ಬೆಳಗಾವಿ : ಕಾಂಗ್ರೆಸ್ನಿಂದ ಲೋಕಸಭಾ ಕಣಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ?
ಬೆಂಗಳೂರು, ಮಾರ್ಚ್ 14 : ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಸಾಧಿಸಬೇಕು ಎಂದು ಕಾಂಗ್ರೆಸ್ ಪಣ ತೊಟ್ಟಿದೆ. ಸತತ ಮೂರು ಚುನಾವಣೆಗಳಲ್ಲಿ ಸೋತಿರುವ ಪಕ್ಷ ಈ ಬಾರಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಹುಡುಕಾಟ ನಡೆಸಿದೆ.
ಖಾನಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ ಅವರು ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಹೈಕಮಾಂಡ್ ಮಟ್ಟದಲ್ಲಿಯೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಜೆಪಿಯಿಂದ ಹಾಲಿ ಸಂಸದ ಸುರೇಶ ಅಂಗಡಿ ಅವರು ಕಣಕ್ಕಿಳಿಯಲಿದ್ದಾರೆ.
ಲಖನ್ ಬಿಜೆಪಿ ಅಭ್ಯರ್ಥಿ, ಸ್ಪಷ್ಟನೆ ಕೊಟ್ಟ ಸತೀಶ್ ಜಾರಕಿಹೊಳಿ
'ಕಳೆದ ಬಾರಿ ಲೋಕಸಭಾ ಚುನಾವಣೆ ಟಿಕೆಟ್ ಪಡೆದುಕೊಂಡಿದ್ದೆ. ಮೋದಿ ಅಲೆ ಇದ್ದರೂ ನಾಲ್ಕು ಲಕ್ಷ ಮತಗಳನ್ನು ಪಡೆದಿದ್ದೆ. ಈಗ ಶಾಸಕಿಯಾಗಿದ್ದು, ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ. ಪಕ್ಷದ ಹೈಕಮಾಂಡ್ ಹೇಳಿದಂತೆ ಕೇಳುವೆ' ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
20 ಕ್ಷೇತ್ರಗಳಿಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಈ ಕುರಿತು ಮಾತನಾಡಿದ್ದು, 'ಅಂಜಲಿ ನಿಂಬಾಳ್ಕರ ಅವರಾಗಿಯೇ ಟಿಕೆಟ್ ಕೇಳಿಲ್ಲ. ಆದರೆ, ಅವರ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚಿಂತನೆ ನಡೆದಿದೆ. ಸದ್ಯದಲ್ಲೇ ಹೆಸರು ಅಂತಿಮಗೊಳ್ಳಲಿದೆ' ತಿಳಿಸಿದ್ದಾರೆ...
ಎರಡು ಸಮದಾಯದ ಮತಗಳು
ಬೆಳಗಾವಿಯಲ್ಲಿ ಲಿಂಗಾಯತ ಮತ್ತು ಮರಾಠಾ ಮತಗಳನ್ನು ಸೆಳೆಯಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಅದಕ್ಕಾಗಿ ಮರಾಠಾ ಸಮುದಾಯಕ್ಕೆ ಸೇರಿದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ ಅವರನ್ನು ಕಣಕ್ಕಿಳಿಸಲು ಚರ್ಚೆ ನಡೆಯುತ್ತಿದೆ.
ಮೂಲತಃ ಮುಂಬೈನವರು
ಅಂಜಲಿ ನಿಂಬಾಳ್ಕರ ಅವರು ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ ಅವರ ಪತ್ನಿ. ಮೂಲತಃ ಮುಂಬೈನವರು. ಹೇಮಂತ ನಿಂಬಾಳ್ಕರ ಅವರು ಬೆಳಗಾವಿಗೆ ಎಸ್ಪಿಯಾಗಿ ಬಂದಾಗ ಇವರು ಬಂದರು. ಖಾನಾಪುರದಲ್ಲಿ ಮನೆ ಮಾಡಿದರು. ಗ್ರಾಮ ಮಟ್ಟದಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಿ ಜನರಿಗೆ ಹತ್ತಿರವಾದರು.
ಗೆಲುವಿನ ಲೆಕ್ಕಾಚಾರ
ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ ಕ್ಷೇತ್ರಗಳಲ್ಲಿ ಮರಾಠಿಗರು ಪ್ರಬಲರಾಗಿದ್ದಾರೆ. ಇವುವಗಳ ಜೊತೆ ಕಾಂಗ್ರೆಸ್ ಸಂಪ್ರದಾಯಿಕ ಮತಗಳು ಸೇರಿದರೆ ಗೆಲುವು ಸುಲಭ ಎಂಬುದು ಲೆಕ್ಕಾಚಾರವಾಗಿದೆ.
ತೀವ್ರ ಪೈಪೋಟಿ ನೀಡಿದ್ದರು
2014ರ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 4.78 ಲಕ್ಷ ಮತಗಳನ್ನು ಪಡೆದಿದ್ದ ಅವರು ಸುರೇಶ ಅಂಗಡಿ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು. ಆದರೆ, 2018ರ ವಿಧಾನಸಭೆ ಚುನಾವಣೆಯಲ್ಲಿ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಆದ್ದರಿಂದ, ಈ ಬಾರಿ ಅವರು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.
ಒಮ್ಮತದ ಅಭ್ಯರ್ಥಿ ಆಯ್ಕೆ
ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರಕ್ಕೆ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಚಿಕ್ಕೋಡಿಯಿಂದ ಪ್ರಕಾಶ್ ಹುಕ್ಕೇರಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಬೆಳಗಾವಿ ಕ್ಷೇತ್ರಕ್ಕೆ ಆಯ್ಕೆ ನಡೆಯಬೇಕಿದೆ.