ಜಾರಕಿಹೊಳಿ ಕುಟುಂಬದ ಮುಂದೆ ಮತ್ತೊಂದು ಸರ್ಕಾರಿ ಕಾರು!
ಬೆಳಗಾವಿ, ಡಿಸೆಂಬರ್ 14; ಜಾರಕಿಹೊಳಿ ಕುಟುಂಬ ಬೆಳಗಾವಿ ಮತ್ತು ರಾಜ್ಯ ರಾಜಕೀಯದ ಪ್ರಭಾವ ಶಾಲಿ ಕುಟುಂಬ. ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಲಖನ್ ಜಾರಕಿಹೊಳಿ ಗೆದಿದ್ದಾರೆ. ಇದರಿಂದಾಗಿ ಕುಟುಂಬದಲ್ಲಿ ನಾಲ್ವರು ಶಾಸಕರು ಆದಂತಾಗಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಲಖನ್ ಜಾರಕಿಹೊಳಿಗೆ ಬಿಜೆಪಿ ಟಿಕೆಟ್ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ಟಿಕೆಟ್ ಕೈತಪ್ಪಿತ್ತು, ಪಕ್ಷೇತರ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದರು.
ಸಚಿವ ಸ್ಥಾನ ಸಿಗದ ಸೇಡು ತೀರಿಸಿಕೊಂಡ ರಮೇಶ್ ಜಾರಕಿಹೊಳಿ!
ಮಂಗಳವಾರ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲಿ 2526 ಮತಗಳನ್ನು ಪಡೆದು ಪಕ್ಷೇತರ ಅಭ್ಯರ್ಥಿಯಾಗಿದ್ದ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದರು. ಈ ಮೂಲಕ ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದರು.
ವಿಧಾನ ಪರಿಷತ್ ಚುನಾವಣೆ 2021; ಗೆದ್ದವರು, ಸೋತವರ ಪಟ್ಟಿ
2019ರಲ್ಲಿ ನಡೆದ ಗೋಕಾಕ್ ಉಪ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಸಹೋದರ ರಮೇಶ್ ಜಾರಕಿಹೊಳಿ ವಿರುದ್ಧ ಸ್ಪರ್ಧಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯ ಮಂಗಲ ಸುರೇಶ್ ಅಂಗಡಿ ಪರವಾಗಿ ಕೆಲಸ ಮಾಡಿದ್ದರು.
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಲಖನ್ ಜಾರಕಿಹೊಳಿ!
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಗಲಿಲ್ಲ, ಬೆಳಗಾವಿ ದ್ವಿ-ಸದಸ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಹಾಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋಲಿಸಿ ವಿಧಾನ ಪರಿಷತ್ ಪ್ರವೇಶ ಮಾಡಿದ್ದಾರೆ.
ನಾಲ್ವರು ಶಾಸಕರು; ವಿಧಾನ ಪರಿಷತ್ ಚುನಾವಣೆಯಿಂದ ಕುಟುಂಬ ರಾಜಕೀಯ ಮತ್ತಷ್ಟು ಬೆಳದಿದೆ. ಜಾರಕಿಹೊಳಿ ಕುಟುಂಬದಲ್ಲಿಯೇ ಈಗ ನಾಲ್ವರು ಶಾಸಕರಿದ್ದಾರೆ. ರಮೇಶ್ ಜಾರಕಿಹೊಳಿ (ಗೋಕಾಕ್) ಮತ್ತು ಬಾಲಚಂದ್ರ ಜಾರಕಿಹೊಳಿ (ಅರಭಾವಿ) ಶಾಕರಾಗಿದ್ದು, ಬಿಜೆಪಿಯಲ್ಲಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿ (ಯಮಕನಮರಡಿ) ಕ್ಷೇತ್ರದ ಶಾಸಕರು. ಇದೀಗ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬರುವ ಮೂಲಕ ಮೇಲ್ಮನೆ ಸದಸ್ಯರಾಗಿದ್ದಾರೆ. ಮುಂದೆ ಲಖನ್ ಯಾವ ಪಕ್ಷ ಸೇರಲಿದ್ದಾರೆ? ಎಂದು ಕಾದು ನೋಡಬೇಕಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಲಖನ್ ಜಾರಕಿಹೊಳಿಯನ್ನು 2ನೇ ಅಭ್ಯರ್ಥಿಯಾಗಿ ಪರಿಗಣಿಸಿ ಟಿಕೆಟ್ ನೀಡಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದರು. ಆದರೆ ಪಕ್ಷ ಟಿಕೆಟ್ ನೀಡದ ಕಾರಣ ಪಕ್ಷೇತರ ಅಭ್ಯರ್ಥಿಯಾದರು, ಚುನಾವಣೆ ಗೆದ್ದರು.
ಯಾರೂ ಸಚಿವರಲ್ಲ; ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರವಿರಲಿ ಬೆಳಗಾವಿಯ ಜಾರಕಿಹೊಳಿ ಕುಟುಂಬದ ಒಬ್ಬರು ಸಚಿವರಾಗಿರುತ್ತಿದ್ದರು. ಇದಕ್ಕೆ ಕುಟುಂಬದ ಸದಸ್ಯರು ಬೇರೆ-ಬೇರೆ ಪಕ್ಷದಲ್ಲಿ ಇರುವುದು ಕಾರಣವಾಗಿತ್ತು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಜಾರಕಿಹೊಳಿ ಕುಟುಂಬದ ಯಾರೂ ಸಹ ಸಚಿವರಾಗಿಲ್ಲ.
ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿದ್ದರು. ಬಳಿಕ ಜಾರಕಿಹೊಳಿ ಕುಟುಂಬದಿಂದ ಯಾರೂ ಸಹ ಸಚಿವರಾಗಿಲ್ಲ. ಈಗ ಲಖನ್ ಜಾರಕಿಹೊಳಿ ಎಂಎಲ್ಸಿ ಆಗುವ ಮೂಲಕ ಕುಟುಂಬದ ನಾಲ್ವರು ಶಾಸಕರು ವಿಧಾನಸೌಧ ಪ್ರವೇಶ ಮಾಡಿದ್ದಾರೆ.
2004ರಲ್ಲಿ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಸತೀಶ್ ಜಾರಕಿಹೊಳಿ ಸಚಿವರಾಗಿದ್ದರು. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬಾಲಚಂದ್ರ ಜಾರಕಿಹೊಳಿ ಸಚಿವರಾಗಿ ಸಂಪುಟ ಸೇರಿದರು.
2008ರಲ್ಲಿ ಬಿಜೆಪಿ ಸರ್ಕಾರ ಬಂದಾಗ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಬಾಲಚಂದ್ರ ಜಾರಕಿಹೊಳಿ ಸಚಿವರಾಗಿದ್ದರು. 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಸತೀಶ್ ಜಾರಕಿಹೊಳಿ ಸಚಿವರಾದರು. ಸಂಪುಟ ಪುನಾರಚನೆ ಬಳಿಕ ಸತೀಶ್ ಬದಲು ರಮೇಶ್ ಜಾರಕಿಹೊಳಿ ಸಚಿವರಾದರು.
2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ಮತ್ತೆ ಸಚಿವರಾದರು. 2019ರಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಗೊಂಡಾಗ ಅವರು ಪುನಃ ಜಲಸಂಪನ್ಮೂಲ ಖಾತೆ ಸಚಿವರಾದರು.
Recommended Video