ರಾಜ್ಯದಲ್ಲಿರುವುದು ತುಘಲಕ್ ಸರ್ಕಾರ: ಯಡಿಯೂರಪ್ಪ
ದೇವನಹಳ್ಳಿ, ಜನವರಿ 16: ರಾಜ್ಯದಲ್ಲಿ ತುಘಲಕ್ ಸರ್ಕಾರ ಅಧಿಕಾರದಲ್ಲಿದೆ, ಈ ಬಾರಿ ಚುನಾವಣೆಯಲ್ಲಿ ಅದನ್ನು ಕಿತ್ತೊಗೆಯಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ತಲುಪಿರುವ ಪರಿವರ್ತನಾ ಯಾತ್ರೆಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಆದಷ್ಟು ಭ್ರಷ್ಟಾಚಾರ ಇನ್ನಾವ ಸರ್ಕಾರದ ಅವಧಿಯಲ್ಲಿಯೂ ಆಗಿಲ್ಲ, ದೇಶದಲ್ಲೆ ನಂ.1 ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದರು.
ದಲಿತರು ಕಾಂಗ್ರೆಸ್ಗೆ ಮತ ಹಾಕಬೇಡಿ: ಯಡಿಯೂರಪ್ಪ
ಹೊಸಕೋಟೆಯ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜು ಸೇರಿದಂತೆ ಹಲವು ಜನ ಕಾಂಗ್ರೆಸ್ ಶಾಸಕರು ಸಂಪೂರ್ಣ ಭ್ರಷ್ಟರಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಭ್ರಷ್ಟಾರದ ತನಿಖೆ ಮಾಡಿಸಿ ಭ್ರಷ್ಟ ಶಾಸಕರಿಗೆ ತಕ್ಕ ಪಾಠ ಕಲಿಸದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ಸವಾಲ್ ಹಾಕಿದರು.
ಬಿಜೆಪಿ ಗೆಲ್ಲಿಸಿ 5 ವರ್ಷ ನೆಮ್ಮದಿಯಾಗಿರಿ
ಪರಿವರ್ತನಾ ಯಾತ್ರೆ ಮಾಡುತ್ತಿರುವುದು ಎಲ್ಲಾ ಕ್ಷೇತ್ರದ ಸಮಸ್ಯೆ ಅರಿತು, ಅಧಿಕಾರಕ್ಕೆ ಬಂದ ಮೇಲೆ ಅವುಗಳನ್ನೆಲ್ಲಾ ಬಗೆಹರಿಸುವ ಉದ್ದೇಶದಿಂದ ಎಂದ ಅವರು, ಈ ಬಾರಿ ಬಿಜೆಪಿಯನ್ನು ಗೆಲ್ಲಿಸಿ ಇನ್ನು 5 ವರ್ಷ ನೆಮ್ಮದಿಯಿಂದ ಇರಿ ಎಂದು ಅವರು ಮನವಿ ಮಾಡಿದರು.
ಸಿಎಂ ಅವರ ಮೇಲೂ ಕೇಸು
ಕಾಂಗ್ರೆಸ್ನ ಪ್ರತಿಯೊಬ್ಬ ಶಾಸಕ ಮತ್ತು ಸಚಿವರ ಹಗರಣಗಳ ಚಾರ್ಜ್ಶೀಟ್ ಅನ್ನು ತಯಾರಿಸಿ ಮನೆ ಮನೆಗೆ ಹಂಚುತ್ತೇವೆ, ಅಧಿಕಾರ ಬಳಸಿ ಕಾನೂನಿನ ಕೈಯಿಂದ ತಪ್ಪಿಸಿಕೊಂಡ ಎಲ್ಲಾ ಶಾಸಕರು, ಸಚಿವರ ಬಣ್ಣ ಬಯಲು ಮಾಡುತ್ತೇವೆ, ಸಿಎಂ ಅವರ ಮೇಲೂ ಚಾರ್ಜ್ ಶೀಟ್ ತಯಾರಿಸುತ್ತಿದ್ದೇವೆ, ಅವರ ಮೇಲೆ 67 ಪ್ರಕರಣ ಇವೆ ಎಂದು ಅವರು ಹೇಳಿದರು.
ಕುಡಿಯುವ ನೀರಿನ ಯೋಜನೆ
ದೇವನಹಳ್ಳಿ, ಹೊಸಕೋಟೆ ತಾಲ್ಲೂಕಿಗೆ ಭರವಸೆಗಳ ಮಹಾಪೂರವೇ ಹರಿಸಿದ ಯಡಿಯೂರಪ್ಪ ಅವರು, ಕಾವೇರಿ ನೀರನ್ನು ದೇವನಹಳ್ಳಿಗೆ ತರುವುದಾಗಿ ಹೇಳಿದರು. ಅಷ್ಟೇ ಅಲ್ಲದೆ ವಿಜಯಪುರ ಪಟ್ಟಣವನ್ನು ತಾಲ್ಲೂಕು ಕೇಂದ್ರವಾಗಿ ಘೋಷಿಸುವುದಾಗಿಯೂ ಭರವಸೆ ನೀಡಿದರು.
ಅಂಬೇಡ್ಕರ್ ಅವರನ್ನು ಸೋಲಿಸಿದ್ದ ಕಾಂಗ್ರೆಸ್
ಕಾಂಗ್ರೆಸ್ ಪಕ್ಷವು ದಲಿತ ವಿರೋಧಿ, ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ, ಅವರ ಶವಸಂಸ್ಕಾರಕ್ಕೆ ದೆಹಲಿಯಲ್ಲಿ ಅವಕಾಶವನ್ನು ಕಾಂಗ್ರೆಸ್ ನಿರಾಕರಿಸಿತ್ತು ಅಂತಹಾ ದಲಿತ ವಿರೋಧಿ ಪಕ್ಷಕ್ಕೆ ದಲಿತರು ಮತ ಹಾಕಬೇಡಿ ಎಂದು ಯಡಿಯೂರಪ್ಪ ವಿನಂತಿ ಮಾಡಿಕೊಂಡರು.
3515 ರೈತರ ಆತ್ಮಹತ್ಯೆ
ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ 3515 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, 6521 ಕೊಲೆ ನಡೆದಿವೆ, 4276 ಅತ್ಯಾಚಾರ ನಡೆದಿವೆ, 5647 ಅಪಹರಣ, ಬೆಂಗಳೂರು ನಗರ ಒಂದರಲ್ಲೇ 1,24,655 ಅಪರಾಧ ಪ್ರಕರಣಗಳು ನಡೆದಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಸಾಮಾನ್ಯರು ನೆಮ್ಮದಿಯಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂದರು.