ಬೆಳಗಾವಿ ಚುನಾವಣಾ ಚಿತ್ರಣ : ಕಣದಲ್ಲಿದ್ದಾರೆ 57 ಅಭ್ಯರ್ಥಿಗಳು!
ಬೆಳಗಾವಿ, ಏಪ್ರಿಲ್ 14 : ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ 57 ಅಭ್ಯರ್ಥಿಗಳಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಅಭ್ಯರ್ಥಿಗಳು ಇದ್ದರೂ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ನಿರೀಕ್ಷೆ ಮಾಡಲಾಗಿದೆ.
ಮೂರು ಸಲ ಗೆಲುವು ಸಾಧಿಸಿರುವ ಬಿಜೆಪಿಯ ಸುರೇಶ್ ಅಂಗಡಿ ಅವರು ಈ ಬಾರಿಯೂ ಅಭ್ಯರ್ಥಿ. ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಡಾ.ವಿ.ಎಸ್.ಸಾಧುನವರ ಅವರು ಕಣದಲ್ಲಿದ್ದಾರೆ. ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ.
ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ರಮೇಶ್ ಜಾರಕಿಹೊಳಿ ಅವರ ಅಸಮಾಧಾನ ತೊಡಕಾಗಲಿದೆಯೇ? ಎಂದು ಕಾದು ನೋಡಬೇಕು. ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ರಮೇಶ್ ಜಾರಕಿಹೊಳಿ ಗೈರಾಗಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ಕೆಪಿಸಿಸಿ ಅಧ್ಯಕ್ಷರಿಗೆ ದೂರು
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಆದರೆ, ಕ್ಷೇತ್ರದಲ್ಲಿ ಮೈತ್ರಿಯಿಂದ ಕಾಂಗ್ರೆಸ್ಗೆ ಯಾವುದೇ ಲಾಭ ಆಗುವುದಿಲ್ಲ. ಸ್ವಂತ ಬಲದ ಮೇಲೆಯೇ ಕಾಂಗ್ರೆಸ್ ಚುನಾವಣೆಯನ್ನು ಎದುರಿಸಬೇಕಾಗಿದೆ. ಕ್ಷೇತ್ರದಲ್ಲಿ ಜೆಡಿಎಸ್ನ ಯಾವುದೇ ಶಾಸಕರು ಇಲ್ಲ.
ಬೆಳಗಾವಿ ಲೋಕಸಭಾ ಕ್ಷೇತ್ರದ ಪರಿಚಯ : ಯಾರ ಬಾಯಿಗೆ ಕುಂದಾ ಕರದಂಟು?
4ನೇ ಗೆಲುವಿನ ಉತ್ಸಾಹ
ಬೆಳಗಾವಿಯ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರು ಈಗಾಗಲೇ ಮೂರು ಬಾರಿ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದಾರೆ. ಈ ಬಾರಿಯೂ ಗೆಲ್ಲುವ ವಿಶ್ವಾಸದಲ್ಲಿ ಕಣಕ್ಕಿಳಿದಿದ್ದಾರೆ. ಲಿಂಗಾಯತ-ಬಣಜಿಗ ಸಮುದಾಯಕ್ಕೆ ಸೇರಿದ ಅವರು ಮೂರು ಬಾರಿ ಮಾಡಿಕ ಕೆಲಸಗಳು, ನರೇಂದ್ರ ಮೋದಿ ಅವರ ಅಲೆಯ ಮೇಲೆ ಗೆದ್ದು ಬರುವ ವಿಶ್ವಾದಲ್ಲಿದ್ದಾರೆ.
ಅಪರಿಚಿತ ಅಭ್ಯರ್ಥಿ
ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಡಾ.ವಿ.ಎಸ್.ಸಾಧುನವರ ಅವರು ಕಣದಲ್ಲಿದ್ದಾರೆ. ಇವರು ಅಪರಿಚಿತ ಅಭ್ಯರ್ಥಿ ಎಂಬುದು ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡಬಹುದು. ಆದರೆ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಡಾ.ವಿ.ಎಸ್.ಸಾಧುನವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ.
ರಮೇಶ್ ಜಾರಕಿಹೊಳಿ ತಟಸ್ಥ
2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಗೋಕಾಕ ಹಾಗೂ ಅರಭಾವಿ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಹೆಚ್ಚಿನ ಮತಗಳು ಸಿಕ್ಕಿದ್ದವು. ಇದರ ಹಿಂದೆ ರಮೇಶ್ ಜಾರಕಿಹೊಳಿ ಅವರ ಶ್ರಮವಿತ್ತು. ಆದರೆ, ಈ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ತಟಸ್ಥರಾಗಿದ್ದಾರೆ. ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಅವರು ಪ್ರಚಾರದಲ್ಲೂ ಪಾಲ್ಗೊಂಡಿಲ್ಲ.
ವಿಧಾನಸಭೆ ಬಲಾಬಲ
ಬೆಳಗಾವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಅರಭಾವಿ, ಸವದತ್ತಿ, ರಾಮದುರ್ಗ, ಬೆಳಗಾವಿ ಗ್ರಾಮೀಣ, ಗೋಕಾಕ, ಬೈಲಹೊಂಗಲ ವಿಧಾನಸಭಾ ಕ್ಷೇತ್ರಗಳಿವೆ.
*
ಬಿಜೆಪಿ
:
ಬೆಳಗಾವಿ
ಉತ್ತರ,
ಬೆಳಗಾವಿ
ದಕ್ಷಿಣ,
ಅರಭಾವಿ,
ಸವದತ್ತಿ,
ರಾಮದುರ್ಗ
*
ಕಾಂಗ್ರೆಸ್
:
ಬೆಳಗಾವಿ
ಗ್ರಾಮೀಣ,
ಗೋಕಾಕ,
ಬೈಲಹೊಂಗಲ
ಕಳೆದ ಚುನಾವಣೆ ಫಲಿತಾಂಶ
2009ರ ಚುನಾವಣೆಯಲ್ಲಿ ಸುರೇಶ್ ಅಂಗಡಿ ಅವರು 1,18,687 ಮತಗಳ ಅಂತರದಿಂದ ಜಯಗಳಿಸಿದ್ದರು.
2014ರ ಚುನಾವಣೆಯಲ್ಲಿ ಸುರೇಶ್ ಅಂಗಡಿ ಅವರು 5,54,417 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ನ ಲಕ್ಷ್ಮೀ ಹೆಬ್ಬಾಳ್ಕರ್ ಅವರು 4,78,557 ಮತಗಳನ್ನು ಪಡೆದಿದ್ದರು.