ಬೆಳಗಾವಿ ಉಪ ಚುನಾವಣೆ ಬಿಜೆಪಿಗೆ 'ಕಬ್ಬಿಣದ ಕಡಲೆ': ಕಾರಣಗಳು ಐದು
ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ವೇದಿಕೆ ಸಜ್ಜಾಗಿದೆ. ಏಪ್ರಿಲ್ ಮೂರರಂದು ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನ, ಅಂದು ಕಣದಲ್ಲಿ ಅಂತಿಮವಾಗಿ ಉಳಿಯುವವರು ಯಾರು ಎನ್ನುವ ಚಿತ್ರಣ ಸಿಗಲಿದೆ.
ಕೇಂದ್ರ ಸಚಿವ ಸುರೇಶ್ ಅಂಗಡಿಯವರ ನಿಧನದಿಂದ ತೆರವಾಗಿರುವ ಈ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಮಂಗಲ ಅಂಗಡಿ ಮತ್ತು ಕಾಂಗ್ರೆಸ್ಸಿನಿಂದ ಸತೀಶ್ ಜಾರಕಿಹೊಳಿ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಸುರೇಶ್ ಅಂಗಡಿ ಪತ್ನಿ ಸ್ಪರ್ಧೆ: ಸತೀಶ್ ಜಾರಕಿಹೊಳಿ ಹಣೆಬರಹ ಈ ಹಿರಿಯ ಕಾಂಗ್ರೆಸ್ ಮುಖಂಡರ 'ಕೈ'ಯಲ್ಲಿ!
ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ, ಇದರಲ್ಲಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಆರರಲ್ಲಿ ಬಿಜೆಪಿ ಗೆದ್ದಿದ್ದರೆ, ಮಿಕ್ಕ ಎರಡರಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು.
ಈ ಆಧಾರದ ಮೇಲೆ ಬಿಜೆಪಿಗೆ ಈ ಉಪಚುನಾವಣೆ ಸುಲಭ ತುತ್ತು ಎನ್ನುವ ಹಾಗಿಲ್ಲ, ಕಾರಣ ಬದಲಾದ ರಾಜಕೀಯ ಚಿತ್ರಣ. ಬಿಜೆಪಿಗೆ ಪ್ರತಿಷ್ಠೆಯಾಗಿರುವ ಈ ಉಪಚುನಾವಣೆಯಲ್ಲಿ ಐದು ಅಂಶಗಳು ಬಿಜೆಪಿಗೆ ಹಿನ್ನಡೆಯನ್ನು ತಂದೊಡ್ಡಬಹುದು. ಅವು ಯಾವುವು? ಮುಂದೆ ಓದಿ..
ಬಿಜೆಪಿಗೆ ಕಬ್ಬಿಣದ ಕಡಲೆ: ಕಾರಣಗಳು ಐದು - 1
ಬೆಳಗಾವಿ ಉಪಚುನಾವಣೆ ಎನ್ನುವ ವಿಚಾರ ಆರಂಭವಾದಾಗಿನಿಂದ ಕಾಂಗ್ರೆಸ್ನಲ್ಲಿ ಮಂಚೂಣಿಯಲ್ಲಿ ಬರುತ್ತಿದ್ದ ಹೆಸರು ಸತೀಶ್ ಜಾರಕಿಹೊಳಿಯವರದ್ದು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ್ ದೆಹಲಿ ರಾಜಕೀಯದಲ್ಲಿ ಉತ್ಸಾಹ ತೋರಿರಲಿಲ್ಲ. ಜೊತೆಗೆ, ಅವರು ಪ್ರತಿನಿಧಿಸುವ ಯಮನಕನಮರಡಿ ಅಸೆಂಬ್ಲಿ ಕ್ಷೇತ್ರ ಈ ಲೋಕಸಭಾ ವ್ಯಾಪ್ತಿಗೆ ಬರುವುದಿಲ್ಲ. ಆದರೂ, ಹೈಕಮಾಂಡ್ ಆದೇಶಕ್ಕೆ ಅವರು ಒಪ್ಪಿ, ನಾಮಪತ್ರ ಸಲ್ಲಿಸಿದ್ದಾರೆ. ಬೆಳಗಾವಿ ರಾಜಕೀಯದಲ್ಲಿ ಬಲಾಢ್ಯರಾಗಿರುವ ಸತೀಶ್ ಜಾರಕಿಹೊಳಿ ಸ್ಪರ್ಧೆಯೇ ಬಿಜೆಪಿಗಾಗುತ್ತಿರುವ ಮೊದಲ ಹಿನ್ನಡೆ ಎಂದು ಹೇಳಬಹುದು.
ಬಿಜೆಪಿಗೆ ಕಬ್ಬಿಣದ ಕಡಲೆ: ಕಾರಣಗಳು ಐದು - 2
ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ದೇಶವ್ಯಾಪಿ ಆಗಿರುವುದು ಗೊತ್ತಿರುವ ವಿಚಾರ. ದೇಶದ ಅನ್ನದಾತರ ಸಮಸ್ಯೆಯನ್ನು ಕೇಂದ್ರ ಸರಕಾರ ಪರಿಹರಿಸಬೇಕಿದೆ. ಈ ಲೋಕಸಭಾ ಉಪಚುನಾವಣೆ ರಾಷ್ಟ್ರ ರಾಜಕೀಯಕ್ಕೆ ಸಂಬಂಧ ಪಟ್ಟಿರುವುದರಿಂದ, ಮೋದಿ ಸರಕಾರಕ್ಕೆ ಬಿಸಿಮುಟ್ಟಿಸಲು ಮತದಾರ ನಿರ್ಧರಿಸಿದರೆ, ಬಿಜೆಪಿಗೆ ಈ ವಿಚಾರ ತೊಂದರೆ ತರಲಿದೆ.
ಬಿಜೆಪಿಗೆ ಕಬ್ಬಿಣದ ಕಡಲೆ: ಕಾರಣಗಳು ಐದು - 3
ಈ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಬಹುದು ಎನ್ನುವುದಾದರೆ ಅದಕ್ಕೆ ಇನ್ನೊಂದು ಪ್ರಮುಖ ಕಾರಣ, ಬೆಲೆ ಏರಿಕೆ. ತೈಲ ಉತ್ಪನ್ನದಿಂದ ಹಿಡಿದು, ದೈನಂದಿನ ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿರುವುದು ಬಿಜೆಪಿಗೆ ಮುಳುವಾಗಬಾರದು ಎಂದೇನಿಲ್ಲ. ಯಾಕೆಂದರೆ ಇದಕ್ಕೂ ಪ್ರಮುಖ ಕಾರಣ ಎಂದು ಬೆರಳು ತೋರಿಸಬೇಕಾಗಿರುವುದು ಕೇಂದ್ರ ಸರಕಾರವನ್ನು.
ಬಿಜೆಪಿಗೆ ಕಬ್ಬಿಣದ ಕಡಲೆ: ಕಾರಣಗಳು ಐದು - 4
ರಾಜ್ಯ ರಾಜಕೀಯದಲ್ಲಿ ರಂಪ ರಾಮಾಯಣವಾಗಿರುವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾಗುತ್ತಿರುವ ಅಶ್ಲೀಲ ಸಿಡಿ ಈ ಉಪಚುನಾವಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದು. ರಮೇಶ್ ಪ್ರತಿನಿಧಿಸುವ ಗೋಕಾಕ್ ಮತ್ತು ಅವರ ಸಹೋದರ ಬಾಲಚಂದ್ರ ಪ್ರತಿನಿಧಿಸುವ ಅರಭಾವಿ ಕ್ಷೇತ್ರ ಈ ಲೋಕಸಭಾ ವ್ಯಾಪ್ತಿಗೆ ಬರುವಂತದ್ದು. ಹಾಗಾಗಿ, ಸಿಡಿ ವಿಚಾರ ಕೂಡಾ, ಬಿಜೆಪಿಗೆ ಹಿನ್ನಡೆಯನ್ನು ತಂದೊಡ್ಡಬಹುದು.
ಬಿಜೆಪಿಗೆ ಕಬ್ಬಿಣದ ಕಡಲೆ: ಕಾರಣಗಳು ಐದು - 5
ಶಿವಸೇನೆ ಅಭ್ಯರ್ಥಿಯಾಗಿ ಕೃಷ್ಣಾಜಿ ಪುಂಡಲೀಕ ಪಾಟೀಲ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ವೆಂಕಟೇಶ್ವರ ಮಹಾಸ್ವಾಮೀಜಿಯವರು ಕಣದಲ್ಲಿ (ನಾಮಪತ್ರ ಹಿಂದಕ್ಕೆ ಪಡೆಯುವ ದಿನಕ್ಕೆ ಮುನ್ನ) ಇರುವುದು ಬಿಜೆಪಿಗೆ ಹಿನ್ನಡೆಯಾಗಬಹುದು. ಯಾಕೆಂದರೆ, ಇವರಿಬ್ಬರೂ ಹಿಂದೂ ಮತಬ್ಯಾಂಕ್ ಅನ್ನು ಒಡೆಯುವ ಸಾಧ್ಯತೆ ಇರುವುದು.