ಸಚಿವ ಜಗದೀಶ್ ಶೆಟ್ಟರ್ ಸುದ್ದಿಗೋಷ್ಟಿ ಬಹಿಷ್ಕರಿಸಿದ ಪತ್ರಕರ್ತರು
ಬೆಳಗಾವಿ, ಮಾರ್ಚ್ 26: ಸಮಯ ಮೀರಿ ಸುದ್ದಿಗೋಷ್ಟಿಗೆ ಬಂದಿದ್ದರಿಂದ ಮಾಧ್ಯಮಗಳ ಕೆಂಗಣ್ಣಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಗುರಿಯಾಗಿರುವ ಘಟನೆ ಗುರುವಾರ ಬೆಳಗಾವಿಯಲ್ಲಿ ನಡೆದಿದೆ.
ಕೊರೊನಾ ತಡೆಗಟ್ಟಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಗುರುವಾರ ಮಧ್ಯಾಹ್ನ 1:30 ಕ್ಕೆ ಅಧಿಕಾರಿಗಳ ಸಭೆ ನಡೆಸಿ ಸುದ್ದಿಗೋಷ್ಠಿ ಮೂಲಕ ಮಾಧ್ಯಮದವರಿಗೆ ಜಗದೀಶ್ ಶೆಟ್ಟರ್ ಮಾಹಿತಿ ನೀಡಬೇಕಿತ್ತು.
ಆದರೆ ಸಚಿವರು ಮಧ್ಯಾಹ್ನ 3 ಗಂಟೆ ಕಳೆದರೂ ಸುದ್ದಿಗೋಷ್ಠಿಗೆ ಆಗಮಿಸದಿದ್ದಕ್ಕೆ ಬೆಳಗಾವಿ ಮಾಧ್ಯಮದವರು ಸಚಿವರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಂತರ ಸುದ್ದಿಗೋಷ್ಟಿ ಬಹಿಷ್ಕರಿಸಿ ಹೋದ ಘಟನೆ ನಡೆದಿದೆ.
ಮಹಾಮಾರಿ ಕರೋನಾ ಉಲ್ಭಣಗೊಂಡು ಈಗಾಗಲೇ ಬೆಳಗಾವಿ ಜಿಲ್ಲಾಡಳಿತ ಎಲ್ಲ ಅಗತ್ಯ ಕ್ರಮ ಕೈಗೊಂಡ ಬಹುದೀರ್ಘ ಸಮಯದ ನಂತರ ಬೆಳಗಾವಿಗೆ ಆಗಮಿಸಿರುವ ಶೆಟ್ಟರ್ ಅವರಿಗೆ, ಇಂದು ನಿಗದಿತ ಸಮಯಕ್ಕೆ ಅಧಿಕಾರಿಗಳ ಸಭೆ ನಡೆಸಲು ಆಗಲಿಲ್ಲ.
ಜಗದೀಶ ಶೆಟ್ಟರ್ ಬಹು ಹೊತ್ತು ಕಾಯಿಸಿ ಒಂದು ಗಂಟೆ ತಡವಾಗಿ ಬಂದರು. ತಮ್ಮ ಸಂಬಂಧಿ ಹಾಗೂ ರೈಲ್ವೆ ಸಚಿವ ಸುರೇಶ ಅಂಗಡಿ ಅವರ ಮನೆಗೆ ತೆರಳಿದ್ದರಿಂದ ಜಗದೀಶ ಶೆಟ್ಟರ್ ಅವರು ತಡವಾಗಿ ಬಂದರು ಎಂದು ಆರೋಪಿಸಲಾಗಿದೆ.