"ನಾವು ಎಲ್ಲರ ಸ್ನೇಹ ಬಯಸುತ್ತೇವೆ, ಸ್ನೇಹಕ್ಕೆ ತೊಂದರೆಯಾದರೆ ಸಂಘರ್ಷಕ್ಕೂ ಸಿದ್ಧ"
ಬೆಳಗಾವಿ, ನವೆಂಬರ್ 1: ಕರ್ನಾಟಕ ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಸರ್ಕಾರದಿಂದ ಕರಾಳ ದಿನ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನಾವು ಎಲ್ಲರ ಸ್ನೇಹ ಬಯಸುತ್ತೇವೆ, ಸ್ನೇಹಕ್ಕೆ ತೊಂದರೆಯಾದರೆ ಸಂಘರ್ಷಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲ ಸಂಘಟನೆಗಳಿಂದ ಕನ್ನಡಿಗರ ಸ್ವಾಭಿಮಾನ ಕೆದಕುವ ಪ್ರಯತ್ನ ನಡೆಯುತ್ತಿದೆ. ಎಂಇಎಸ್ ಸೇರಿ ಕೆಲ ಸಂಘಟನೆಗಳ ಪುಂಡಾಟಿಕೆ ಖಂಡಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ ಉಭಯ ರಾಜ್ಯಗಳ ಮಧ್ಯೆ ಸೌಹಾರ್ದತೆ ತರಬೇಕು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಆಗ್ರಹಿಸಿದ್ದಾರೆ.
ಚೆನ್ನಮ್ಮ ಪ್ರತಿಮೆಗೆ ಸ್ವಾಮೀಜಿ ಗೌರವಾರ್ಪಣೆ
ಕರ್ನಾಟಕದಲ್ಲಿದ್ದು, ಕೆಲ ಸಂಘಟನೆಗಳು ನಾಡದ್ರೋಹಿ ಕೆಲಸ ಮಾಡುತ್ತಿವೆ. ನಮ್ಮಲ್ಲಿ ಚೆನ್ನಮ್ಮರಂತ ಮಹಿಳೆಯರು, ರಾಯಣ್ಣರಂತ ಯುವಕರಿದ್ದಾರೆ ಎಂದು ತಿಳಿಸಿದರು.
ಕನ್ನಡ ನಾಡು-ನುಡಿಗೆ ಪ್ರಾಣ ಮುಡಿಪಾಗಿಟ್ಟ ಪೈಲ್ವಾನ್ ರಂಜಾನ್ ಸಾಬ್
ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಗೆ ಸ್ವಾಮೀಜಿ ಗೌರವಾರ್ಪಣೆ ಸಲ್ಲಿಸಿ, ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಮಲತಾಯಿ ಧೋರಣೆ ತಾಳಬಾರದು
ನಿರೀಕ್ಷೆಗೆ ತಕ್ಕಷ್ಟು ಉತ್ತರ ಕರ್ನಾಟಕ ಅಭಿವೃದ್ಧಿ ಆಗಿಲ್ಲ, ಉತ್ತರ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಅಂತಾ ಘೋಷಿಸಬೇಕು. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಮೊದಲು ಕನ್ನಡಕ್ಕೆ ಸ್ಥಾನ ನೀಡಬೇಕು. ಯಾರೂ ಸಹ ಮಲತಾಯಿ ಧೋರಣೆ ತಾಳಬಾರದೆಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ರಾಜ್ಯೋತ್ಸವ ಸಂಭ್ರಮದ ಮಧ್ಯೆ ಲಾಠಿ ಚಾರ್ಜ್
ಇದೇ ವೇಳೆ ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಮಧ್ಯೆ ಲಾಠಿ ಚಾರ್ಜ್ ಆಗಿದ್ದು, ಗುಂಪು ಗುಂಪಾಗಿ ಸಂಭ್ರಮಾಚರಣೆ ಮಾಡುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ.
ಸೂರ್ಯ-ಚಂದ್ರ ಇರುವ ತನಕ ಬೆಳಗಾವಿ ಕರ್ನಾಟಕದ್ದೇ: ಡಿಸಿಎಂ ಸವದಿ
ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಯುವಕರು ಸಂಭ್ರಮಾಚರಣೆ ಮಾಡುವಾಗ, ಲಾಠಿ ಬೀಸಿ ಯುವಕರನ್ನು ಚದುರಿಸಿದ್ದಾರೆ.
ರಾಜ್ಯೋತ್ಸವ ಮೆರವಣಿಗೆಗೆ ಬ್ರೇಕ್
ಪೊಲೀಸರ ಲಾಠಿ ಏಟಿಗೆ ಎದ್ದನೋ ಬಿದ್ದನೋ ಎಂದು ಯುವಕರು ಓಡಿ ಹೋಗಿದ್ದಾರೆ. ಕೋವಿಡ್ ಮಾರ್ಗಸೂಚಿ ಹಿನ್ನೆಲೆ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ. ಬೆಳಗಾವಿ ಜಿಲ್ಲಾಡಳಿತ ರಾಜ್ಯೋತ್ಸವ ಮೆರವಣಿಗೆಗೆ ಬ್ರೇಕ್ ಹಾಕಿತ್ತು.
ಆದರೂ ಚೆನ್ನಮ್ಮ ವೃತ್ತದಲ್ಲಿ ಜಮಾವಣೆಗೊಂಡು ಸಂಭ್ರಮಾಚರಣೆಯಲ್ಲಿ ಯುವಕರು ತೊಡಗಿದ್ದರು. ವಾಹನ ಸಂಚಾರಕ್ಕೆ ಅಡ್ಡಿ ಹಿನ್ನೆಲೆಯಲ್ಲಿ ಪೊಲೀಸರಿಂದ ಲಾಠಿ ಚಾರ್ಜ್ ಮಾಡಲಾಗಿದೆ.