ಬಿಎಸ್ವೈ ವೈಮಾನಿಕ ಸಮೀಕ್ಷೆ ಹಿಂದಿನ ಕಾರಣ ಬಿಚ್ಚಿಟ್ಟ ಕೆಪಿಸಿಸಿ ಕಾರ್ಯಾಧ್ಯಕ್ಷ
ಬೆಳಗಾವಿ, ಆ 22: ಉತ್ತರ ಕರ್ನಾಟಕದ ಭಾಗದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಡೆಸಲು ಉದ್ದೇಶಿರುವ ವೈಮಾನಿಕ ಸಮೀಕ್ಷೆಯ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಣಕವಾಡಿದ್ದಾರೆ.
ನಗರದಲ್ಲಿ ಮಾತನಾಡುತ್ತಿದ್ದ ಜಾರಕಿಹೊಳಿ,"ವೈಮಾನಿಕ ಸಮೀಕ್ಷೆಯನ್ನು ಹಿಂದೆಯೇ ಮಾಡಬೇಕಾಗಿತ್ತು. ಕಂದಾಯ ಸಚಿವರು ಬೆಂಗಳೂರು ಬಿಟ್ಟು ಬರುತ್ತಿಲ್ಲ. ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ಕೆಲಸ ಆರಂಭಿಸಬೇಕಿತ್ತು"ಎಂದು ಸತೀಶ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಆಗಸ್ಟ್ 25ರಂದು ಸಿಎಂ ವೈಮಾನಿಕ ಸಮೀಕ್ಷೆ
"ನಮ್ಮ ಅಧ್ಯಕ್ಷರು ಡಿ.ಕೆ.ಶಿವಕುಮಾರ್ ಅವರು ಗೋಕಾಕ್ ಗೆ ಸಮೀಕ್ಷೆ ಬರುತ್ತಿದ್ದಾರೆ ಎಂದು ಗೊತ್ತಾದ ಮೇಲೆ, ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ಮಾಡಲು ಹೊರಟಿದ್ದಾರೆ"ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಅಧಿಕಾರಿಗಳ ವರ್ಗ ಅವರ ಜೊತೆಗಿದೆ. ಸಮೀಕ್ಷೆ ನಡೆಸಲು ಎಲ್ಲಾ ಸವಲತ್ತುಗಳಿವೆ. ಆದರೆ, ಇಷ್ಟು ದಿನ ಮಾಡದ ಸಮೀಕ್ಷೆ, ಡಿಕೆಶಿ ಬರುತ್ತಿದ್ದಾರೆ ಎಂದು ಗೊತ್ತಾದ ಮೇಲೆ ಮಾಡುತ್ತಿರುವುದು ಸರೀನಾ"ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಡಿ.ಕೆ.ಶಿವಕುಮಾರ್, ಆಗಸ್ಟ್ 24ರಂದು ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ. ಡಿಕೆಶಿ, ಸಚಿವ ರಮೇಶ್ ಜಾರಕಿಹೊಳಿ ಅವರ ಕ್ಷೇತ್ರ ಗೋಕಾಕನ್ನೇ ಪ್ರವಾಹ ವೀಕ್ಷಣೆಗೆ ಆಯ್ದುಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಆಗಸ್ಟ್ 25ರ ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ, ಬಾಗಲಕೋಟೆ, ಬೆಳಗಾವಿ, ವಿಜಯಪುರ ಮತ್ತು ಗದಗ ಜಿಲ್ಲೆಗಳಲ್ಲಿ ಒಂದು ದಿನದ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.