'ಸಿಎಂಗೆ ನಾಚಿಕೆ ಮಾನ ಮರ್ಯಾದೆ ಇದ್ರೆ, ಜಾರ್ಜ್ ರಾಜೀನಾಮೆ ಪಡೆಯಲಿ'
ಬೆಂಗಳೂರು, ಅಕ್ಟೋಬರ್ 26: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳ ಮೇಲೆ ಸಿಬಿಐ ಎಫ್ ಐ ಆರ್ ದಾಖಲಿಸಿರುವ ಸುದ್ದಿ ಬರುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಗುರುವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದರು.
ಎಂಕೆ ಗಣಪತಿ ಸಾವಿನ ಪ್ರಕರಣ : ಸಚಿವ ಕೆ.ಜೆ ಜಾರ್ಜ್ ವಿರುದ್ಧ ಎಫ್ ಐಆರ್
ಸಿಬಿಐ ಹಾಕಿರುವ ಎಫ್ ಐಆರ್ ನಲ್ಲಿ ಆರೋಪಿ ನಂ.1 ಎನಿಸಿಕೊಂಡಿರುವ ಕೆಜೆ ಜಾರ್ಜ್ ಅವರು ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜೀನಾಮೆ ನೀಡಲಿ ಎಂದು ಬಿಎಸ್ ಯಡಿಯೂರಪ್ಪ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಗಣಪತಿ ಅವರ ತಂದೆ ಸುಪ್ರೀಂಕೋರ್ಟ್ ಗೆ ಹೋಗಿ ಸಿಬಿಐ ತನಿಖೆಗೆ ಆಗ್ರಹಿಸಿದ್ರು, ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಸಿಬಿಐ ತನಿಖೆ ಹಿನ್ನೆಲೆ ಸಚಿವ ಜಾರ್ಜ್ ವಿರುದ್ಧ ಎಫ್ ಐ ಆರ್ ದಾಖಲು ಮಾಡಿದೆ.
ಸಿಎಂಗೆ ಸ್ವಲ್ಪವಾದರೂ ನಾಚಿಕೆ ಇದ್ಯಾ
ಸಿಎಂ ಪರಮಾಪ್ತ ಜಾರ್ಜ್ ರನ್ನು ಆರೋಪಿ 1 ಎಂದು ಉಲ್ಲೇಖಿಸಿದೆ. ಹೀಗಾಗಿ, ಸಿಎಂಗೆ ಸ್ವಲ್ಪವಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಜಾರ್ಜ್ ರನ್ನು ತಕ್ಷಣ ಸಚಿವ ಸಂಪುಟದಿಂದ ಕೈಬಿಡಬೇಕು, ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
ಸಾಕ್ಷಿ ನಾಶ ಸಂಭವ ಹೆಚ್ಚು
ಸಚಿವ ಸ್ಥಾನದಲ್ಲಿ ಜಾರ್ಜ್ ಮುಂದುವರೆದರೆ ಪ್ರಕರಣದ ಸಾಕ್ಷಿ ನಾಶ ಸಂಭವ ಹೆಚ್ಚು,ಹೀಗಾಗಿ ತಕ್ಷಣ ಸಚಿವ ಸ್ಥಾನದಿಂದ ಕೈಬಿಟ್ಟು ತನಿಖೆಗೆ ಸಹಕರಿಸಬೇಕು. ಸಿಎಂ ಸಿದ್ದರಾಮಯ್ಯ ಜಾರ್ಜ್ ರಾಜೀನಾಮೆ ವಿಚಾರವಾಗಿ ಈಗ ಇನ್ಯಾವುದು ಕುಂಟ ನೆಪ ಹೇಳ್ತಾರೋ ಗೊತ್ತಿಲ್ಲ.
ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ
ಒಂದು ವೇಳೆ ಸಿದ್ದರಾಮಯ್ಯ ಅವರು ರಾಜೀನಾಮೆ ಪಡೆಯದಿದ್ದರೆ ಬಿಜೆಪಿ ಬೃಹತ್ ಹೋರಾಟ ನಡೆಸಲಿದೆ. ಈ ಹಿಂದೆಯೇ ಜಾರ್ಜ್ ವಿರುದ್ಧ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದೆವು. ಸಿಬಿಐ ಜಾರ್ಜ್ ವಿರುದ್ಧ ತನಿಖೆ ಆರಂಭಿಸಿದ ಮೇಲೆ ಹೋರಾಟ ಮಾಡುವುದಾಗಿ ತಿಳಿಸಿದ್ದೆ.
ಯಾವುದೋ ಸಚಿವರು ಸರ್ಟಿಫಿಕೇಟ್ ಕೊಟ್ರೆ ಆಗಲ್ಲ
ಸುಪ್ರೀಮ್ ಕೋರ್ಟ್ ಗೆ ಹೋಗಿದ್ದು ಗಣಪತಿ ತಂದೆ- ಸುಪ್ರೀಂ ಆದೇಶದ ಬಗ್ಗೆ ಸಿದ್ದರಾಮಯ್ಯ ಸಂಪುಟದ ಸಚಿವರು ಹಗುರವಾಗಿ ಮಾತನಾಡಿದ್ರೆ ರಾಜ್ಯದ ಜನ ಅರ್ಥ ಮಾಡ್ಕೋತಾರೆ- ಜಾರ್ಜ್ ಗೆ ಸಿಎಂ, ಯಾವುದೋ ಸಚಿವರು ಸರ್ಟಿಫಿಕೇಟ್ ಕೊಟ್ರೆ ಆಗಲ್ಲ - ಯಡಿಯೂರಪ್ಪ