5 ಮಂತ್ರಿಗಳು ಸೇರಿ ಜಿಲ್ಲೆಯ, ರಾಜ್ಯದ ಅಭಿವೃದ್ಧಿ ಮಾಡುತ್ತೇವೆ
ಬೆಳಗಾವಿ, ಜನವರಿ 15: ನೂತನ ಸಚಿವರಾಗಿ ಉಮೇಶ್ ಕತ್ತಿ ಅವರು ತಮ್ಮ ತವರು ಜಿಲ್ಲೆ ಬೆಳಗಾವಿಗೆ ಆಗಮಿಸಿದರು. ಈ ವೇಳೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ನಂತರ ಮಾತನಾಡಿದ ನೂತನ ಸಚಿವ ಉಮೇಶ್ ಕತ್ತಿ, ಬೆಳಗಾವಿ ಜಿಲ್ಲೆಯ 5 ಮಂತ್ರಿಗಳು ಸೇರಿ ರಾಜ್ಯದ, ಜಿಲ್ಲೆಯ ಅಭಿವೃದ್ಧಿ ಮಾಡುತ್ತೇವೆ. ಮುಖ್ಯಮಂತ್ರಿಗಳು ರಾಜ್ಯದ ಅಭಿವೃದ್ಧಿಗೆ ನಮ್ಮನ್ನು ಪಾಲ್ಗೊಳಿಸಿದ್ದಾರೆ ಎಂದು ಹೇಳಿದರು.
ಅಮಿತ್ ಶಾಗೆ ದೂರು ನೀಡಲು ಕೆಲ ಬಿಜೆಪಿ ಶಾಸಕರ ನಿರ್ಧಾರ
ನಮ್ಮ ಭಾಗದ ಜನಕ್ಕೆ ಉಮೇಶ್ ಕತ್ತಿ ಮಂತ್ರಿ ಆಗಬೇಕಿತ್ತು ಎಂಬ ಆಸೆ ಇತ್ತು. ಅದನ್ನು ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ. ಬೆಳಗಾವಿ ಜಿಲ್ಲೆಯ 5 ಮಂತ್ರಿಗಳು ಸೇರಿ ರಾಜ್ಯದ, ಜಿಲ್ಲೆಯ ಅಭಿವೃದ್ಧಿ ಮಾಡುತ್ತೇವೆ ಎಂದರು.
ನಾನು ಈಗಾಗಲೇ ಐದಾರು ಖಾತೆಗಳನ್ನು ನಿಭಾಯಿಸಿದ್ದೇನೆ. ಯಾವುದೇ ಖಾತೆ ಕೊಟ್ಟರೂ ಜವಾಬ್ದಾರಿಯಾಗಿ ನಿಭಾಯಿಸುತ್ತೇನೆ. ಸಿಎಂ ಕೊಡುವ ಖಾತೆಯಿಂದ ರಾಜ್ಯದ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ, ಕೊರೊನಾ ಸಂದರ್ಭದಲ್ಲಿ ಯಾವುದೇ ಖಾತೆ ಕೊಟ್ಟರು ಸಮರ್ಥವಾಗಿ ನಿಭಾಯಿಸುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಪುಟ ವಿಸ್ತರಣೆ ಬಳಿಕ ಕೆಲವು ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿದ ಸಚಿವ ಉಮೇಶ್ ಕತ್ತಿ, ಒಂದು ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರಶ್ನೆ , ಉತ್ತರ ಪ್ರಾರಂಭ ಆಗುತ್ತದೆ. ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಭದ್ರವಾಗಿದೆ ಮತ್ತು ಅಖಂಡವಾಗಿದೆ ಎಂದು ಹೇಳಿದರು.
ಸಿಎಂ ಬಿಎಸ್ವೈ ನಾಯಕತ್ವದಲ್ಲಿ ಈಗಿನ ಎರಡೂವರೆ ವರ್ಷ ಮುಗಿಸುತ್ತೆವೆ. ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮ ಮೇಲಿದೆ. ಈಗ ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ ಇರುತ್ತದೆ, ಅದಕ್ಕೆಲ್ಲಾ ಬೆಲೆ ಕೊಡುವ ಅಗತ್ಯವಿಲ್ಲ. ಸಿಡಿ ಇಟ್ಟುಕೊಂಡು ಸಿಎಂಗೆ ಬ್ಲ್ಯಾಕ್ಮೇಲ್ ಮಾಡ್ತಿದಾರೆ ಎಂಬ ಯತ್ನಾಳ್ ಆರೋಪ ವಿಚಾರವಾಗಿ, ಅದಕ್ಕೆ ನನ್ನ ಬಳಿ ಉತ್ತರ ಇಲ್ಲ, ದಯಮಾಡಿ ಅವರನ್ನೇ ಕೇಳಿ ಎಂದು ಬೆಳಗಾವಿಯಲ್ಲಿ ನೂತನ ಸಚಿವ ಉಮೇಶ ಕತ್ತಿ ತಿಳಿಸಿದರು.