'ಎಂಇಎಸ್ ಓಲೈಸಿ ವೋಟ್ ರಾಜಕಾರಣ ಮಾಡಲಾಗುತ್ತಿದೆ'- ಟಿಎ ನಾರಾಯಣಗೌಡ
ಬೆಳಗಾವಿ ಡಿಸೆಂಬರ್ 20: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಎಂಇಎಸ್ನ್ನು ನಿಷೇಧ ಮಾಡಲು ಇಂದು ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಾದ್ಯಂತ ಕರವೇ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ್ದನ್ನು ಖಂಡಿಸಿ ಬೆಳಗಾವಿಯಲ್ಲಿ ಸರಣಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಸುವರ್ಣಸೌಧದ ಮುತ್ತಿಗೆಗೆ ಕನ್ನಡಿಗರು ಪ್ರಹಾರ ನಡೆಸಿದ್ದಾರೆ. ಇತ್ತ ಸದನದಲ್ಲಿ ಪ್ರಸ್ತಾಪ ಮಾಡುವ ಮೂಲಕ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಸಿದ್ದವಾಗಿದೆ. ಜೊತೆಗೆ ಎಂಇಎಸ್ನ್ನು ಬ್ಯಾನ್ ಮಾಡಲು ಒತ್ತಾಯಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, 'ಎಂಇಎಸ್ ಬ್ಯಾನ್ ಬಗ್ಗೆ ನಾನು ಸದನದಲ್ಲಿ ಮಾತನಾಡುತ್ತೇನೆ. ಕೆಲವು ಪುಂಡರು ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಅದು ಅತ್ಯಂತ ಖಂಡನೀಯ ವಿಚಾರ. ರಾಯಣ್ಣ ಯಾವುದೇ ಜಾತಿ ಸಮಾಜಕ್ಕೆ ಸೇರಿದ ವ್ಯಕ್ತಿ ಅಲ್ಲ. ಬ್ರಿಟೀಷರ ವಿರುದ್ಧ ಹೋರಾಡಿದ ದೇಶಭಕ್ತ. ಅಂತ ವ್ಯಕ್ತಿಯ ಪ್ರತಿಮೆಯನ್ನು ವಿರೂಪಗೊಳಿಸಿದವರು ಪುಂಡರಿರಬೇಕು ಇಲ್ಲ ಸಮಾಜದಲ್ಲಿ ಶಾಂತಿ ಕದಡುವಂತವರಾಗಿರಬೇಕು. ಅವರ ವಿರುದ್ಧ ಕ್ರಮಕ್ಕೆ ನಾನು ಸದನದಲ್ಲಿ ಧ್ವನಿ ಎತ್ತುತ್ತೇನೆ. ಸರ್ಕಾರದ ಗಮನ ಸೆಳೆಯುವಂತ ಪ್ರಯತ್ನ ಮಾಡುತ್ತೇನೆ' ಎಂದು ಹೇಳಿದರು.
ಇನ್ನೂ ಪ್ರತಿಭಟನೆಗೆ ಕನ್ನಡಪರ ಸಂಘಟನೆಗಳಿಗೆ ಅವಕಾಶ ಕೊಡುತ್ತಿಲ್ಲ, ಆದರೆ ಎಂಇಎಸ್ಗೆ ಅವಕಾಶ ನೀಡುತ್ತಾರೆ ಎನ್ನುವ ಪ್ರಶ್ನೆಗೆ, 'ಎಂಇಎಸ್ ಗೆ ಯಾವುದೇ ಕಾನೂನು ಕಾಯ್ದೆ ಇಲ್ಲ. ಆಯುಧಗಳನ್ನು ಹಿಡಿದು ದಾಳಿ ಮಾಡ್ತಾರೆ ಅಂದರೆ ಅವರಿಗೆ ಭಯ ಇಲ್ಲ. ಸರ್ಕಾರಕ್ಕೆ ಹಿಡಿತ ಇಲ್ಲ. ಲಾ ಆಂಡ್ ಆರ್ಡರ್ ಫೇಲ್ ಆಗಿದೆ. ನಾನು ಈ ಬಗ್ಗೆ ಸದಸನದಲ್ಲಿ ಮಾತನಾಡುತ್ತೇನೆ. ನಿಮ್ಮ ಧ್ವನಿಗೆ ನಾವು ಧ್ವನಿ ಆಗುತ್ತೇವೆ' ಎಂದು ವಿಪಕ್ಷ ನಾಯಕ ಹೇಳಿದ್ದಾರೆ.
ಟಿಎ ನಾರಾಯಣಗೌಡ ಕಿಡಿ:
ಬೆಳಗಾವಿ ಹೊತ್ತಿ ಉರಿಯುತ್ತಿದ್ದರೆ ಸಚಿವರು ಮೌನವಾಗಿದ್ದಾರೆ. ಎಂಇಎಸ್ ಓಲೈಸಿ ಓಟಿಂಗ್ ರಾಜಕಾರಣ ಮಾಡಲಾಗುತ್ತಿದೆ ಎಂದು ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಜೊತೆಗೆ ಪ್ರತಿಭಟನಾಕಾರರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ವಿರೂಪಗೊಳಿಸಿದ ಎಲ್ಲ ಭಯೋತ್ಪಾದಕರ ಮೇಲೂ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಕ್ಷಿಸಬೇಕು. ಎಲ್ಲರನ್ನೂ ಮಹಾರಾಷ್ಟ್ರಕ್ಕೆ ಗಡಿಪಾರು ಮಾಡಬೇಕು. ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳನ್ನು ಈ ಕೂಡಲೇ ಕರ್ನಾಟಕದಲ್ಲಿ ನಿಷೇಧಿಸಬೇಕು. ಈ ಸಂಘಟನೆಗಳ ಮುಖಂಡರನ್ನು ಗಡಿಪಾರು ಮಾಡಬೇಕು. ಬೆಳಗಾವಿಯಲ್ಲಿ, ಬೆಂಗಳೂರಿನಲ್ಲಿ ಮತ್ತು ರಾಜ್ಯದ ವಿವಿಧೆಡೆ ಬಂಧನಕ್ಕೆ ಒಳಗಾಗಿರುವ ಎಲ್ಲ ಕನ್ನಡಪರ ಕಾರ್ಯಕರ್ತರನ್ನೂ ಕೂಡಲೇ ಬಿಡುಗಡೆ ಮಾಡಬೇಕು. ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟ, ಕನ್ನಡಿಗರ ಮೇಲೆ, ಕನ್ನಡಿಗರ ಆಸ್ತಿಪಾಸ್ತಿ ಮೇಲೆ ದಾಳಿ ನಡೆಸುತ್ತಿರುವ ಭಯೋತ್ಪಾದಕ ಶಕ್ತಿಗಳ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದು ಒತ್ತಾಯಿಸಿದ್ದಾರೆ.
ಹೀಗಾಗಿ ಇಂದು ಸರ್ಕಾರಕ್ಕೆ ಎಂಇಎಸ್ ಬಿಸಿ ತುಪ್ಪವಾಗಲಿದೆ. ಸರ್ಕಾರದ ವಿರುದ್ಧ ಸಿಡಿದೇಳಲು ಕರವೇ ಕಾರ್ಯಕರ್ತರು ಹಾಗೂ ಪ್ರತಿಪಕ್ಷಗಳು ಸಕಲ ತಯಾರಿ ನಡೆಸಿಕೊಂಡಿವೆ. ಬೆಳಗಾವಿಯಲ್ಲಿ ನಾಲ್ಕು ದಿಕ್ಕುಗಳಿಂದಲೂ ಪ್ರತಿಭಟನೆಗೆ ಕಾರ್ಯಕರ್ತರು ಮುಂದಾಗಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಭಾರೀ ಪೊಲೀಸ್ ಬಿಗಿ ಬಂದೋಬಸ್ತ ಮಾಡಲಾಗಿದೆ. ಹಿರೇಬಾಗೇವಾಡಿ 400 ಪೊಲೀಸರನ್ನು ನಿಯೋಜಿಸಲಾಗಿದ್ದು ಸುವರ್ಣ ಸೌಧದ ಸುತ್ತಲು 600 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ವಿಕ್ರಂ ಆಮ್ಟೆ ಅವರು, 'ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೋಲಿಸರು ಹೈ ಅಲರ್ಟ್ ಆಗಿದ್ದಾರೆ. 144 ಸೆಕ್ಷನ್ ಜಾರಿ ಇರುವ ಬಗ್ಗೆ ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದೇವೆ. ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಅವರನ್ನು ತಡೆದು ಸೆಕ್ಷನ್ ಬಗ್ಗೆ ತಿಳಿ ಹೇಳುತ್ತೇವೆ. ಪ್ರತಿಭಟನಾಕಾರರು ನಮಗೆ ಬೆಂಬಲಿಸುತ್ತಾರೆನ್ನುವ ನಂಬಿಕೆ ಇದೆ" ಎಂದು ಅವರು ಹೇಳಿದ್ದಾರೆ.
Recommended Video