ಸಂಪುಟದಿಂದ ಕೈ ಬಿಡುವ ವಿಚಾರ: ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ
ಬೆಳಗಾವಿ, ಡಿಸೆಂಬರ್ 2: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಬೆಳಗಾವಿಯಲ್ಲಿಂದು ಹೇಳಿದರು.
ಸಂಪುಟ ಪುನಾರಚನೆಯಾದರೆ ಸಚಿವ ಸ್ಥಾನದಿಂದ ಶಶಿಕಲಾ ಜೊಲ್ಲೆಯನ್ನು ಕೈ ಬಿಡುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನನಗೆ ರಾಜ್ಯ, ರಾಷ್ಟ್ರೀಯ ಮುಖಂಡರು ಯಾವುದೇ ಸೂಚನೆ ನೀಡಿಲ್ಲ. ಸಂಪುಟದಿಂದ ಕೈ ಬಿಡುವ ಬಗ್ಗೆ ನನ್ನ ಜೊತೆ ಚರ್ಚೆಯೂ ಮಾಡಿಲ್ಲ. ಕೇವಲ ಮಾಧ್ಯಮಗಳಲ್ಲಿ ಈ ವಿಷಯ ಬರುತ್ತಿದೆ ಎಂದು ಹೇಳಿದರು.
ಬೆಳಗಾವಿ: 90 ಜಿ.ಪಂ ಸ್ಥಾನಗಳ ಪೈಕಿ 85 ಸ್ಥಾನ ಗೆಲ್ಲುವ ಟಾರ್ಗೆಟ್: ಸಚಿವ ರಮೇಶ್ ಜಾರಕಿಹೊಳಿ
ರಾಜ್ಯದ ಏಕೈಕ ಮಹಿಳಾ ಮಂತ್ರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಕಾರ್ಯಕರ್ತೆಯಾಗಿ ಸಂಘಟನೆ ಮೂಲಕ ಬಂದಿದ್ದೇನೆ. ಮೊದಲ ಬಾರಿ ಸೋತಾಗ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆಯನ್ನಾಗಿ ಮಾಡಿದ್ದರು ಎಂದು ತಿಳಿಸಿದರು.
ಹೆಣ್ಣು ಮಕ್ಕಳನ್ನು ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ಮಾಧ್ಯಮಗಳಿಗೆ ಪ್ರಶ್ನಿಸಿದ ಶಶಿಕಲಾ ಜೊಲ್ಲೆ, ಎರಡು ಬಾರಿ ಸಂಪುಟ ವಿಸ್ತರಣೆ ಆದಾಗಲೂ ನನ್ನ ಹೆಸರು ಹರಿದಾಡಿತ್ತು, ಆಗ ತೆಗೆಯುತ್ತಾರೆ ಎಂಬ ವಿಷಯ ಸುಳ್ಳಾಗಿದೆ ಎಂದರು.
ಮೂರನೇ ಬಾರಿಯೂ ಈಗ ನನ್ನ ಹೆಸರು ಹರಿದಾಡುತ್ತಿದ್ದು, ಕಾದು ನೋಡಿ ಅದು ಸಹ ಸುಳ್ಳಾಗುತ್ತ ಎಂದು ಶಶಿಕಲಾ ಜೊಲ್ಲೆ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದಲ್ಲಿ ಯಾರು ಟಾರ್ಗೆಟ್ ಮಾಡುತ್ತಿದ್ದಾರೆ ಇಲ್ವೋ ಗೊತ್ತಿಲ್ಲ. ಸಂಘಟನೆ ಮೂಲಕ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ, ಸಮರ್ಥವಾಗಿ ನಿಭಾಯಿಸುತ್ತಿದ್ದೀನೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಸಿಎಂ ಜೊತೆ ಚರ್ಚೆಯಾಗಬೇಕು, ನಿಪ್ಪಾಣಿ ಜಿಲ್ಲೆ ಆಗಬೇಕು ಅಂತಾ ಪಾಟೀಲ ಪುಟ್ಟಪ್ಪ ಒಮ್ಮೆ ಹೇಳಿದ್ದರು. ಕಾನೂನಾತ್ಮಕವಾಗಿ ನಿಪ್ಪಾಣಿ ಜಿಲ್ಲೆ ಆಗಬೇಕೆಂದು ಹೇಳಿದ ಜೊಲ್ಲೆ, ಜಿಲ್ಲೆಯಾದರೆ ತುಂಬಾ ಸಂತೋಷ ಎಂದರು.