್ಕೆ ವಿರೋಧ ವ್ಯಕ್ತ ಪಡಿಸಿರುವ ಶಿವಸೇನೆ, ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದಿದ್ದು, ಜೊತೆಗೆ ತನ್ನ ಮುಖವಾಣಿ ಪತ್ರಿಕೆಯ ಸಂಪಾದಕೀಯದಲ್ಲೂ ಲೇಖನ ಬರೆದಿದೆ.
ಮುಖ್ಯಮಂತ್ರಿಯಾಗಿ ನೀವು ಪ್ರಮಾಣವಚನ ಸ್ವೀಕರಿಸಿದಾಗ ಮರಾಠಿಗರ ಹಿತ ರಕ್ಷಿಸುತ್ತೇನೆಂದು ಪ್ರಮಾಣ ಸ್ವೀಕರಿಸಿದ್ದೀರಿ. ಅತ್ತ ಕರ್ನಾಟಕ ಸರಕಾರ ಬೆಳಗಾಂ ಅನ್ನು ಬೆಳಗಾವಿ ಎಂದು ಮರು ನಾಮಕರಣ ಮಾಡಿದೆ. (ಬೇಗುದಿಯಲ್ಲಿ ಬಿಜೆಪಿ, ಶಿವಸೇನೆ; ಬಾಗುವವರಾರು)
ಪ್ರಮಾಣವಚನ ಸ್ವೀಕರಿಸಿದಂತೆ ನೀವು ನಡೆದುಕೊಳ್ಳಬೇಕು. ಮೊದಲು ಕರ್ನಾಟಕ ಸರಕಾರದ ಆದೇಶವನ್ನು ತಡೆ ಹಿಡಿಯಿರಿ ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಲೇಖನ ಬರೆಯಲಾಗಿದೆ.
ಮರಾಠಿಗರ ವಿಚಾರವೆಂದರೆ ಅದು ಬರೀ ಮಹಾರಾಷ್ಟ್ರವಲ್ಲ, ಅದು ವಿಶ್ವದೆಲ್ಲಡೆ ಇರುವ ಮರಾಠಿಗರದ್ದು. ನಮ್ಮವರಿಗೆ ತೊಂದರೆಯಾದರೆ ಮಹಾ ಸರಕಾರ ಅವರ ಬೆಂಬಲಕ್ಕೆ ನಿಲ್ಲಬೇಕು.
ಅದು ಮಹಾರಾಷ್ಟ್ರವಾಗಲಿ, ಕರ್ನಾಟಕವಾಗಲಿ ಅಥವಾ ವಿಶ್ವದ ಬೇರೆ ಯಾವುದೇ ಭಾಗವಾಗಲಿ. ಮರಾಠಿಗರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವವರನ್ನು ಸುಮ್ಮನೆ ಬಿಡಬಾರದು ಎಂದು ಶಿವಸೇನೆ ಪ್ರಮುಖ ಉದ್ಭವ್ ಠಾಕ್ರೆ ಸಾಮ್ನಾ ಪತ್ರಿಕೆಯಲ್ಲಿ ಸಂಪಾದಕೀಯ ಲೇಖನ ಬರೆದಿದ್ದಾರೆ.
ಇನ್ನೊಂದೆಡೆ ಬೆಳಗಾವಿಯಲ್ಲಿ, ಕರ್ನಾಟಕ ರಾಜ್ಯೋತ್ಸವದ ದಿನವಾದ ನವೆಂಬರ್ ಒಂದನ್ನು ಕರಾಳ ದಿನವನ್ನಾಗಿ ಆಚರಿಸಲು ಎಂಇಎಸ್ ಕರೆ ನೀಡಿತ್ತು. ಅದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಮತ್ತು ಕೆಲವು ಬೆಳಗಾವಿ ಮಹಾನಗರಪಾಲಿಕೆಯ ಮರಾಠಿ ಕಾರ್ಪೋರೇಟರ್ ಗಳೂ ಎಂಇಎಸ್ ಕರೆಗೆ ಬೆಂಬಲ ನೀಡಿರಲಿಲ್ಲ.
ಇದರಿಂದ ಕೆರಳಿದ ಎಂಇಎಸ್ ಈಗ ಬಲವಂತವಾಗಿ ಕಾರ್ಪೋರೇಟರ್ ಗಳಿಂದ ಕ್ಷಮಾಪಣಾ ಪತ್ರವನ್ನು ಬರೆಸಿಕೊಳ್ಳುತ್ತಿದೆ. ಇದಲ್ಲದೇ, ನಗರದ ಹೆಸರನ್ನು ಮರುನಾಮಕರಣ ಮಾಡಿರುವುದರ ವಿರುದ್ದ ಕಾರ್ಪೋರೇಟರ್ ಗಳಿಂದ ಪತ್ರವನ್ನು ಬರೆಸಿಕೊಳ್ಳುತ್ತಿದ್ದು, ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲು ಸಿದ್ದವಾಗಿದೆ.