ಸರ್ಕಾರ ಪತನಕ್ಕೆ ಕಾರಣ ಏನು?: ಕಾದು ನೋಡಿ, ಮುಂದೆ ಹೇಳ್ತೀನಿ ಎಂದ ಸತೀಶ್ ಜಾರಕಿಹೊಳಿ
ಬೆಳಗಾವಿ, ಜುಲೈ 27: ಸಮ್ಮಿಶ್ರ ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಯಾವುದೇ ರಾಜಕೀಯ ಸಮಸ್ಯೆ ಕಾರಣ ಅಲ್ಲ. ಹಾಗೆಯೇ ಜಾರಕಿಹೊಳಿ ಕುಟುಂಬವೂ ಕಾರಣ ಅಲ್ಲ. ಒಂದು ವಸ್ತು ಅದಕ್ಕೆ ಕಾರಣ ಎಂದು ಸತೀಶ್ ಜಾರಕಿಹೊಳಿ ಪುನರುಚ್ಚರಿಸಿದರು.
ಸುದ್ದಗಾರರೊಂದಿಗೆ ಮಾತನಾಡಿದ ಅವರು, 'ಸರ್ಕಾರ ಉರುಳಲು ನಮ್ಮ ಕುಟುಂಬವೇ ಕಾರಣ ಎಂದು ಜನರಿಗೆ ಗುಮಾನಿ ಇದೆ. ನಮಗೆ ದುಡ್ಡು ಮತ್ತು ಅಧಿಕಾರ ಆಸೆಗೆ ಹೀಗೆ ಮಾಡಿದ್ದೇವೆ ಎಂದು ಅಂದುಕೊಂಡಿದ್ದಾರೆ. ಶೇ 99ರಷ್ಟು ಜನರಿಗೆ ಸತ್ಯ ಗೊತ್ತಿಲ್ಲ. ಶೇ 1ರಷ್ಟು ಜನರಿಗೆ ಮಾತ್ರ ವಾಸ್ತವ ಗೊತ್ತಿರಬಹುದು. ಗೊತ್ತಿಲ್ಲದವರಿಗೆ ಹೇಳುವುದು ನಮ್ಮ ಕರ್ತವ್ಯ. ಯಾವ ವಸ್ತು ಎಂಬುವುದನ್ನು ಕಾಲ ಬಂದಾಗ ಹೇಳುತ್ತೇನೆ' ಎಂದರು.
'ಈ ಕಾರಣವನ್ನು ಹೇಳದೆಯೇ ಹೋದರೆ ನಮ್ಮ ಕುಟುಂಬದ ಮೇಲೆ ಅಪವಾದ ಬರುತ್ತದೆ. ಅದೊಂದು ಕಪ್ಪುಚುಕ್ಕೆಯಾಗುತ್ತದೆ. ಡಿಕೆ ಶಿವಕುಮಾರ್ ಅವರು ಬೆಳಗಾವಿ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎನ್ನುವ ಆರೋಪಗಳು ಹಿಂದೆ ಇದ್ದವು. ಆದರೆ, ಸರ್ಕಾರದ ವಿರುದ್ಧದ ಅಸಮಾಧಾನಕ್ಕೂ ಅವರಿಗೂ ಸಂಬಂಧವಿಲ್ಲ. ಆ ಸಮಸ್ಯೆ ಪರಿಹಾರವೂ ಆಗಿತ್ತು' ಎಂದು ಹೇಳಿದರು.
ಅತೃಪ್ತಿಯ ಬೆಂಕಿ ಹತ್ತಿದ್ದು ಬೆಳಗಾವಿಯಿಂದ: ಸತೀಶ್ ಜಾರಕಿಹೊಳಿ
'ರಮೇಶ್ ಜಾರಕಿಹೊಳಿ ಅವರನ್ನು ಅವರ ಅಳಿಯಂದಿರೇ ನಿಯಂತ್ರಿಸುತ್ತಿದ್ದಾರೆ. ಇದರಲ್ಲಿ ಮುಚ್ಚಿಡುವುದು ಏನೂ ಇಲ್ಲ. ಅವರೂ ಮುಂಬೈನಲ್ಲಿ ಇದ್ದಾರೆ. ಬಿಜೆಪಿಗೆ ಹೋಗ್ತೀವಿ ಎಂದು ಸಭೆಗಳನ್ನು ಮಾಡಿದ್ದಾರೆ. ಈ ಎಲ್ಲ ಗೊಂದಲ, ಸಮಸ್ಯೆಗಳಲ್ಲಿ ಅವರು ಪಾಲುದಾರರು' ಎಂದು ಆರೋಪಿಸಿದರು.
ಕುಟುಂಬದ ಮೇಲಿನ ಕಳಂಕ
'ನಾನು ಸತ್ಯ ಹೇಳುವುದರಿಂದ ದ್ವೇಷ ಏನೂ ಹುಟ್ಟುವುದಿಲ್ಲ. ಇಬ್ಬರದೂ ಪ್ರತ್ಯೇಕ ರಾಜಕಾರಣ. ನಾನು ಸತ್ಯ ಹೇಳಲು ಪಕ್ಷ, ರಮೇಶ್ ಅಡ್ಡಬರುವುದಿಲ್ಲ. ಕುಟುಂಬದ ಮೇಲಿನ ಕಳಂಕವನ್ನು ತೆಗೆಯಲು ಅನಿವಾರ್ಯವಾಗಿ ಹೇಳಲೇಬೇಕಾಗುತ್ತದೆ. ಆದರೆ, ಸರ್ಕಾರ ಉರುಳಲು ಕಾರಣವಾಗಿದ್ದು ಸಚಿವಗಿರಿ ಅಲ್ಲ. ಬೇರೆ ವಿಚಾರಗಳೂ ಅಲ್ಲ. ಎಲ್ಲವನ್ನೂ ನಾನು ಮುಂದೆ ಹೇಳುತ್ತೇನೆ' ಎಂದರು.
ರಮೇಶ್ ಜಾರಕಿಹೊಳಿಯ 'ಬೃಹನ್ನಾಟಕ' ವಿಶ್ವದ ಎಂಟನೇ ಅದ್ಭುತ
ಇಂತಹ ಸ್ಪೀಕರ್ ಮುಂದೆ ಸಿಗುವುದಿಲ್ಲ
ಶಾಸಕರ ಅನರ್ಹತೆಯನ್ನು ಬಿಜೆಪಿಯವರು ಬ್ಲ್ಯಾಕ್ ಮೇಲ್ ತಂತ್ರ ಎಂದು ಆರೋಪಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಅವರಿಗೆ ತಮ್ಮದೇ ತೀರ್ಮಾನ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಅವಕಾಶ ನೀಡಿತ್ತು. ಇಂತಹ ಸ್ಪೀಕರ್ ಮುಂದೆ ಸಿಗಲು ಸಾಧ್ಯವಿಲ್ಲ. ಅವರು ನಮ್ಮ ಪಕ್ಷದವರೇ ಇರಬಹುದು. ಆದರೆ, ಅವರು ನಿಯಮಾವಳಿಗಳನ್ನು ಮೀರಿ ಏನನ್ನೂ ಮಾಡಿಲ್ಲ. ಶಾಸಕರಲ್ಲಿನ ಅಸಮಾಧಾನದ ಬಗ್ಗೆ ಪಕ್ಷಕ್ಕೆ ನಾನು ಮೊದಲೇ ಮಾಹಿತಿ ನೀಡಿದ್ದೆ. ಅವರು ಮುಂಬೈನಿಂದ ವಾಪಸ್ ಬರುತ್ತಾರೆ ಎಂಬ ವಿಶ್ವಾಸವಿತ್ತು. ಸ್ಪೀಕರ್ ಅವರು ತೆಗೆದುಕೊಂಡಿರುವ ನಿರ್ಧಾರ ಉಳಿದ ಶಾಸಕರಿಗೆ ಪಾಠವಾಗಲಿದೆ ಎಂದು ಹೇಳಿದರು.
ಕೋರ್ಟ್ ತೀರ್ಮಾನಕ್ಕೆ ಸಮಯ ಬೇಕು
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಶಾಸಕರನ್ನು ಅನರ್ಹಗೊಳಿಸಲಾಗಿದೆ. ನಿಯಮಗಳ ಪ್ರಕಾರ ಸ್ಪೀಕರ್ ಅವರು ಶಾಸಕರಿಗೆ ಸಮಯಾವಕಾಶ ನೀಡಬೇಕಿತ್ತು. ಅನರ್ಹಗೊಂಡಿರುವ ಶಾಸಕರಿಗೆ 3-4 ಬಾರಿ ಅವಕಾಶ ಕೊಟ್ಟಿದ್ದಾರೆ. ಈ ಶಾಸಕರು ನ್ಯಾಯಾಲಯಕ್ಕೆ ಹೋದರೂ ಪ್ರಕರಣ ಇತ್ಯರ್ಥ ಆಗಲು ಸಮಯ ಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಜಾರಕಿಹೊಳಿ ಮನವೊಲಿಕೆ ಸಾಕು ಸಾಕಾಗಿ ಹೋಗಿದೆ: ಸಿದ್ದರಾಮಯ್ಯ
ಗೋಕಾಕ್ನಿಂದ ಯಾರು ಸ್ಪರ್ಧೆ?
ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ನೀಡಿದ ದೂರಿನ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ. ಇದರಿಂದ ರಮೇಶ್ ಜಾರಕಿಹೊಳಿ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಇದರ ವಿರುದ್ಧ ಅವರು ನ್ಯಾಯಾಲಯದ ಮೊರೆ ಹೋಗುತ್ತಿದ್ದಾರೆ. ಒಂದು ವೇಲೆ ಅವರ ಪರವಾಗಿ ತೀರ್ಪು ಬಾರದೆ ಹೋದರೆ ತಮ್ಮ ಸಂಬಂಧಿಕರನ್ನೇ ಅವರು ಗೋಕಾಕ್ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಲು ಅವರು ಸಿದ್ಧತೆ ನಡೆಸಿದ್ದಾರೆ. ರಮೇಶ್ ಅವರ ಮಗ ಅಮರ್ ಜಾರಕಿಹೊಳಿ ಸ್ಪರ್ಧಿಸಬಹುದು. ಆದರೆ, ಅವರ ಅಳಿಯ ಅಂಬಿರಾವ್ ಪಾಟೀಲ್ ಅವರ ಹೆಸರೇ ಮುಂಚೂಣಿಯಲ್ಲಿದೆ. ಅವರ ಎದುರಾಳಿಯಾಗಿ ಮತ್ತೊಬ್ಬ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ನಿಂದ ಇಳಿಸಲು ಸತೀಶ್ ಜಾರಕಿಹೊಳಿ ತಯಾರಿ ಮಾಡಿದ್ದಾರೆ.