ಬೆಳಗಾವಿ: ಗಾಂಧಿನಗರದ ಟ್ರಾಫಿಕ್ ಸಮಸ್ಯೆಗೆ 'ಫ್ಲೈ ಓವರ್' ಮುಕ್ತಿ
ಬೆಳಗಾವಿ, ಅಕ್ಟೋಬರ್ 10: ಬೆಳಗಾವಿಯ ಹೃದಯ ಭಾಗದ ಸಂಕಂ ಹೋಟೆಲ್ ಹಾಗೂ ಅಶೋಕ ಸರ್ಕಲ್ ನಡುವೆ ದಿನನಿತ್ಯ ಟ್ರಾಫಿಕ್ ಸಮಸ್ಯೆಯಿಂದ ಜನ ಕಿರಿ ಕಿರಿ ಅನುಭವಿಸುತ್ತಿದ್ದಾರೆ.
ಈ ಸಮಸ್ಯೆಗೆ ಮೇಲ್ಸೇತುವೆ ನಿರ್ಮಿಸಿ ಕೊನೆ ಹಾಡಲು ಕರ್ನಾಟಕ ಸರಕಾರ ನಿರ್ಧರಿಸಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಬೆಳಗಾವಿ ನಗರದ ಮುಂಭಾಗದ ಗಾಂಧಿನಗರದ ಬಳಿ 100 ಕೋಟಿ ವೆಚ್ಚದಲ್ಲಿ ಶೀಘ್ರದಲ್ಲೇ ಫ್ಲೈ ಓವರ್ ನಿರ್ಮಾಣವಾಗಲಿದೆ.
ಶಿವಮೊಗ್ಗದಲ್ಲಿ 'ಯುವ ಸ್ಪಂದನ'
ಶಿವಮೊಗ್ಗದಲ್ಲಿ ನಡೆದ 'ಯುವ ಸ್ಪಂದನ' ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಸಿ.ಟಿ ರವಿ ಯುವ ಸಮುದಾಯದ ಜತೆ ಸಂವಾದ ನಡೆಸಿದರು. ಒನ್ ಇಂಡಿಯಾ ಓನ್ ಇಂಡಿಯಾ ಕಲ್ಪನೆಯ ಸಂವಾದ ಕಾರ್ಯಕ್ರಮ ಇದಾಗಿತ್ತು. ಈ "ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತಮಗೆ ಅವಿಸ್ಮರಣೀಯ ಅನುಭವ ನೀಡಿದೆ," ಎಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ.
It was a great experience interacting with our Youngsters about "One India Won India" during the "Yuva Spandana" event in Shivamogga. pic.twitter.com/PTmKRQX3N7
— C.T.Ravi (@CTRavi_BJP) October 10, 2017
ಸಿಡಿಲು ಬಡಿದು ನರ್ಸ್ ಸಾವು
ಸಿಡಿಲು ಬಡಿದು ನರ್ಸ್ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನಡೆದಿದೆ. ತಾಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 28 ವರ್ಷದ ನೀಲಮ್ಮ ಮೃತಪಟ್ಟಿದ್ದಾರೆ.
ಆಸ್ಪತ್ರೆಯ ಕಾಂಪೌಂಡ್ ಬಳಿ ತೆರಳುತ್ತಿದ್ದಾಗ ಸಿಡಿಲು ಬಡಿದಿದೆ. ತಕ್ಷಣವೇ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸದೆ ನರ್ಸ್ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಸಂಘರ್ಷ
ಕೊಪ್ಪಳದ ಭಾಗ್ಯನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ನಡುವೆ ಸಂಘರ್ಷ ನಡೆದಿದೆ. ಒಂದು ಕೋಮಿನ ಜನಕ್ಕೆ ಕಿಡಿಗೇಡಿಗಳು ವಾಟ್ಸಪ್ ಗ್ರೂಪ್ ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಇದರಿಂದ ಆಕ್ರೋಶಗೊಂಡ ಇನ್ನೊಂದು ಕೋಮಿನ ಜನರು ಬೈದಿರೋ ವ್ಯಕ್ತಿಯನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಘರ್ಷಣೆ ವಿಕೋಪಕ್ಕೆ ತಿರುಗುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ಕೋಮಿನ ಯುವಕರನ್ನ ಚದುರಿಸಿದರು.
ಘಟನೆಗೆ ಕಾರಣರಾದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.