ಬೆಳಗಾವಿ: ಬಸವೇಶ್ವರ ಪುತ್ಥಳಿ ಭಗ್ನಗೊಳಿಸಿದ ದುಷ್ಕರ್ಮಿಗಳು
ಬೆಳಗಾವಿ, ನವೆಂಬರ್ 8: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದ ವೃತ್ತದಲ್ಲಿನ ಬಸವೇಶ್ವರ ಪುತ್ಥಳಿಗೆ ಭಗ್ನವಾಗಿದ್ದು, ಯಾರೋ ದುಷ್ಕರ್ಮಿಗಳು ಬಸವೇಶ್ವರ ಪುತ್ಥಳಿಯ ಕೈ ಕತ್ತರಿಸಿ ಹೋಗಿದ್ದಾರೆ.
ಕುಡಿದ ಮತ್ತಿನಲ್ಲಿದ್ದ ದುಷ್ಕರ್ಮಿಗಳಿಂದ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಗಡಿ ಜಿಲ್ಲೆ ಬೆಳಗಾವಿಯ ರಾಮದುರ್ಗ ತಾಲ್ಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಘಟನೆ ನಡೆದಿದೆ.
ಬೆಳಗಾವಿ: ಅಂಜಲಿ ನಿಂಬಾಳ್ಕರ್ ವಿರುದ್ಧ ಗೆದ್ದು ಬೀಗಿದ ಅರವಿಂದ್ ಪಾಟೀಲ್
ಬಿಜಗುಪ್ಪಿ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಬಸವೇಶ್ವರ ವೃತ್ತದಲ್ಲಿದ್ದ ಪುತ್ಥಳಿ ಜಖಂಗೊಂಡಿದ್ದು, ತಡರಾತ್ರಿಯಲ್ಲಿ ಪುತ್ಥಳಿಯ ಕೈ ಕತ್ತರಿಸಿದ್ದಾರೆ. ಘಟನಾ ಸ್ಥಳಕ್ಕೆ ಕಟಕೋಳ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಬಸವೇಶ್ವರ ಪುತ್ಥಳಿಗೆ ಹಾನಿಯಾದ ಹಿನ್ನೆಲೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲಿಸ್ ಭದ್ರತೆ ಒದಗಿಸಲಾಗಿದೆ. ಪುತ್ಥಳಿಯ ಕೈ ಕತ್ತರಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳೀಯರು ಸೇರಿಕೊಂಡು ಬಿಜಗುಪ್ಪಿ ಬಸ್ ನಿಲ್ದಾಣದಲ್ಲಿ ಕೆಲ ವರ್ಷಗಳ ಹಿಂದೆ ಬಸವೇಶ್ವರ ಮೂರ್ತಿ ನಿರ್ಮಿಸಿದ್ದರು. ಕಿಡಿಗೇಡಿಗಳ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ.
ತಕ್ಷಣವೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಪೊಲೀಸರ ಎದುರು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಆರೋಪಿಗಳನ್ನು ಬಂಧಿಸುವ ಭರವಸೆಯನ್ನು ಕಟಕೋಳ ಪೊಲೀಸರು ನೀಡಿದ್ದಾರೆ.