ಕ್ರೈಸ್ತರ ಮೇಲೆ ದಾಳಿ: 'ಎರಡೂ ಕಡೆಯಿಂದಲೂ ತಪ್ಪಾಗಿದೆ' ಎಂದ ಸಚಿವ ಆರಗ ಜ್ಞಾನೇಂದ್ರ
ಬೆಳಗಾವಿ, ಡಿಸೆಂಬರ್ 24: "ಕರ್ನಾಟಕದಲ್ಲಿ ಕ್ರೈಸ್ತರ ಮೇಲಿನ ಸರಣಿ ದಾಳಿಗೆ ಭಾಗಶಃ ಅವರ ತಪ್ಪುಗಳು ಕೂಡಾ ಕಾರಣ," ಎಂದು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಎನ್ಡಿಟಿವಿಗೆ ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದಾರೆ. "ಎರಡೂ ಕಡೆಯಿಂದಲೂ ತಪ್ಪು ನಡೆದಿದೆ," ಎಂದಿದ್ದಾರೆ.
ಕ್ರಿಸ್ಮಸ್ಗೆ ಎರಡು ದಿನಗಳ ಮೊದಲು, ವ್ಯಾಪಕ ಪ್ರತಿಭಟನೆಗಳ ನಡುವೆ ರಾಜ್ಯವು ವಿವಾದಾತ್ಮಕ ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕಾರ ಮಾಡಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿ ಕ್ರೈಸ್ತರ ಮೇಲೆ ಹೆಚ್ಚಾದ ದಾಳಿಯ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ, ಎರಡೂ ಕಡೆಯಿಂದ ತಪ್ಪು ನಡೆದಿದೆ ಎಂದು ಹೇಳಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಬಗ್ಗೆ ಕಾಂಗ್ರೆಸ್ ದ್ವಿಮುಖ ನೀತಿ: ಸಿಎಂ ಬಸವರಾಜ ಬೊಮ್ಮಾಯಿ
ಕ್ರೈಸ್ತರ ಚರ್ಚುಗಳ ಮೇಲೆ ಬಲಪಂಥೀಯ ಗುಂಪುಗಳ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಆರಗ ಜ್ಞಾನೇಂದ್ರ, "ಎರಡೂ ಕಡೆ ತಪ್ಪು ಇದೆ. ಅವರು ಬಲವಂತದ ಮತಾಂತರವನ್ನು ಮಾಡದಿದ್ದರೆ, ಈ ರೀತಿ ಗದ್ದಲ ಸೃಷ್ಟಿ ಮಾಡಿ ಮತಾಂತರವನ್ನು ನಿಲ್ಲಿಸಬೇಕಾದ ಪ್ರಮೇಯವೇ ಬರುತ್ತಿರಲಿಲ್ಲ," ಎಂದು ಹೇಳುವ ಮೂಲಕ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ವೇಳೆಯೇ "ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಿಲ್ಲ. ಈ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು," ಎಂದು ಕೂಡಾ ತಿಳಿಸಿದ್ದಾರೆ. ಇನ್ನು "ಈ ಕಾಯ್ದೆಯು ರಾಜ್ಯದಲ್ಲಿ ಅತಿರೇಕದ ಬಲವಂತದ ಮತಾಂತರವನ್ನು ತಪ್ಪಿಸುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿದೆ," ಎಂದು ಹೇಳಿದ ಸಚಿವರ ಬಳಿ ಈ ದಾಳಿ ಪ್ರತ್ಯೇಕತಾವಾದಿ ನೀತಿಯಿಂದಾಗಿ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದಾಗ, "ಒಂದೆಡೆ ಹೌದು, ಮತ್ತೊಂದೆಡೆ ಅಕ್ರಮ ಮತಾಂತರಗಳೂ ಕಾರಣವಾಗಿದೆ," ಎಂದು ಅಭಿಪ್ರಾಯಿಸಿದ್ದಾರೆ.
ಮತಾಂತರ ನಡೆಯುತ್ತಿದೆ ಎನ್ನಲು ಸರ್ಕಾರದ ಬಳಿ ಡೇಟಾ ಇದೆಯೇ?
ರಾಜ್ಯದಲ್ಲಿ ಮತಾಂತರ ನಡೆಯುತ್ತಿದೆ ಎಂದು ಸಾಬೀತುಪಡಿಸಲು ಸರ್ಕಾರದ ಬಳಿ ಡೇಟಾ ಇದೆಯೇ ಎಂದು ಕೂಡಾ ಮಾಧ್ಯಮಗಳು ಪ್ರಶ್ನೆ ಮಾಡಿದೆ. ಹೌದು ಎಂದು ಸಚಿವರು ಹೇಳಿದ್ದಾರೆ. ಇನ್ನು ಈ ಡೇಟಾವು ಮತಾಂತರ ನಡೆದ ಪ್ರಕರಣಗಳದ್ದೆ ಅಥವಾ ಆರೋಪಗಳದ್ದೆ ಎಂದು ಪ್ರಶ್ನೆ ಮಾಡಿದಾಗ, ಅದು ಆರೋಪಗಳು ಎಂದು ತಿಳಿಸಿದ್ದಾರೆ. "ಯಾವುದೇ ಪ್ರಕರಣಗಳು ದಾಖಲು ಆಗಿಲ್ಲ. ಉಡುಪಿಯಲ್ಲಿ ಒಂದು ಆತ್ಮಹತ್ಯೆ ನಡೆದಿದೆ. ಮಂಗಳೂರಿನಲ್ಲಿ ನಾಲ್ವರು ಮತಾಂತರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ," ಎಂದು ಹೊಸದುರ್ಗ ತಾಲೂಕಿನ ಬಿಜೆಪಿ ಶಾಸಕ ಗೂಳಿಹಟ್ಟಿ ಚಂದ್ರಶೇಖರ್ರನ್ನು ಉಲ್ಲೇಖಿಸಿ ಹೇಳಿದರು.
"ಪೊಲೀಸರಿಗೆ ದೂರು ನೀಡುವ ಮೊದಲು ಅವರು ಬಿಜೆಪಿ ಶಾಸಕ ಗೂಳಿಹಟ್ಟಿ ಚಂದ್ರಶೇಖರ್ ತನ್ನ ತಾಯಿಯನ್ನು ಮತಾಂತರ ಮಾಡದಂತೆ ಮನವಿ ಮಾಡಿದ್ದಾರೆ. ಹಾಗೆಯೇ ಮತಾಂತರಗೊಳ್ಳದಂತೆ ಜಾಗೃತಿಯನ್ನು ಕೂಡಾ ಮೂಡಿಸಿದರು. ಆದರೆ ಅವರು ದೂರು ದಾಖಲು ಮಾಡಲು ಪ್ರಯತ್ನ ಮಾಡಿದಾಗ ಪೊಲೀಸರು ದೂರು ದಾಖಲು ಮಾಡಿಕೊಂಡಿಲ್ಲ. ಯಾಕೆಂದರೆ ಯಾವ ಸೆಕ್ಷನ್ ಕೂಡಾ ಇಲ್ಲ. ಇದು ಪೊಲೀಸರ ತಪ್ಪಲ್ಲ. ಇನ್ನು ಸಿದ್ದರಾಮಯ್ಯನವರು ಐಪಿಸಿ ಸೆಕ್ಷನ್ 295 ಅಡಿಯಲ್ಲಿ ದೂರು ದಾಖಲು ಮಾಡಿಕೊಳ್ಳಬಹುದು ಎಂದು ಹೇಳುತ್ತಾರೆ. ಆದರೆ ಆ ಸೆಕ್ಷನ್ ಪೂಜಾ ಸ್ಥಳವನ್ನು ಅಪವಿತ್ರಗೊಳಿಸುವುದಕ್ಕೆ ದಾಖಲು ಮಾಡುವುದು ಆಗಿದೆ. ಮತಾಂತರಕ್ಕೆ ಯಾವುದೇ ಸೆಕ್ಷನ್ ಇಲ್ಲ," ಎಂದು ತಿಳಿಸಿದರು.
Recommended Video