ಕೊರೊನಾ ಸೋಂಕಿತ ಸಾವು: ಆ್ಯಂಬುಲೆನ್ಸ್ ಗೆ ಬೆಂಕಿ ಹಚ್ಚಿದ ಕುಟುಂಬಸ್ಥರು
ಬೆಳಗಾವಿ, ಜುಲೈ 23: ಬೆಳಗಾವಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಸಾವನ್ನಪ್ಪಿದ್ದರ ಹಿನ್ನೆಲೆ ಆಕ್ರೋಶಗೊಂಡ ರೋಗಿಯ ಸಂಬಂಧಿಕರು ಸೇರಿದಂತೆ ಹತ್ತಾರು ಜನರ ಗುಂಪೊಂದು ಅಥಣಿಯಿಂದ ಆಗಮಿಸಿದ ಆ್ಯಬುಲೆನ್ಸ್ ಗೆ ಬೆಂಕಿ ಹಚ್ಚುವುದರ ಜೊತೆಗೆ ಆಸ್ಪತ್ರೆಯ ಮೇಲೆ ಕಲ್ಲು ತೂರಾಟ ನಡೆಸಿ, ವೈದ್ಯರು, ವಾರ್ಡ್ ಬಾಯ್ ಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
Recommended Video
ಬುಧವಾರ ರಾತ್ರಿ 9.15 ಕ್ಕೆ ಈ ಘಟನೆ ಸಂಭವಿಸಿದ್ದು, ಬೆಳಗಾವಿಯ ಬಿಮ್ಸ ಆಸ್ಪತ್ರೆಯ ಕೋವಿಡ್ ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಹಿನ್ನೆಲೆ ಆಕ್ರೋಶಗೊಂಡ ಸಂಬಂಧಿಕರು ಈ ರೀತಿ ಗೂಂಡಾ ವರ್ತನೆ ತೋರಿದ್ದಾರೆ.
ಬಿಮ್ಸ್ನಲ್ಲಿ ಹೊಟ್ಟೆ ನೋವಿನಿಂದ ನರಳಾಡಿದ ಸೋಂಕಿತ ವೃದ್ಧನ ವಿಡಿಯೋ ವೈರಲ್
ರೋಗಿಯ 10 ಕ್ಕೂ ಹೆಚ್ಚು ಸಂಬಂಧಿಕರು ಬಿಮ್ಸ ಕೋವಿಡ್ ವಾರ್ಡ್ ಮುಂದೆ ನಿಂತಿದ್ದ ಆ್ಯಬುಲೆನ್ಸ್ ಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದ್ದಾರೆ. ನೋಡ ನೋಡುತ್ತಿದ್ದಂತೆ ಆ್ಯಬುಲೆನ್ಸ್ ಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಆ್ಯಬುಲೆನ್ಸ್ ಸುಟ್ಟು ಕರಕಲಾಗಿದೆ.
ಅಷ್ಟೇ ಅಲ್ಲದೇ ಐಸಿಯು ವಾರ್ಡನಲ್ಲಿದ್ದ ವೈದ್ಯರು ಮತ್ತು ಸಿಬ್ಬಂದಿ ಮೇಲೆ ಹಲ್ಲೆಗೂ ದುಷ್ಕರ್ಮಿಗಳು ಮುಂದಾಗಿದ್ದರು. ಪೊಲೀಸ್ ವಾಹನ, ಕಾರುಗಳ ಗಾಜನ್ನು ಪುಡಿ ಪುಡಿ ಮಾಡಿ ತಮ್ಮ ದರ್ಪ ಮೆರೆದಿದ್ದಾರೆ. ಸರಿಯಾಗಿ ಪೊಲೀಸ್ ಸಿಬ್ಬಂದಿ ಭದ್ರತೆ ನಿಯೋಜನೆ ಮಾಡಿದ್ದರಿಂದ ಯಾರ ಮೇಲೆಯೂ ಹಲ್ಲೆ ಆಗಿಲ್ಲ ಎನ್ನಲಾಗುತ್ತಿದೆ.
ಇನ್ನು ಗಲಾಟೆ ಆರಂಭವಾದ ತಕ್ಷಣವೇ ಆ್ಯಬುಲೆನ್ಸ್ ನಲ್ಲಿದ್ದ ಚಾಲಕ, ನರ್ಸ್, ಕೊರೊನಾ ಆಸ್ಪತ್ರೆ ಒಳಗೆ ಓಡಿ ಹೋಗಿದ್ದಾರೆ. ಅಥಣಿಯಿಂದ ಕೊರೊನಾ ರೋಗಿಯನ್ನು ಕರೆದುಕೊಂಡು ಈ ಆ್ಯಬುಲೆನ್ಸ್ ಬಂದಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ, ಪೊಲೀಸ್ ಕಮಿಷನರ್ ಡಾ.ಕೆ.ತ್ಯಾಗರಾಜ, ಜಿ.ಪಂ ಸಿಇಒ ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾವು ಕಚ್ಚಿತ್ತು, ಕೊರೊನಾ ಬಂದಿತ್ತು; ಸಾವು ಗೆದ್ದವನಿಗೆ ಊರಲ್ಲಿ ಸ್ವಾಗತ
ಆ್ಯಬುಲೆನ್ಸ್ ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಬೀಮ್ಸ್ ಮುಂದೆ ಘಟನೆ ಖಂಡಿಸಿ ಕೊರೊನಾ ವಾರಿಯರ್ಸ್ ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆಯ ಮುಂದೆ ವೈದ್ಯರು, ನರ್ಸ್, ಆಯಾಗಳಿಂದ ಪ್ರತಿಭಟನೆ ನಡೆಯುತ್ತಿದೆ.
ಬೀಮ್ಸ್ ಆಸ್ಪತ್ರೆ ಸಿಬ್ಬಂದಿಗಳು ಭಯದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ, ಆಸ್ಪತ್ರೆ ಸಿಬ್ಬಂದಿ ಗೆ ಸೂಕ್ತ ಭದ್ರತೆ ನೀಡಲು ಆಗ್ರಹಿಸಿದರು. ಗಲಾಟೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕೆಂದು ನೂರಾರು ಬೀಮ್ಸ್ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗವಹಿಸಿ ಒತ್ತಾಯಿಸಿದರು.