ಸೂತಕವಾದ ಹೋಳಿ ಹಬ್ಬ: ಬೆಳಗಾವಿ ಜಿಲ್ಲೆಯಲ್ಲಿ ಐವರು ಜಲಸಮಾಧಿ
ಬೆಳಗಾವಿ, ಮಾರ್ಚ್ 11: ರಂಗಿನ ಹೋಳಿ ಆಚರಿಸಿದ ಬಳಿಕ ನದಿ, ಬಾವಿ, ಕೆರೆಗಳಿಗೆ ಸ್ನಾನಕ್ಕೆಂದು ಹೋಗಿದ್ದ ಐದು ಮಂದಿ ನಿನ್ನೆ (ಮಂಗಳವಾರ) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೆಳಗಾವಿ, ರಾಯಬಾಗ ಮತ್ತು ಖಾನಾಪುರ ತಾಲೂಕಿನಲ್ಲಿ ತಲಾ ಒಬ್ಬರು ಮತ್ತು ಸವದತ್ತಿ ತಾಲೂಕಿನಲ್ಲಿ ಇಬ್ಬರು ಮೃತಪಟ್ಟಿರುವುದು ವರದಿಯಾಗಿದೆ.
ಬೆಳಗಾವಿ ತಾಲೂಕು ಹಲಗಾ ಬಸ್ತವಾಡದ ಬಾಹುಬಲಿ ಗೋಪಾಳ ಮಲಶೆಟ್ಟಿ (28), ಸವದತ್ತಿ ತಾಲೂಕು ಕರಿಕಟ್ಟಿಯ ಪ್ರಕಾಶ ಲಕ್ಷ್ಮಣ ಪಟ್ಟಣಶೆಟ್ಟಿ (22) ಮತ್ತು ಅದೇ ತಾಲೂಕಿನ ಮರಕುಂಬಿಯ ಶಶಿಕಾಂತ ಆನಂದ ಕೋಲಕಾರ (21) ಮತ್ತು ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳಿಯ ವಿನಾಯಕ ಕುಂಬಾರ (26) ಮತ್ತು ರಾಯಬಾಗ ತಾಲೂಕು ಬಾವಾನ ಸವದತ್ತಿ ಗ್ರಾಮದ ಯುವಕ ಸಾಗರ ಯಾಮಾಜಿ (24) ಮೃತಪಟ್ಟ ದುರ್ದೈವಿಗಳು.
ವರ್ಷದ ಹಿಂದೆ ಮದುವೆಯಾಗಿತ್ತು
ಹಲಗಾ-ಬಸ್ತವಾಡದ ಬಾಹುಬಲಿ ಮಲಶೆಟ್ಟಿಯದ್ದು ಒಂದು ವರ್ಷದ ಹಿಂದೆ ಮದುವೆಯಾಗಿತ್ತು. ರಂಗಿನಾಟ ಮುಗಿಸಿ ಮನೆಗೆ ಬಂದು, ಸ್ನಾನಕ್ಕೆ ಹೋಗಿ ಬರುತ್ತೇನೆಂದು ಹೆಂಡತಿಗೆ ಹೇಳಿ ಹೋದವನು ಮರಳಿ ಬರಲಿಲ್ಲ. ಸ್ನಾನಕ್ಕೆಂದು ಬಾವಿಗೆ ಹೋದವನು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಅಗ್ನಿಶಾಮಕ ದಳದವರು ಮೃತದೇಹವನ್ನು ಹೊರತೆಗೆದರು. ಹಿರೇಬಾಗೆವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ: ದಾವಣಗೆರೆಯಲ್ಲಿ ನೋ ಕೊರೊನಾ ಫಿಯರ್, ಹೋಳಿ ಹಬ್ಬ ಫುಲ್ ಜೋರು
ದಿನದ ಹಿಂದಷ್ಟೇ ಊರಿಗೆ ಬಂದಿದ್ದ ಯಾಮಾಜಿ
ಬಾವಾನ ಸವದತ್ತಿಯ ಸಾಗರ ಯಾಮಾಜಿ ಒಂದು ದಿನ ಮುಂಚೆಯಷ್ಟೇ ಬೆಂಗಳೂರಿನಿಂದ ಬಂದು ಗೆಳೆಯರೊಂದಿಗೆ ಬಣ್ಣದ ಹೋಳಿ ಆಚರಿಸಿದ್ದ. ಕೃಷ್ಣಾ ನದಿಗೆ ಈಜಲು ಹೋಗಿದ್ದಾಗ ಆತ ಮೃತಪಟ್ಟಿದ್ದು, ಗ್ರಾಮಸ್ಥರ ಸಹಾಯದಿಂದ ಶವದ ಹುಡುಕಾಟ ನಡೆಸಲಾಯಿತು. ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲಪ್ರಭಾದಲ್ಲಿ ಎಲೆಕ್ಟ್ರಿಶಿಯನ್ ಸಾವು
ಎಲೆಕ್ಟ್ರಿಶಿಯನ್ ಆಗಿದ್ದ ಚಿಕ್ಕಹಟ್ಟಿಹೊಳಿಯ ವಿನಾಯಕ ಕುಂಬಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಹೋಳಿ ಮುಗಿಸಿಕೊಂಡು ಮಲಪ್ರಭಾ ನದಿಗೆ ಸ್ನಾನಕ್ಕೆ ಹೋದವನು, ಈಜುತ್ತ ನದಿಯ ಮಧ್ಯಭಾಗಕ್ಕೆ ಹೋದವನು ಇದ್ದಕ್ಕಿದ್ದಂತೆ ಅಲ್ಲಿಯೇ ಮುಳುಗಿ ಬಿಟ್ಟ. ಎರಡು ಗಂಟೆಗಳ ಬಳಿಕ ಸ್ಥಳೀಯರ ಪ್ರಯತ್ನದಿಂದ ಶವವನ್ನು ಹೊರಕ್ಕೆ ತೆಗೆಯಲಾಯಿತು. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಾವಳಿಯಲ್ಲಿ ವಿಶಿಷ್ಟ ಬಗೆಯ ಹೋಳಿ ಹಬ್ಬ ಆಚರಣೆ
ಜಾಕ್ವೆಲ್ ನಲ್ಲಿ ಬಿದ್ದು ಸಾವು
ಸವದತ್ತಿ ತಾಲೂಕು ಕರಿಕಟ್ಟಿಯ ಪ್ರಕಾಶ ಪಟ್ಟಣಶೆಟ್ಟಿ ಇಂಗಳಗಿ ಗ್ರಾಮದ ಬಳಿ ಮಲಪ್ರಭಾ ನದಿ ಪಕ್ಕ ನಿರ್ಮಿಸಲಾಗಿರುವ ಜಾಕ್ವೆಲ್ ನಲ್ಲಿ ಬಿದ್ದು ಸಾವಿಗೀಡಾಗಿದ್ದಾನೆ. ಅದೇ ತಾಲೂಕು ಮರಕುಂಬಿ ಗ್ರಾಮದ ಶಶಿಕಾಂತ ಕೋಲಕಾರ ಹೋಳಿ ಆಡಿದ ಬಳಿಕ ಸ್ಥಳೀಯ ಕೆರೆಗೆ ಸ್ನಾನಕ್ಕೆಂದು ಹೋದವನು ಅಚಾನಕ್ಕಾಗಿ ಮುಳುಗಿ ಮೃತಪಟ್ಟನು. ಈ ಎರಡೂ ಪ್ರಕರಣಗಳು ಮುರಗೋಡ ಠಾಣೆಯಲ್ಲಿ ದಾಖಲಾಗಿದೆ.