ಬೆಳಗಾವಿಯಲ್ಲಿ ಇಂಡೋನೇಷ್ಯಾದ 10 ಧರ್ಮ ಗುರುಗಳು
ಬೆಳಗಾವಿ, ಎಪ್ರಿಲ್ 01: ತಬ್ಲೀಘೀ ಎ ಜಮಾತ್ ವತಿಯಿಂದ ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ರಾಜ್ಯದಿಂದ ಭಾಗವಹಿಸಿದ್ದವರು 54 ಜನರಲ್ಲ ಬದಲಿಗೆ 300 ಜನರು ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ಸೋಂಕಿನಿಂದ ಈಗಾಗಲೇ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ದೆಹಲಿ ನಿಜಾಮುದ್ದಿನ ಸಭೆಯಲ್ಲಿ ಭಾಗಿಯಾಗಿದ್ದ ಇಂಡೋನೇಷ್ಯಾ ಮೂಲದ 10 ಧರ್ಮ ಗುರುಗಳು ಈಗ ಬೆಳಗಾವಿಯಲ್ಲಿದ್ದಾರೆ ಎಂಬುದು ರಾಜ್ಯದ ಪಾಲಿಗೆ ಶಾಕಿಂಗ್ ಸುದ್ದಿಯಾಗಿದೆ. ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ 12 ಜನರ ಪೈಕಿ 10 ಜನ ಇಂಡೋನೇಷ್ಯಾ ಮೂಲದವರಾಗಿದ್ದಾರೆ.
ಈಗಾಗಲೇ 10 ಜನರ ಪಾಸಪೋರ್ಟ್ ನ್ನು ಬೆಳಗಾವಿ ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಬೆಳಗಾವಿಯ ಮಸೀದಿಯೊಂದರಲ್ಲಿ ಇಂಡೋನೇಷ್ಯಾ ಮೂಲದ 10 ಜನರಿಗೆ ಮಾರ್ಚ್ 16 ರಿಂದಲೇ ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ.
ಈಗಾಗಲೇ 14 ದಿನ ಮುಗಿದದ್ದರೂ ಮತ್ತೇ 14 ದಿನ ಕ್ವಾರೆಂಟೈನ್ ನ್ನು ಮುಂದುವರೆಸಲಾಗಿದೆ. ಇನ್ನು ಇಬ್ಬರ ಮೂಲದ ಬಗ್ಗೆ ಬೆಳಗಾವಿ ಪೊಲೀಸರು ಪತ್ತೆ ಮಾಡುತ್ತಿದ್ದಾರೆ. ವಿದೇಶಿಗರ ಬೆಳಗಾವಿ ನಂಟಿನಿಂದ ಸ್ಥಳೀಯ ಜನತೆ ಬೆಚ್ಚಿ ಬಿದ್ದಿದೆ.