ಆರೋಪಕ್ಕೆ ಉತ್ತರವಾಗಿ ಗಳಗಳನೆ ಅತ್ತ ಅಶೋಕ ಪೂಜಾರಿ
ಬೆಳಗಾವಿ, ನವೆಂಬರ್ 16: ಗೋಕಾಕ ಉಪ ಚುನಾವಣೆ ಕಾವು ಸಾಕಷ್ಟು ರಾಜಕೀಯ ಹೈಡ್ರಾಮಾಗಳಿಗೆ ವೇದಿಕೆ ಆಗುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಗೆ ಬಂಡಾಯ ಅಭ್ಯರ್ಥಿಗಳೇ ತಲೆನೋವಾಗಿದ್ದಾರೆ. ಇತ್ತ ಹೊಂದಾಣಿಕೆ ರಾಜಕೀಯ ಆರೋಪಕ್ಕೆ ಬೇಸತ್ತು ಬಿಜೆಪಿ ಬಂಡಾಯ ಅಭ್ಯರ್ಥಿ ಅಶೋಕ ಪೂಜಾರಿ ಬಹಿರಂಗ ಸಭೆಯಲ್ಲಿ ಕಣ್ಣೀರಿಟ್ಟಿದ್ದಾರೆ.
ಇಂದು ಬೆಂಬಲಿಗರ ಮಹತ್ವದ ಸಭೆ ನಡೆಸಿದ ಅಶೋಕ ಪೂಜಾರಿ, ಬಿಜೆಪಿಯಲ್ಲಿ ಉಳಿಯಬೇಕಾ ಚುನಾವಣೆಗೆ ಸ್ಪರ್ಧಿಸಬೇಕಾ ಎಂದು ಸುದೀರ್ಘ ಚರ್ಚೆ ನಡೆಸಿದರು. ಈ ಸಂದರ್ಭ, ಚುನಾವಣೆಯಿಂದ ಹಿಂದೆ ಸರಿಯಲು ಹೊಂದಾಣಿಕೆ ರಾಜಕಾರಣಕ್ಕೆ ಹಣ ಪಡೆದಿದ್ದಾರೆ ಎಂಬ ಆರೋಪ ಅಶೋಕ ಪೂಜಾರಿ ಮೇಲೆ ಕೇಳಿ ಬಂದಿದ್ದು, ಈ ಆರೋಪಕ್ಕೆ ನೊಂದು ಸಾರ್ವಜನಿಕವಾಗಿ ಗಳಗಳನೆ ಅತ್ತರು.
ಕಾಂಗ್ರೆಸ್ನತ್ತ ಬಿಜೆಪಿ ನಾಯಕರ ಒಲವು:ಹಿಂದಿರುವ ಕಾಣದ 'ಕೈ' ಯಾರದ್ದು?
ಅಷ್ಟೇ ಅಲ್ಲದೇ, ಬೆಂಬಲಿಗರ ಎದುರು ಮೈಮೇಲೆ ಎರಡು ಕೊಡ ನೀರು ಸುರಿದುಕೊಂಡು ಕಣ್ಣೀರಿಡುತ್ತಲೇ ಸಂಗಮನಾಥನ ಮೇಲೆ ಪ್ರಮಾಣ ಮಾಡಿ, "ನಾನು ಯಾರ ಬಳಿಯೂ ಒಂದು ರೂಪಾಯಿಯನ್ನೂ ಪಡೆದಿಲ್ಲ. ಮೂರು ಚುನಾವಣೆಗಳಲ್ಲಿ 30 ಎಕರೆ ಹೊಲ ಮಾರಿ, ಕೋಟ್ಯಂತರ ಸಾಲ ಮಾಡಿಕೊಂಡಿದ್ದೇನೆ" ಎಂದು ಬೇಸರಗೊಂಡರು. ನಾಳೆ ತಮ್ಮ ರಾಜಕೀಯ ನಡೆಯನ್ನು ಸ್ಪಷ್ಡ ಪಡಿಸುವುದಾಗಿಯೂ ತಿಳಿಸಿದರು.
ಒಟ್ಟಿನಲ್ಲಿ ಗೋಕಾಕ ಉಪ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಕಿತ್ತಾಟ ಒಂದೆಡೆಯಾದರೆ ಮತ್ತೊಂದೆಡೆ ಅಶೋಕ ಪೂಜಾರಿ ಕಣ್ಣೀರು ಹಾಕಿದ್ದು ಗೋಕಾಕ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇನ್ನೆರಡು ದಿನಗಳಲ್ಲಿ ಗೋಕಾಕ ರಾಜಕೀಯ ಚಿತ್ರಣ ಸ್ಪಷ್ಟವಾಗಲಿದೆ.