ಕೇಂದ್ರವನ್ನು ಕೇಳಿದ್ದು 722 ಕೋಟಿ, ಕೊಟ್ಟಿದ್ದು 546 ಕೋಟಿ: ದೇಶಪಾಂಡೆ
ಬೆಳಗಾವಿ, ಡಿಸೆಂಬರ್ 17 : ಆಗಸ್ಟ್ ತಿಂಗಳಲ್ಲಿ ಉಂಟಾದ ಪ್ರವಾಹ ಹಾಗೂ ಭೂ-ಕುಸಿತದಿಂದ ಕೊಡಗು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಉಂಟಾಗಿರುವ ತೋಟಗಾರಿಕೆ ಬೆಳೆಗಳ ನಷ್ಟ ಹಾಗೂ ಮೂಲಸೌಕರ್ಯ ಹಾನಿಗಳಿಗೆ ಸಂಬಂಧಿಸಿದಂತೆ ರೈತರ ಖಾತೆಗಳಿಗೆ ನಷ್ಟ ಪರಿಹಾರ ಹಣ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಆರ್ವಿ.ದೇಶಪಾಂಡೆ ಹೇಳಿದರು.
ಕೊಡಗು ಹಾಗೂ ವಿವಿಧ ಜಿಲ್ಲೆಗಳ ಪ್ರವಾಹ ಹಾನಿಗೆ 722.07 ಕೋಟಿ ರೂ. ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಬೇಡಿಕೆಯ ಈ ಪೈಕಿ 546.21 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಅವರು ಮಾಹಿತಿ ನೀಡಿದರು.
ಎರಡು ತಿಂಗಳಲ್ಲಿ 466 ಪಶುವೈದ್ಯರ ನೇಮಕ: ವೆಂಕಟರಾವ್ ನಾಡಗೌಡ
ರಾಜ್ಯ ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಕಲಾಪ ವೇಳೆ ಶಾಸಕ ಕೆ. ಜಿ. ಬೋಪಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೊಡಗು ಸೇರಿದಂತೆ ಪ್ರವಾಹ ಪೀಡಿತ ಎಂಟು ಜಿಲ್ಲೆಗಳಲ್ಲಿ ಹಾನಿಗಳಿಗಾಗಿ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ (ಎನ್.ಡಿ.ಆರ್.ಎಫ್) ಯ ಮಾರ್ಗಸೂಚಿಗಳನ್ವಯ ಕೋರಲಾದ ಪರಿಹಾರದ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 546.21 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಈ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರವನ್ನು ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಿ, ಡಿಸ್ನಿಲ್ಯಾಂಡ್ ಆಮೇಲೆ: ಯಡಿಯೂರಪ್ಪ
ತುರ್ತು ಕಾಮಗಾರಿಗೆ 25 ಕೋಟಿ
ಕೊಡಗು ಜಿಲ್ಲೆಗೆ ಸಂಬಂಧಿಸಿದ ತುರ್ತು ಕಾಮಗಾರಿಗಳಿಗೆ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಲ್ಲದೆ, ವಿವಿಧ ಇಲಾಖೆಗಳ ಮೂಲಕ ಮೂಲಸೌಕರ್ಯ ಕಾಮಗಾರಿಗಳ ಅನುಷ್ಠಾನಗೊಳಿಸಲು 85 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.
ಕೊಡಗಿನಲ್ಲಿ 302 ಕಾಮಗಾರಿಗಳು
ಕೊಡಗು ಜಿಲ್ಲೆಯಲ್ಲಿ ಸುಮಾರು 302 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಂತೆಯೇ, ಈ ಕಾಮಗಾರಿಗಳನ್ನು ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ರ 4 (g) ಅನ್ವಯ ವಿನಾಯತಿ ನೀಡಲಾಗಿದೆ. ಅಲ್ಲದೆ ಉತ್ತಮ ಗುಣಮಟ್ಟದ ಸೇವೆಯಲ್ಲಿ ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಂಗ್ರಹಣಾ ಪ್ರಾಧಿಕಾರವು ದೃಢಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದರು.
ಜಿಲ್ಲಾ ಮಟ್ಟದ ಸಮಿತಿಗಳ ರಚನೆ
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಜಿಲ್ಲಾ ಮಟ್ಟದ ಸಮಿತಿಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಕ್ರಿಯಾಯೋಜನೆಗಳನ್ನು ಅನುಮೋದನೆ ಪಡೆದ ನಂತರ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಆರ್. ವಿ. ದೇಶಪಾಂಡೆ ಅವರು ಮಾಹಿತಿ ನೀಡಿದರು.
ಪ್ರತಾಪ್ ಸಿಂಹ vs ಕುಮಾರಸ್ವಾಮಿ
ಕೇಂದ್ರದ ಅನುದಾನದ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಮತ್ತು ಸಿಎಂ ಕುಮಾರಸ್ವಾಮಿ ನಡುವೆ ಬಹಿರಂಗವಾಗಿ ವಾಗ್ವಾದ ನಡೆದಿತ್ತು. ಪ್ರತಾಪ್ ಸಿಂಹ ಅವರು ವೇದಿಕೆಯಲ್ಲಿಯೇ ಕೇಂದ್ರ ಇಷ್ಟು ಅನುದಾನ ಕೊಟ್ಟಿದೆ, ರಾಜ್ಯ ಅದನ್ನು ಬಹಿರಂಗ ಪಡಿಸಿಲ್ಲ ಎಂದಿದ್ದರು. ಪ್ರತಾಪ್ ಸಿಂಹ ಮಾತು ಸಿಎಂ ಅವರನ್ನು ಕೆರಳಿಸಿತ್ತು. ಆ ನಂತರ ಪ್ರತಾಪ್ ಸಿಂಹ ಸುಮ್ಮನಾದರು.