ಬೆಳಗಾವಿ ಕೊಲೆ ಪ್ರಕರಣ: ಯುವತಿಯ ಮನೆಯವರಿಂದ ಕೃತ್ಯ, 10 ಮಂದಿಯ ಬಂಧನ
ಬೆಳಗಾವಿ, ಅಕ್ಟೋಬರ್ 08: ಬೆಳಗಾವಿ ಅರ್ಬಾಜ್ ಕೊಲೆ ಪ್ರಕರಣ ಬೆಳಗಾವಿ ಜಿಲ್ಲೆಯ ಪೊಲೀಸರು ಹತ್ತು ಮಂದಿಯನ್ನು ಬಂಧನ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರಲ್ಲಿ ಅರ್ಬಾಜ್ಪ್ರೀತಿಸುತ್ತಿದ್ದ ಹಿಂದೂ ಯುವತಿಯ ಪೋಷಕರು ಕೂಡಾ ಸೇರಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು, "ಅರ್ಬಾಜ್ ಮುಲ್ಲಾನ ಕೊಲೆ ಪ್ರಕರಣದಲ್ಲಿ ಅರ್ಬಾಜ್ ನ ಪ್ರೇಯಿಸಿಯ ಪೋಷಕರು ಕೂಡಾ ಭಾಗಿಯಾಗಿದ್ದಾರೆ. ಅರ್ಬಾಜ್ ನನ್ನು ಕೊಲೆ ಮಾಡಲು ಪೋಷಕರು ಸುಪಾರಿ ನೀಡಿದ್ದರು," ಎಂದು ತಿಳಿಸಿದ್ದಾರೆ.
'ಬಿರಿಯಾನಿ ತಾ, ಜೊತೆಗೆ ತಿನ್ನುವ': ಮಗನ ಕೊನೆಯ ಮಾತು ನೆನೆದು ಬಿಕ್ಕಳಿಸಿದ ಬೆಳಗಾವಿಯ ಅರ್ಬಾಸ್ನ ತಾಯಿ
ಬಂಧಿತರನ್ನು ಪುಂಡಲೀಕ ಮಹಾರಾಜ್ (39), ಕುತಾಬುದ್ಧೀನ್ ಅಲ್ಲಾಹ್ಬಕ್ಷ (36), ಸುಶೀಲಾ ಈರಪ್ಪ (42), ಮಾರುತಿ ಪ್ರಹ್ಲಾದ್ (30), ಮಂಜುನಾಥ ತುಕರಾಮ್ (25), ಗಣಪತಿ ಜ್ಞಾನೇಶ್ವರ (27), ಈರಪ್ಪ ಬಸವಣ್ಣಿ ಕುಂಬಾರ (54), ಪ್ರಶಾಂತ್ ಕಲ್ಲಪ್ಪ (28), ಪ್ರವೀಣ್ ಶಂಕರ್ (28) ಹಾಗೂ ಶ್ರೀಧರ್ ಮಹಾದೇವ ದೋಣಿ ಗುರುತಿಸಲಾಗಿದೆ.
24 ವರ್ಷದ ಅರ್ಬಾಜ್ ಮುಲ್ಲಾ ಬೆಳವಾಗಿವ ಅಜಾಮ್ ನಗರದಲ್ಲಿ ಸಿವಿಲ್ ಇಂಜಿನಿಯರಿಂಗ್ ಮಾಡಿದ್ದು, ಬೆಳಗಾವಿ ನಗರದಲ್ಲಿ ಕಾರಿನ ಡೀಲರ್ ಆಗಿ ಕೆಲಸ ಮಾಡುತ್ತಿದ್ದ. ಸೆಪ್ಟೆಂಬರ್ 27 ರಂದು ಸಂಜೆ ಸುಮಾರು 7 ಗಂಟೆಯ ಬಳಿಕ ಅರ್ಬಾಜ್ ಮುಲ್ಲಾ ನಾಪತ್ತೆಯಾಗಿದ್ದು, ಸೆಪ್ಟೆಂಬರ್ 28 ರಂದು ಅರ್ಬಾಜ್ ಮುಲ್ಲಾನ ಮೃತ ದೇಹ ರೈಲ್ವೇ ಹಳಿಯ ಮೇಲೆ ಪತ್ತೆಯಾಗಿತ್ತು. ಆ ಬಳಿಕ ಆತನ ತಾಯಿ ನಾಜಿಮಾ ಶೇಖ್ ಇದು ಕೊಲೆ, ಆತನಿಗೆ ಹಿಂದೂ ಯುವತಿಯೊಂದಿಗೆ ಪ್ರೀತಿಯಿದ್ದ ಕಾರಣಕ್ಕೆ ಈ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದರು. ಇದರ ಹಿಂದೆ ಪುಂಡಲೀಕ ಮಹಾರಾಜ್, ಪ್ರಶಾಂತ್ ಬಿರ್ಜೆ ವಿರುದ್ಧವೂ ಆರೋಪವನ್ನು ಮಾಡಿದ್ದರು.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, "ಈರಪ್ಪ ಹಾಗೂ ಸುಶೀಲಾ ಈರಪ್ಪ ಅರ್ಬಾಜ್ ನ ಪ್ರೇಯಸಿಯ ತಂದೆ, ತಾಯಿ ಆಗಿದ್ದಾರೆ. ಇವರು ಅರ್ಬಾಜ್ ನ ಕೊಲೆಗೆ ಸುಪಾರಿ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಬಂಧನ ಮಾಡಲಾಗಿದೆ. ಅರ್ಬಾಜ್ ನ ಕೊಲೆ ಮಾಡಿದ ತಂಡದ ನೇತೃತ್ವವನ್ನು ಪುಂಡಲೀಕ ವಹಿಸಿದ್ದ," ಎಂದು ಮಾಹಿತಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈ ಹಿಂದೆ ಶ್ರೀ ರಾಮ ಸೇನೆ ಹಿಂದೂಸ್ತಾನದ ಇಬ್ಬರು ಕಾರ್ಯಕರ್ತರ ವಿಚಾರಣೆಯನ್ನು ನಡೆಸಿದ್ದರು. ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ರ ಸಂಘಟನೆ ಇದಾಗಿದ್ದು, ಈ ಸಂಘಟನೆಯ ಪುಂಡಲಿಕ್ ಹಾಗೂ ಪ್ರಶಾಂತ್ ಬಿರ್ಜೆರ ವಿಚಾರಣೆ ನಡೆಸಲಾಗಿತ್ತು. ಈ ಹಿಂದೆಯೇ ಶ್ರೀ ರಾಮ ಸೇನೆ ಹಿಂದೂಸ್ತಾನದ ಮುಖ್ಯಸ್ಥ ರಾಮಕಾಂತ ಈ ಪ್ರಕರಣದಲ್ಲಿ ತಮ್ಮ ಸಂಘಟನೆಯ ಕೈವಾಡವನ್ನು ಅಲ್ಲಗಳೆದಿದ್ದಾರೆ. ಹಿಂದುತ್ವದ ಪರವಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಕಾರಣಕ್ಕೆ ನಮ್ಮ ಸದಸ್ಯರನ್ನು ಗುರಿಯಾಗಿಸಲಾಗುತ್ತಿದೆ ಎಂದು ದೂರಿದ್ದಾರೆ. ಮುತಾಲಿಕ್ ಕೂಡಾ ಈ ಪ್ರಕರಣದಲ್ಲಿ ಸಂಘಟನೆಯ ಕೈವಾಡವನ್ನು ತಳ್ಳಿಹಾಕಿದ್ದಾರೆ.
46 ವರ್ಷದ ನಾಜಿಮಾ ಬೆಳಗಾವಿಯ ಸರ್ಕಾರಿ ಶಾಲೆಯಲ್ಲಿ ಉರ್ದು ಶಿಕ್ಷಕಿ ಆಗಿದ್ದಾರೆ. 2017 ರಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದಾರೆ. ತನ್ನ ದೊಡ್ಡ ಮಗಳು ವಿದೇಶದಲ್ಲಿದ್ದು, ತನ್ನ ಮಗನ ಜೊತೆ ಬೆಳಗಾವಿಯಲ್ಲಿ ನಾಜಿಯಾ ವಾಸಿಸುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಬೆಳಗಾವಿ ನಗರದಿಂದ ಖಾನಾಪುರಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಮಗ ಅರ್ಬಾಜ್ ಹಿಂದೂ ಯುವತಿಯನ್ನು ಪ್ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಹಾಗೆಯೇ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿದ ಅರ್ಬಾಜ್ನ ಸಂಬಂಧಿ ಸಮೀರ್ ಮುಲ್ಲಾ, "ಯುವತಿಯು ನನ್ನ ಸಹೋದರನನ್ನು ವಿವಾಹವಾಗಲು ಸಿದ್ಧವಾಗಿದ್ದಳು. ಹಾಗಾಗಿ ಆಕೆಯ ತಾಯಿ ಹಾಗೂ ತಂದೆಯೇ ಈಗ ಆರೋಪಿದಾರರು. ಆಕೆ ನನ್ನ ಸಹೋದರನನ್ನು ತುಂಬಾ ಪ್ರೀತಿ ಮಾಡುತ್ತಿದ್ದಳು," ಎಂದು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)