ಸುರೇಶ್ ಅಂಗಡಿ ಪತ್ನಿ ಸ್ಪರ್ಧೆ: ಸತೀಶ್ ಜಾರಕಿಹೊಳಿ ಹಣೆಬರಹ ಈ ಹಿರಿಯ ಕಾಂಗ್ರೆಸ್ ಮುಖಂಡರ 'ಕೈ'ಯಲ್ಲಿ!
ಬೆಳಗಾವಿ ಲೋಕಸಭಾ ಉಪಚುನಾವಣೆಗೆ ವೇದಿಕೆ ಸಜ್ಜಾಗಿದೆ. ಕೋವಿಡ್ ಮಾರ್ಗಸೂಚಿಯ ನಡುವೆಯೂ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಅಬ್ಬರದ ಪ್ರಚಾರದೊಂದಿಗೆ ನಾಮಪತ್ರ ಸಲ್ಲಿಸಿದ್ದಾಗಿದೆ. ಕಾಂಗ್ರೆಸ್ಸಿನಿಂದ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿಯಿಂದ ಮಂಗಲ ಅಂಗಡಿ ನಾಮಿನೇಶನ್ ಸಲ್ಲಿಸಿದ್ದಾರೆ.
ಬಿಜೆಪಿಯಿಂದ ಯಾರಿಗೆ ಟಿಕೆಟ್ ಒಲಿಯಬಹುದು ಎನ್ನುವ ವಿಚಾರದಲ್ಲಿ ಮೂರು ಜನರ ಹೆಸರು ಕೇಳಿಬರುತ್ತಿತ್ತು. ಅದರಲ್ಲಿ ಒಂದು, ಸುರೇಶ್ ಅಂಗಡಿಯವರ ಪುತ್ರಿ ಶ್ರದ್ದಾ ಶೆಟ್ಟರ್ ಹೆಸರು ಕೂಡಾ. ಆದರೆ, ಬಿಜೆಪಿ ವರಿಷ್ಠರು ಅಂಗಡಿಯವರ ಪತ್ನಿಗೆ ಟಿಕೆಟ್ ನೀಡಿದರು.
ಬಿಜೆಪಿ ಪರ ಪ್ರಚಾರ: ಪ್ರಕಾಶ್ ಹುಕ್ಕೇರಿ ಹೇಳಿಕೆಗೆ ಸತೀಶ್ ಜಾರಕಿಹೊಳಿ ಆಕ್ರೋಶ
ಅನುಕಂಪದ ಬೆನ್ನೇರಿ ಹೊರಟ ಬಿಜೆಪಿಗೆ ಈ ಬಾರಿ ಗೆಲುವು ಅಷ್ಟೇನೂ ಸುಲಭದಾಯಕವಲ್ಲ, ಕಾರಣ ಸತೀಶ್ ಜಾರಕಿಹೊಳಿ ಸ್ಪರ್ಧೆ, ರಮೇಶ್ ಜಾರಕಿಹೊಳಿ ಪ್ರಕರಣ, ಗಗನಮುಖಿಯಾಗಿರುವ ಬೆಲೆಗಳು, ರೈತರ ಪ್ರತಿಭಟನೆ.
ಇದೆಲ್ಲಾ ಒಂದು ಕಡೆಯಾದರೆ, ಕಾಂಗ್ರೆಸ್ಸಿಗೆ ತಲೆನೋವಾಗಿರುವ ಜಿಲ್ಲೆಯ ಪ್ರಭಾವೀ ಮುಖಂಡರೊಬ್ಬರು, ಅಂಗಡಿ ಕುಟುಂಬಕ್ಕೆ ಬೆಂಬಲ ನೀಡುತ್ತೇನೆ ಎಂದು ನೀಡಿದ್ದ ಹೇಳಿಕೆ. ಕಾಂಗ್ರೆಸ್ ನಾಯಕರು ಯಾವ ರೀತಿಯಲ್ಲಿ ಇವರ ಮನವೊಲಿಸುತ್ತಾರೆ ಎನ್ನುವುದು ಮುಂದಿರುವ ಸವಾಲು. ಯಾವ ಹಿರಿಯ ಕಾಂಗ್ರೆಸ್ ಮುಖಂಡ, ಅಂಗಡಿ ಕುಟುಂಬದ ಪರವಾಗಿ ಮಾತನಾಡಿದ್ದು, ಮುಂದೆ ಓದಿ...
ಪ್ರಕಾಶ್ ಹುಕ್ಕೇರಿಯವರು ತಾಳುವ ಅಂತಿಮ ನಿಲುವು ನಿರ್ಣಾಯಕ
ಬೆಳಗಾವಿ ಲೋಕಸಭಾ ವ್ಯಾಪ್ತಿಯ ಕನಿಷ್ಠ ಒಂದು ಅಸೆಂಬ್ಲಿ ಕ್ಷೇತ್ರದಲ್ಲಿ ಹಿರಿಯ ಮುಖಂಡ ಪ್ರಕಾಶ್ ಹುಕ್ಕೇರಿಯವರು ತಾಳುವ ಅಂತಿಮ ನಿಲುವು ನಿರ್ಣಾಯಕವಾಗುವ ಸಾಧ್ಯತೆಯಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಚಿಕ್ಕೋಡಿಯಲ್ಲಿ ಉತ್ತಮ ಹಿಡಿತವನ್ನು ಹೊಂದಿರುವ ಹುಕ್ಕೇರಿ, ರಾಜ್ಯದ ಪ್ರಮುಖ ಕಾಂಗ್ರೆಸ್ ಮುಖಂಡರ ವಿರುದ್ದ ಬೇಸರವನ್ನೂ ವ್ಯಕ್ತ ಪಡಿಸಿದ್ದರು. ಇವರ ಮಗ ಗಣೇಶ್ ಹುಕ್ಕೇರಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಚಿಕ್ಕೋಡಿ-ಸದಲಗ ಕ್ಷೇತ್ರದಿಂದ ಜಯಶೀಲರಾಗಿದ್ದರು.
ಸುರೇಶ್ ಅಂಗಡಿಯವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಿದರೆ ಬೆಂಬಲ
ಪ್ರಕಾಶ್ ಹುಕ್ಕೇರಿ ಕಳೆದ ಅಕ್ಟೋಬರ್ ತಿಂಗಳಲ್ಲಿ ನೀಡಿದ್ದ ಹೇಳಿಕೆ ಬೆಳಗಾವಿ ರಾಜಕೀಯದಲ್ಲಿ ಭಾರೀ ಸಂಚಲನವನ್ನು ಮೂಡಿಸಿತ್ತು. ನಿಪ್ಪಾಣಿಯಲ್ಲಿ ಮಾತನಾಡುತ್ತಿದ್ದ ಹುಕ್ಕೇರಿ, "ಸುರೇಶ್ ಅಂಗಡಿಯವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಿದರೆ, ಪಕ್ಷಾತೀತವಾಗಿ ಅವರಿಗೆ ಬೆಂಬಲ ನೀಡುವುದಲ್ಲದೇ, ಅವರ ಪರವಾಗಿ ಪ್ರಚಾರವನ್ನೂ ಮಾಡುತ್ತೇನೆ"ಎಂದು ಹೇಳಿದ್ದರು.
ಹೈಕಮಾಂಡ್ ಏನಾದರೂ ನನ್ನ ವಿರುದ್ದ ಕ್ರಮ ತೆಗೆದುಕೊಳ್ಳಲಿ
"ಒಂದು ವೇಳೆ ಅಂಗಡಿ ಕುಟುಂಬಕ್ಕೆ ಹೊರತಾಗಿ ಬೇರೆಯವರಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ನಿಂದ ಸ್ಪರ್ಧಿಸಲು ನಾನು ಸಿದ್ದನಿದ್ದೇನೆ. ಇಲ್ಲದಿದ್ದರೆ ನನ್ನ ಬೆಂಬಲ ಬಿಜೆಪಿಗೆ, ಹೈಕಮಾಂಡ್ ಏನಾದರೂ ನನ್ನ ವಿರುದ್ದ ಕ್ರಮ ತೆಗೆದುಕೊಳ್ಳಲಿ, ನನಗೂ ಸಾಕಾಗಿ ಹೋಗಿದೆ" ಎಂದು ಪ್ರಕಾಶ್ ಹುಕ್ಕೇರಿ ಹೇಳಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ಹುಕ್ಕೇರಿ ಹೇಳಿಕೆಗೆ ತೀವ್ರ ವಿರೋಧವನ್ನೂ ವ್ಯಕ್ತ ಪಡಿಸಿದ್ದರು.
ಸತೀಶ್ ಜಾರಕಿಹೊಳಿಗೆ ನಿರ್ಣಾಯಕವಾಗಲಿರುವ ಕಾಂಗ್ರೆಸ್ ಮುಖಂಡ
"ಸುರೇಶ್ ಅಂಗಡಿಯವರ ಕುಟುಂಬದವರು ಸ್ಪರ್ಧಿಸಿದರೆ ಅವರಿಗೆ ನನ್ನ ಬೆಂಬಲ ಎಂದು ಪ್ರಕಾಶ್ ಹುಕ್ಕೇರಿ ಹೇಳಿದ್ದು ಹೌದು. ಆದರೆ, ಈಗ ಅವರು ನನ್ನ ಜೊತೆಗಿದ್ದಾರೆ"ಎಂದು ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಈ ವಿಚಾರದಲ್ಲಿ ಹುಕ್ಕೇರಿಯವರ ಅಂತಿಮ ನಿಲುವೇನು ಎನ್ನುವುದು ಇನ್ನೂ ಸ್ಪಷ್ಟವಾಗಬೇಕಿದೆ.
Recommended Video
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ