KSRTC ಮುಷ್ಕರ: 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸಲ್ಲ ಎಂದ ಸಿಎಂ
ಬೆಳಗಾವಿ, ಏಪ್ರಿಲ್ 06: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ ತಾಲೂಕಿನ ಮುತ್ನಾಳದಲ್ಲಿ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ ಸಾರಿಗೆ ನೌಕರರ ಒಂಬತ್ತು ಬೇಡಿಕೆಯಲ್ಲಿ ಎಂಟು ಬೇಡಿಕೆ ಈಡೇರಿಸಿದ್ದೇವೆ ಎಂದರು. ಕೊವಿಡ್ನಿಂದ ಎದುರಾದ ಆರ್ಥಿಕ ಸಂಕಷ್ಟದ ನಡುವೆಯೂ ವೇತನ ನೀಡಿದ್ದೇವೆ. ಸರ್ಕಾರದಿಂದಲೇ 1200 ಕೋಟಿ ರೂ. ಸಂಬಳ ಸಾರಿಗೆ ಇಲಾಖೆಗೆ ಕೊಟ್ಟಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮತ್ತೆ ಬಸ್ ಸಂಚಾರ ಸ್ಥಗಿತಕ್ಕೆ ಸಾರಿಗೆ ನೌಕರರ ಪ್ಲಾನ್
ರಾಜ್ಯ ಸರ್ಕಾರವು ಎಂಟು ಬೇಡಿಕೆ ಈಡೇರಿಸಿದ ಮೇಲೂ ಹಠ ಮಾಡುವುದು ಸರಿಯಲ್ಲ. ದಯಮಾಡಿ ಹಠವನ್ನು ಬಿಟ್ಟು ಸಾರ್ವಜನಿಕರಿಗೆ ತೊಂದರೆ ಆಗದಂತೆ ನಡೆದುಕೊಳ್ಳಬೇಕು. ಸಾರಿಗೆ ನೌಕರರು ಮುಷ್ಕರವನ್ನು ವಾಪಸ್ ಪಡೆಯಬೇಕೆಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಕುಳಿತು ಚರ್ಚೆ ಮಾಡೋಣ ಎಂದ ಸಿಎಂ:
ಕರ್ನಾಟಕದಲ್ಲಿ ಸಾರಿಗೆ ನೌಕರರ ಮುಷ್ಕರದಿಂದ ಪ್ರಯಾಣಿಕರಿಗೆ ಸಮಸ್ಯೆ ಆಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತೇವೆ. ರೈಲು ಸೇವೆಯನ್ನು ಹೆಚ್ಚು ಮಾಡಲಾಗುತ್ತದೆ. ಇದರ ಜೊತೆಗೆ ಖಾಸಗಿ ಬಸ್ಗಳಿಗೆ ಪರ್ಮೀಟ್ ಕೊಡುತ್ತೇವೆ. ಆದರೆ ಅದು ಬೇರೆ ವಿಷಯ. ಶ್ರೀಸಾಮಾನ್ಯರಿಗೆ ತೊಂದರೆ ಕೊಡೋದು ಸರಿಯಲ್ಲ, ಅದರ ಬದಲಿಗೆ ಕುಳಿತು ಚರ್ಚೆ ಮಾಡೋಣ. ಸತ್ಯಾಗ್ರಹ ವಾಪಸ್ ಪಡೆಯಬೇಕೆಂದು ಸಾರಿಗೆ ನೌಕರರಲ್ಲಿ ಮನವಿ ಮಾಡುತ್ತೇನೆ ಎಂದರು.
ಆರನೇ ವೇತನ ಆಯೋಗದ ಶಿಫಾರಸ್ಸು ಸಾಧ್ಯವಿಲ್ಲ:
ರಾಜ್ಯದಲ್ಲಿ 6ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೊಳಿಸುವ ಪ್ರಶ್ನೆಯೇ ಇಲ್ಲ. ಎಂಟು ಪರ್ಸೆಂಟ್ ವೇತನ ಹೆಚ್ಚಳಕ್ಕೆ ಯೋಚನೆ ಮಾಡುತ್ತಿದ್ದೇವೆ. ದುರುದ್ದೇಶದಿಂದ ಉದ್ದೇಶಪೂರ್ವಕವಾಗಿ ಸತ್ಯಾಗ್ರಹ ಮಾಡಿಸಲಾಗುತ್ತಿದೆ. ನಮ್ಮ ಮಾತಿಗೆ ಬೆಲೆ ಕೊಟ್ಟು ಮುಷ್ಕರ ವಾಪಸ್ ಪಡೆಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.