ರೈತರಿಗೆ ಪಿಸ್ತೂಲು ತೋರಿದ್ದ ಕಾರ್ಖಾನೆ ಅಧಿಕಾರಿ ವಶಕ್ಕೆ
ಬೆಳಗಾವಿ, ಫೆ. 4: ರೈತರಿಗೆ ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ ಹಾಕಿದ ಆರೋಪದ ಮೇಲೆ ರಾಮದುರ್ಗ ತಾಲೂಕಿನ ಶಿವಸಾಗರ ಸಕ್ಕರೆ ಕಾರ್ಖಾನೆ ಕಬ್ಬು ಅಭಿವೃದ್ಧಿ ಅಧಿಕಾರಿ ಅಶೋಕ ಉರುಬಿನಟ್ಟಿ ಎಂಬುವರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಅಶೋಕ ಉರುಬಿನಟ್ಟಿ ಅವರಿಂದ ಪಿಸ್ತೂಲನ್ನು ಪೊಲೀಸರು ಬುಧವಾರ ವಶಪಡಿಸಿಕೊಂಡು ಅಮಾನತು ಮಾಡಿದ್ದಾರೆ. ಅಶೋಕ ಅವರ ಪಿಸ್ತೂಲ್ ಪರವಾನಗಿ ರದ್ದುಪಡಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ತಿಳಿಸಿದ್ದಾರೆ.
ಆಗಿದ್ದೇನು? : ಶಿವಸಾಗರ ಸಕ್ಕರೆ ಕಾರ್ಖಾನೆಯು ಷೇರುಗಳನ್ನು ರೈತರು ತಲಾ 5 ಸಾವಿರ ರು. ನೀಡಿ ಖರೀದಿಸಿದ್ದರು. ಆದರೆ, ನಾಲ್ಕು ವರ್ಷ ಕಳೆದರೂ ರೈತರಿಗೆ ಷೇರು ಪತ್ರ ವಿತರಿಸಿರಲಿಲ್ಲ. ಆದ್ದರಿಂದ ಶೀಘ್ರ ಷೇರು ಪತ್ರ ನೀಡಬೇಕೆಂದು ಆಗ್ರಹಿಸಲು ರೈತರು ಮಂಗಳವಾರ ಕಾರ್ಖಾನೆಗೆ ತೆರಳಿದ್ದರು.
ಆಗ ಸಿಟ್ಟಿಗೆದ್ದ ಕಬ್ಬು ಅಭಿವೃದ್ಧಿ ಅಧಿಕಾರಿ ಅಶೋಕ ಉರುಬಿನಟ್ಟಿ ರೈತರಿಗೆ ಪಿಸ್ತೂಲು ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆಂದು ರೈತರು ಆರೋಪಿಸಿದ್ದರು. ನಂತರ ಕಟಕೋಳ ಪೊಲೀಸ್ ಠಾಣೆಯಲ್ಲಿ ಅಶೋಕ ಉರುಬಿನಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದರು.