ಬೆಳಗಾವಿ: ಯೋಧನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
ಬೆಳಗಾವಿ, ಫೆಬ್ರವರಿ 20: ಸಾಮಾಜಿಕ ಬಹಿಷ್ಕಾರ ಎಂಬ ಅನಿಷ್ಠ ಪದ್ಧತಿ ಯೋಧನ ಕುಟುಂಬವನ್ನೂ ಬಿಟ್ಟಿಲ್ಲ. ದೇಶದ ಗಡಿ ಕಾಯುತ್ತಿರುವ ಯೋಧನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿಯ ರಾಮದುರ್ಗ ತೋಟಗಿಟ್ಟಿ ಗ್ರಾಮದ ಯೋಧ ವಿಠಲ್ ಕಡಕೋಳ ಅವರ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ಕುಟುಂಬದವರೊಂದಿಗೆ ಯಾರಾದರೂ ಮಾತನಾಡಿದರೆ ದಂಡ ಹಾಕುವುದಾಗಿ ಬೆದರಿಸಿದ್ದಾರೆ. ಯೋಧನ ಕುಟುಂಬಕ್ಕೆ ನೀರು ಕೊಡುವಂತಿಲ್ಲ, ಮನೆಯವರಿಗೆ ದೇವಸ್ಥಾನಕ್ಕೆ ಪ್ರವೇಶವಿಲ್ಲ, ಜಾತ್ರೆ ಸೇರಿದಂತೆ ಊರಿನ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ.
ಸೇನೆ ಸೇರಲಿದ್ದಾರೆ ಪುಲ್ವಾಮಾ ದಾಳಿಯ ಹುತಾತ್ಮ ಯೋಧನ ಪತ್ನಿ: ಸ್ಫೂರ್ತಿದಾಯಕ ಕಥೆ
ಯೋಧ ವಿಠಲ್ ಕಡಕೋಳ ಅವರಿಗೆ ಸೇರಿದ್ದು ಎನ್ನಲಾದ ಜಮೀನಿನಲ್ಲಿ ಊರಿನ ಮಂದಿ ಅಂಗನವಾಡಿ ನಿರ್ಮಿಸಲು ಮುಂದಾಗಿದ್ದಾರೆ. ಇದನ್ನು ವಿಠಲ್ ಕಡಕೋಳ ಕುಟುಂಬವರು ತಡೆದು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಊರಿನ ಪ್ರಮುಖರು ಸೇರಿ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಿದ್ದಾರೆ. ಕಳೆದ ಮೂರು ವರ್ಷದಿಂದಲೂ ಬಹಿಷ್ಕಾರದ ಶಿಕ್ಷೆಯನ್ನು ಯೋಧನ ಕುಟುಂಬ ಅನುಭವಿಸುತ್ತಿದೆ.
ಅಣ್ಣನ ಮದುವೆ ಮುಂದೂಡುವ ಪರಿಸ್ಥಿತಿ
ಈಗ ಯೋಧ ವಿಠಲ್ ಕಡಕೋಳ ಅವರ ಅಣ್ಣನಿಗೆ ಮದುವೆ ನಿಶ್ಚಯವಾಗಿದೆ. ಊರ ಸಂಪ್ರದಾಯದ ಪ್ರಕಾರ, ಊರಿನ ಪೂಜಾರಿಯೇ ಮದುವೆ ಮಾಡಿಸಬೇಕು, ಆದರೆ ಬಹಿಷ್ಕಾರ ಶಿಕ್ಷೆಗೆ ಒಳಪಟ್ಟ ಕುಟುಂಬದ ಮದುವೆಯನ್ನು ಮಾಡಿಸುವುದಿಲ್ಲ ಎಂದು ಪೂಜಾರಿ ಹೇಳಿದ್ದಾರೆ. ವಿಠಲ್ ಕಡಕೋಳ ಕುಟುಂಬಕ್ಕೆ ಮದುವೆಯನ್ನು ಮುಂದೂಡವ ಪರಿಸ್ಥಿತಿ ಬಂದೊದಗಿದೆ.
ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ವಿಠಲ್
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಯೋಧ ವಿಠಲ್, 'ನಾನು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಊರಿನಲ್ಲಿ ನಮ್ಮ ಮನೆಯ ಮುಂದೆ 30*40 ಜಾಗವಿದೆ. ಅದು ನನ್ನ ತಂದೆಯ ಹೆಸರಿನಲ್ಲಿದೆ. ಆದರೆ ಅದು ಸರ್ಕಾರಿ ಜಾಗವೆಂದು ಹೇಳಿ ಅದರಲ್ಲಿ ಅಂಗನವಾಡಿ ಕಟ್ಟಲು ಯತ್ನಿಸಿದರು, ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದೆವು' ಎಂದು ಹೇಳಿದ್ದಾರೆ.
ಬೋಧಿವೃಕ್ಷ ಅಲ್ಲ, ಯೋಧನ ಮನೆಯ ಅಲ್ಕೋಹಾಲ್ ಎದುರು ಕಳ್ಳನಿಗೆ ಪಶ್ಚಾತಾಪ!
ಜಿಲ್ಲಾಧಿಕಾರಿಗಳಿಂದ ಇಲ್ಲ ಸ್ಪಂದನೆ: ಯೋಧ ವಿಠಲ್
'ಇದರಿಂದಾಗಿ ನಮಗೆ ಬಹಿಷ್ಕಾರ ಹಾಕಿದ್ದಾರೆ. ನಾನು ತುರ್ತು ರಜೆ ಪಡೆದು ಬಂದು ಜಿಲ್ಲಾಧಿಕಾರಿಗೆ ದೂರು ನೀಡಿದೆ. ಆದರೆ ಅವರು ಸಮಸ್ಯೆ ಬಗೆಹರಿಸುವುದರ ಬದಲಿಗೆ, ''ಊರಿನಲ್ಲಿ ಇದೆಲ್ಲಾ ಮಾಮೂಲಿ ಹೋಗಿ'' ಎಂದು ಹೇಳಿ ಕಳುಹಿಸಿದರು. ನಮ್ಮ ಊರಿನಲ್ಲೇ ನಮ್ಮನ್ನು ಯಾರೂ ಮಾತನಾಡಿಸುತ್ತಿಲ್ಲ, ನಮ್ಮನ್ನು ಯಾವ ಕಾರ್ಯಕ್ರಮಕ್ಕೂ ಕರೆಯುತ್ತಿಲ್ಲ' ಎಂದು ಯೋಧ ವಿಠಲ್ ಅಳಲು ತೋಡಿಕೊಂಡಿದ್ದಾರೆ.
ಸಾಮಾಜಿಕ ಬಹಿಷ್ಕಾರ ಕಾನೂನಿಗೆ ವಿರುದ್ಧ
ಬಹಿಷ್ಕಾರ ಸಾಮಾಜಿಕ ಅನಿಷ್ಟವೆಂದು ಕಾನೂನು ರೀತ್ಯಾ ನಿರ್ಧರಿಸಲಾಗಿದ್ದು, ಸಾಮಾಜಿಕ ಬಹಿಷ್ಕಾರ ಹಾಕುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ.