ಸಚಿವರಾಗಿ ಉಮೇಶ್ ಕತ್ತಿ ಪ್ರಮಾಣ ವಚನ: ಬಿಎಸ್ವೈ ಸಂಪುಟದಲ್ಲಿ ಕುಂದಾನಗರಿಗೆ ಸಿಂಹಪಾಲು
ಬೆಳಗಾವಿ, ಜನವರಿ 13: ಬಿಜೆಪಿ ಹಿರಿಯ ನಾಯಕ ಹಾಗೂ ಹುಕ್ಕೇರಿ ಕ್ಷೇತ್ರದ ಬಿಜೆಪಿ ಶಾಸಕ ಉಮೇಶ ಕತ್ತಿ ಅವರು ನಿರೀಕ್ಷೆಯಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಸೇರಿದ್ದಾರೆ. ಇದರಿಂದ ಸಂಪುಟದಲ್ಲಿ ಗಡಿ ಜಿಲ್ಲೆಗೆ ಸಿಂಹಪಾಲು ಸಿಕ್ಕಂತಾಗಿದ್ದು, ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಸೂಪರ್ ಪವರ್ ಆಗುತ್ತಿದೆ.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಉಮೇಶ ಕತ್ತಿ ಅವರು ಸಂಪುಟದ ಪ್ರಬಲ ಆಕಾಂಕ್ಷಿ ಆಗಿದ್ದರು. ಅಲ್ಲದೇ ಎರಡು ಸಲ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆಯೂ ಅವಕಾಶ ವಂಚಿತರಾಗಿದ್ದರು. ಇದೀಗ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮೂರನೇ ಬಾರಿಗೆ ಸಂಪುಟ ವಿಸ್ತರಣೆ ಆಗುತ್ತಿದ್ದು, ಇದರಲ್ಲಿ ಬಿಜೆಪಿಯ ಹಿರಿಯ ಶಾಸಕ ಉಮೇಶ ಕತ್ತಿಗೆ ಅದೃಷ್ಟ ಕುಲಾಯಿಸಿದೆ.
8 ಬಾರಿ ಗೆದ್ದಿರುವ ಶಾಸಕ ಉಮೇಶ್ ಕತ್ತಿ ಪರಿಚಯ
ಬೆಳಗಾವಿ ಜಿಲ್ಲೆಗೆ ಐದು ಸಚಿವ ಸ್ಥಾನ
ಬುಧವಾರ (ಜ.13) ರಂದು ಬೆಂಗಳೂರಿನ ರಾಜಭವನದಲ್ಲಿ ನಡೆಯಲಿರುವ ಪದಗ್ರಹಣ ಸಮಾವೇಶದಲ್ಲಿ ಉಮೇಶ್ ಕತ್ತಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈಗಾಗಲೇ ಡಿಸಿಎಂ ಸೇರಿದಂತೆ ಗಡಿ ಜಿಲ್ಲೆ ಬೆಳಗಾವಿಯ ನಾಲ್ವರಿಗೆ ಸಚಿವರಾಗುವ ಅವಕಾಶ ನೀಡಲಾಗಿತ್ತು. ಇದೀಗ ಉಮೇಶ ಕತ್ತಿಗೂ ಯಡಿಯೂರಪ್ಪನವರು ಅವಕಾಶ ಕರುಣಿಸಿದ್ದಾರೆ. ಹೀಗಾಗಿ ಬೆಳಗಾವಿ ಜಿಲ್ಲೆಗೆ ಐದು ಸಚಿವ ಸ್ಥಾನ ನೀಡಿದಂತಾಗಿದೆ.
ಡಿಸಿಎಂನಂತಹ ಮಹತ್ವದ ಸ್ಥಾನಮಾನ
2018ರ ವಿಧಾನಸಭೆ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲಕ್ಷ್ಮಣ ಸವದಿ ಅವರು ಪರಾಭವಗೊಂಡಿದ್ದರು. ಆದರೆ ಮೈತ್ರಿ ಸರ್ಕಾರದ ಪತನದ ಬಳಿಕ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರದಲ್ಲಿ ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಸ್ಥಾನ ನೀಡಲಾಗಿತ್ತು. ಬಿಜೆಪಿ ಹೈಕಮಾಂಡ್ ಕೃಪ ಕಟಾಕ್ಷ ಹೊಂದಿರುವ ಡಿಸಿಎಂ ಲಕ್ಷ್ಮಣ ಸವದಿ ಅವರು, ಡಿಸಿಎಂನಂತಹ ಮಹತ್ವದ ಸ್ಥಾನಮಾನ ಪಡೆಯುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರು.
ಇಂಧನ ಖಾತೆ ಸಿಗುವ ಸಾಧ್ಯತೆ
ಈಗಾಗಲೇ ಜಿಲ್ಲೆಯಲ್ಲಿ ಪರಿಷತ್ ಸದಸ್ಯ ಲಕ್ಷ್ಮಣ ಸವದಿಗೆ ಡಿಸಿಎಂ ಜೊತೆಗೆ ಸಾರಿಗೆ ಇಲಾಖೆಯ ಜವಾಬ್ದಾರಿ ವಹಿಸಲಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆಯ ಜೊತೆಗೆ ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಇವರ ಜೊತೆಗೆ ಕಾಂಗ್ರೆಸ್ಸಿನಿಂದ ಬಂದಿದ್ದ ಕಾಗವಾಡ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲಗೆ ಜವಳಿ ಖಾತೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಜವಾಬ್ದಾರಿ ನೀಡಲಾಗಿದೆ. ಇದೀಗ ಉಮೇಶ ಕತ್ತಿಯೂ ಸಂಪುಟ ಸೇರಲಿದ್ದು, ಸಿಎಂ ಬಳಿ ಇರುವ ಇಂಧನ ಖಾತೆ ಸಿಗುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯ ರಾಜಕಾರಣದ ಸೂಪರ್ ಪವರ್
ಕರ್ನಾಟಕ ಏಕೀಕರಣ ಆದಾಗಿನಿಂದ ಯಾವ ಸರ್ಕಾರದಲ್ಲೂ ಬೆಳಗಾವಿಗೆ ಇಷ್ಟೊಂದು ಸ್ಥಾನಮಾನ ಸಿಕ್ಕಿಲ್ಲ. ಸಂದರ್ಭ ಅನುಸಾರವಾಗಿ ಜಿಲ್ಲೆಗೆ ಇಷ್ಟೊಂದು ಸಚಿವ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದ್ದರೂ, ಬೆಂಗಳೂರು ನಂತರ ಅತಿಹೆಚ್ಚು ವಿಧಾನಸಭೆ ಕ್ಷೇತ್ರ ಹೊಂದಿರುವ ಜಿಲ್ಲೆ ಬೆಳಗಾವಿ. ಅಲ್ಲದೇ ಜಿಲ್ಲೆಯಲ್ಲಿ ಬಿಜೆಪಿ ಬೇಸ್ ಇರುವ ಕಾರಣ ಹೈಕಮಾಂಡ್ ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗಾವಿಯನ್ನು ರಾಜ್ಯ ರಾಜಕಾರಣದ ಸೂಪರ್ ಪವರ್ ಮಾಡಲು ಹೊರಟಿದೆ ಎಂದೂ ಹೇಳಲಾಗುತ್ತಿದೆ.
ಪ್ರಾಮಾಣಿಕವಾಗಿ ದುಡಿಬೇಕು
ಏನೇ ಆಗಲಿ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಸಚಿವ ಸ್ಥಾನ ಸಿಗುತ್ತಿದ್ದು, ಅತಿವೃಷ್ಟಿ ಹಾಗೂ ಪ್ರವಾಹದಿಂದ ಕಂಗೆಟ್ಟಿರುವ ಜಿಲ್ಲೆಯ ಜನರ ಕಣ್ಣೀರು ಒರೆಸುವ, ಅಭಿವೃದ್ಧಿಗೆ ಆದ್ಯತೆ ನೀಡುವ ಬಗ್ಗೆಯೂ ಈ ಎಲ್ಲ ಸಚಿವರು ಪ್ರಾಮಾಣಿಕವಾಗಿ ದುಡಿಯುವ ಕೆಲಸ ಮಾಡಬೇಕು ಎಂಬುವುದು ಈ ಭಾಗದ ಜನರ ಆಶಯವಾಗಿದೆ.