ತಾಲೂಕು ರಚನೆಯಾದ ಖುಷಿಯಲ್ಲಿ ಗಾಜಿನ ಚೂರುಗಳ ಮೇಲೆ ಉರುಳು ಸೇವೆ
Recommended Video
ಬೆಳಗಾವಿ, ಅಕ್ಟೋಬರ್ 13: ಮೂಡಲಗಿ ತಾಲೂಕು ಘೋಷಣೆಯಾದ ಹಿನ್ನೆಲೆಯಲ್ಲಿ ಮೂಡಲಗಿ ಯುವಕ ಸುರೇಶ ಬೆಳವಿ ಎಂಬುವರು ಉರುಳು ಸೇವೆ ಮಾಡಿದ್ದಾರೆ. ಅದರೆ, ಸುರೇಶ್ ಉರುಳು ಸೇವೆ ಮಾಡಿದ್ದು ಬರೀ ನೆಲದ ಮೇಲಲ್ಲ. ಒಡೆದ ಗಾಜಿನ ಚೂರುಗಳ ಮೇಲೆ ಉರುಳು ಸೇವೆ ಮಾಡಿ ಗಮನ ಸೆಳೆದಿದ್ದಾರೆ.
ಮೂಡಲಗಿ ತಾಲೂಕು ಕೇಂದ್ರವಾಗಿ ಘೋಷಣೆಯಾದರೆ, ಒಡೆದ ಗಾಜಿನ ಮೇಲೆ ಉರುಳು ಸೇವೆ ಮಾಡುವುದಾಗಿ ಸುರೇಶ ಬೆಳವಿ ಅವರು ಹರಕೆ ಹೊತ್ತಿದ್ದರು.
ಹೋರಾಟಕ್ಕೆ ಜಯ, ಮೂಡಲಗಿ ತಾಲೂಕು ರಚನೆಗೆ ಸಂಪುಟ ಒಪ್ಪಿಗೆ
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಪಟ್ಟಣ ಮೂಡಲಗಿ ನೂತನ ತಾಲೂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಆದರೆ, ಅಧಿಕೃತ ತಾಲೂಕುಗಳ ಪಟ್ಟಿ ಬಿಡುಗಡೆ ಮಾಡುವಾಗ ಮಾತ್ರ ಮೂಡಲಗಿ ಹೆಸರು ನಾಪತ್ತೆಯಾಗಿತ್ತು.
ಗೋಕಾಕ ತಾಲೂಕಿನಲ್ಲಿ ಅತ್ಯಂತ ದೊಡ್ಡ ಪಟ್ಟಣವಾಗಿರುವ ಮೂಡಲಗಿಯನ್ನು ತಾಲೂಕು ಕೇಂದ್ರವಾಗಿ ರಚಿಸಲು ಸರ್ಕಾರವೇ ನೇಮಕ ಮಾಡಿದ್ದ ಹುಂಡೇಕರ್, ವಾಸುದೇವ ಮತ್ತು ಗದ್ದಿಗೌಡರ್ ಸಮಿತಿ ವರದಿಯಲ್ಲಿ ಶಿಪಾರಸು ಮಾಡಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಹೆಸರು ನಾಪತ್ತೆಯಾಗಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಸ್ಥಳೀಯರು ನಿರಂತರವಾಗಿ ಇಲ್ಲಿನ ಕಲ್ಮೇಶ್ವರ ವೃತ್ತದಲ್ಲಿ 'ಮೂಡಲಗಿ ತಾಲೂಕು ಹೋರಾಟ ಸಮಿತಿ' ಹೆಸರಿನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದರು.
ನಂತರ ಎಚ್ಚೆತುಕೊಂಡ ಸರ್ಕಾರವು ಮೂಡಲಗಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿತು. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಮೂಡಲಗಿ ಪಟ್ಟಣವನ್ನು ಹೊಸ ತಾಲೂಕನ್ನಾಗಿ ರಚಿಸಲು ಸಂಪುಟವು ತೀರ್ಮಾನಿಸಿದೆ," ಎಂದು ಕಾನೂನು ಸಚಿವ ಟಿಬಿ ಜಯಚಂದ್ರ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
2013ರಲ್ಲಿ ಬಿಜೆಪಿಯ ಜಗದೀಶ್ ಶೆಟ್ಟರ್ ಸರ್ಕಾರ ಘೋಷಿಸಿದ 43 ತಾಲೂಕುಗಳ ಪೈಕಿ ಇದು ಒಂದಾಗಿತ್ತು. ಆದರೆ, 2017ರಲ್ಲಿ ತಾಲೂಕು ಭಾಗ್ಯ ಸಿಕ್ಕಿದೆ. ಬಿಜಾಪುರದ ಆದಿಲ್ ಷಾಹಿಗಳು, ಸವಣೂರು ನವಾಬರು, ಪೇಶ್ವೆಗಳು, ಕಿತ್ತೂರಿನ ಸಂಸ್ಥಾನ, ಜಮಖಂಡಿ ಸಂಸ್ಥಾನ , ಹಾಗೂ ಬ್ರಿಟಿಷರು ಇಲ್ಲಿ ಆಡಳಿತ ನಡೆಸಿದ್ದಾರೆ.ಸುಮಾರು 35 ಸಾವಿರ ಜನಸಂಖ್ಯೆ ಹೊಂದಿದೆ. 21 ವಾರ್ಡಗಳನ್ನು ಹೊಂದಿದೆ.