ಒಂದೇ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ ಎಂದ ಡಿಸಿಎಂ!
ಬೆಳಗಾವಿ, ನವೆಂಬರ್.27: ರಾಜ್ಯದಲ್ಲಿ ಉಪ ಚುನಾವಣೆ ಸಮರದ ಕಾವು ದಿನೇ ದಿನೆ ಹೆಚ್ಚುತ್ತಲೇ ಇದೆ. ಅನರ್ಹ ಶಾಸಕರ ಮೇಲೆ ಕಾಂಗ್ರೆಸ್, ಕಾಂಗ್ರೆಸ್ ಮೇಲೆ ಬಿಜೆಪಿ, ಬಿಜೆಪಿ ವಿರುದ್ಧ ಜೆಡಿಎಸ್ ಹೀಗೆ ಹೋದಲ್ಲಿ ಬಂದಲ್ಲೆಲ್ಲ ನಾಯಕರು ಒಬ್ಬರ ಮೇಲೊಬ್ಬರು ಹರಿಹಾಯುತ್ತಿದ್ದಾರೆ.
ಈ ರಾಜಕೀಯ ಕೆಸರೆರಚಾಟದಲ್ಲಿ ಡಿಸಿಎಂ ಗೋವಿಂದ್ ಕಾರಜೋಳ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿತ್ತು. ಅಥಣಿಯ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ನಿವಾಸದಲ್ಲಿ ಸ್ವತಃ ಡಿಸಿಎಂ ಸಾಹೇಬರೇ ಹಣ ಹಂಚಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿತ್ತು.
ಕಾರ್ಯಕರ್ತರಿಗೆ ಹಣ ಹಂಚಿ ಸಿಕ್ಕಿಬಿದ್ದ ಉಪಮುಖ್ಯಮಂತ್ರಿ ಕಾರಜೋಳ
ಚಿಕ್ಕೋಡಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಕೆಂಡಾಮಂಡಲರಾಗಿದ್ದಾರೆ. ನಾನು ಇದುವರೆಗೂ ಯಾರಿಗೂ ಹಣ ಹಂಚಿಕೆ ಮಾಡಿರುವ ಉದಾಹರಣೆಗಳೇ ಇಲ್ಲ. ಇದೆಲ್ಲ ಸುಳ್ಳು ಆರೋಪಗಳು ಎಂದು ತಳ್ಳಿ ಹಾಕಿದರು.
ಒಂದೇ ಒಂದು ರೂಪಾಯಿ ಕೊಟ್ಟಿದ್ದರೆ ತೋರಿಸಿಕೊಡಿ:
ನನ್ನ ಕ್ಷೇತ್ರದಲ್ಲಿ ಯಾರಿಗಾದರು ಒಂದು ರೂಪಾಯಿ ಕೊಟ್ಟಿದ್ದೇನೆ ಎಂದು ಹೇಳಿ ಬಿಡಲಿ ನೋಡೋಣ ಎಂದು ಡಿಸಿಎಂ ಗೋವಿಂದ್ ಕಾರಜೋಳ ಸವಾಲು ಹಾಕಿದ್ದಾರೆ. ನನ್ನ ಜೀವನದಲ್ಲಿ ಇದುವರೆಗೂ ನನ್ನ ಎಲೆಕ್ಷನ್ ನಲ್ಲಿ ಹಣ ಹಂಚಿಕೆ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ. ನನ್ನ ಕಾರಿಗೆ ಡೀಸೆಲ್ ಹಾಕಿಸಲು ಎಂದು ಡ್ರೈವರ್ ಬಳಿ ಸ್ವಲ್ಪ ಹಣವನ್ನು ನೀಡಿದ್ದೆನು ಅದನ್ನೇ ತಪ್ಪಾಗಿ ಅರ್ಥೈಸಲಾಗಿದೆ ಎಂದು ಗೋವಿಂದ್ ಕಾರಜೋಳ ಸ್ಪಷ್ಟನೆ ನೀಡಿದರು.
ಹಣ ನೀಡಿದ್ದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ:
ಕಳೆದ ಆರು ಬಾರಿ ಚುನಾವಣೆ ಎದುರಿಸಿರುವ ನಾನು ಒಂದೇ ಒಂದು ಬಾರಿಯೂ ಹಣ ಹಂಚಿಕೆ ಮಾಡಿಲ್ಲ. ಹಾಗೊಂದು ವೇಳೆ ಹಣ ಹಂಚಿರುವ ಬಗ್ಗೆ ತೋರಿಸಿಕೊಡಿ. ನಾನು ರಾಜಕಾರಣವನ್ನೇ ಬಿಟ್ಟುಬಿಡುತ್ತೇನೆ ಎಂದು ಡಿಸಿಎಂ ಗೋವಿಂದ್ ಕಾರಜೋಳ ಕಿಡಿ ಕಾರಿದ್ದಾರೆ.