ಗೋಕಾಕಲ್ಲಿ ಅಂಗನವಾಡಿ ನೌಕರರ ಪ್ರತಿಭಟನೆ
ಗೋಕಾಕ, ಡಿಸೆಂಬರ್ 1: ಬಾಲವಿಕಾಸ ಸಮಿತಿ ಜಂಟಿ ಖಾತೆ ತೆರೆಯುವ ಆದೇಶವನ್ನು ವಿರೋಧಿಸಿ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಪ್ರತಿಭಟನೆ ನಡೆಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸೇರಿದ ಅಂಗನವಾಡಿ ಕಾರ್ಯಕರ್ತರು ಸಿಡಿಪಿಒ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸಿಡಿಪಿಒ ಅರುಣ್ ನೀರಗಟ್ಟಿ ಅವರಿಗೆ ಮನವಿ ಅರ್ಪಿಸಿದರು. ಬಾಲವಿಕಾಸ ಸಮಿತಿ ಅಧ್ಯಕ್ಷರ ಜೊತೆ ಜಂಟಿ ಖಾತೆ ತೆರೆಯಲು ಹೇಳಲಾಗುತ್ತಿದೆ. ಈ ಹಿಂದೆ ಇಂಥದೇ ಆದೇಶ ಪ್ರಕಾರ ಜಂಟಿ ಖಾತೆ ತೆರೆದಾಗ ಹಲವಾರು ಸಮಸ್ಯೆಗಳು ಉದ್ಭವಿಸಿವೆ ಪುನಃ ಅದೇ ಆಗುವುದು ಬೇಡ. ಹಿಂದಿನ ಪದ್ಧತಿಯೇ ಮುಂದುವರಿಸಬೇಕು.
ತರಕಾರಿ, ಅಡುಗೆ ಅನಿಲ ಹಣ ಮುಂಚಿತವಾಗಿ ಕಾರ್ಯಕರ್ತರ ಖಾತೆಗೆ ಜಮಾ ಮಾಡಬೇಕು, ಅಡುಗೆ ಸಲಕರಣೆ ಹಾಗೂ ಶುದ್ಧ ಕುಡಿವ ನೀರು ಪೂರೈಸಬೇಕು, ಅಂಗನಾಡಿ ದಾಖಲೆಗಳ ಹೊರೆ ಕಡಿಮೆ ಮಾಡಬೇಕು, ಪ್ರತಿ ತಿಂಗಳು 5ನೇ ತಾರೀಖು ಒಳಗಾಗಿ ಗೌರವಧನ ಬಿಡುಗಡೆ ಮಾಡಬೇಕು,
ನಿವೃತ್ತಿಯಾದಾಗ ಅಂಗನವಾಡಿ ಸಿಬ್ಬಂದಿಗೆ ನಿವೃತ್ತಿ ಹಣ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಮರಣ ಹೊಂದಿದವರಿಗೆ ಪರಿಹಾರ ಧನ ಬಿಡುಗಡೆ ಮಾಡಬೇಕು, ಗುಣಮಟ್ಟದ ಆಹಾರ ಸರಿಯಾಗಿ ಸರಬರಾಜು ಆಗಬೇಕು ಸೇರಿದಂತೆ 17 ಬೇಡಿಕೆ ಈಡೇರಿಸಲು ಮನವಿ ಒತ್ತಾಯಿಸಲಾಯಿತು. ಪ್ರತಿಭಟನೆ ನೇತೃತ್ವವನ್ನು ಅಂಗನವಾಡಿ ಕಾರ್ಯಕರ್ತೆ ಸಂಘದ ಅಧ್ಯಕ್ಷೆ ದೊಡ್ಡವ್ವ ಪೂಜೇರಿ, ಕಾರ್ಯದರ್ಶಿ ಮುನೀರ್ ಮುಲ್ಲಾ, ಖಂಜಾಚಿ ಕಲ್ಲಪ್ಪ ಮಾದರ ವಹಿಸಿದ್ದರು.