ಯಕ್ಷಸಂಸ್ಕಾರ: ಯಕ್ಷಗಾನ ಪ್ರಶಿಕ್ಷಣದ ಉದ್ಘಾಟನಾ ಕಾರ್ಯಕ್ರಮ
ಬೆಂಗಳೂರು, ನ 12: ಯಕ್ಷಗಾನಕ್ಕೆ ವೇಷ ಮತ್ತು ಬಣ್ಣಗಾರಿಕೆಯ ಶಾಸ್ತ್ರವಿದೆ, ಅದರ ಚೌಕಟ್ಟನ್ನು ಮೀರಿ ಹೋಗಬಾರದು. ತೆಂಕು - ಬಡಗನ್ನು ಅದರ ಶೈಲಿಯ ವ್ಯತ್ಯಾಸದಿಂದ ಭೇದ ಮಾಡಿದೆ. ಅದನ್ನು ಪ್ರತ್ಯೇಕವಾಗಿಯೇ ಕಲಿಯಬೇಕು ಎಂಬು ಹಿರಿಯ ಯಕ್ಷಗಾನ ಕಲಾವಿದರಾದ ಪಾತಾಳ ವೆಂಕಟರಮಣ ಭಟ್ಟರು ಹೇಳಿದ್ದಾರೆ.
ನಗರದ ಮಲ್ಲೇಶ್ವರದಲ್ಲಿರುವ ಅಖಿಲ ಹವ್ಯಕ ಮಹಾಸಭಾದಲ್ಲಿ "ಯಕ್ಷಸಂಸ್ಕಾರ" ಕಾರ್ಯಕ್ರಮದ ತೆಂಕುತಿಟ್ಟು ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದ ಪಾತಾಳ ವೆಂಕಟರಮಣ ಭಟ್ಟರು, ಕಲಿಯಲು ನಮ್ಮಕಾಲದಲ್ಲಿ ವ್ಯವಸ್ಥೆ ಇರಲಿಲ್ಲ. ಕಲಾವಿದರ ಸೇವೆ ಮಾಡಿ ಬೈಸಿಕೊಳ್ಳುತ್ತ ಅವರ ಚೀಲ ಹೊತ್ತು ಓಡಾಡಿ ಕಲಿಯಬೇಕಿತ್ತು ಎಂದು ಹೇಳಿದ್ದಾರೆ.
ಇಂದಿನ ಹೆಜ್ಜೆಗಳು ಸುಧಾರಿಸಿದೆ. ಅನ್ಯಮತದವರು ದೀಪ ಆರಿಸುವ ಸಂಸ್ಕೃತಿಯವರು ನಾವು ದೀಪ ಹಚ್ಚಿ ಉದ್ಘಾಟಿಸುತ್ತೇವೆ. ದೀಪ ಶಕ್ತಿಸ್ವರೂಪ, ಕಲೆಯೂ ಹಾಗೇ ಜಾಜ್ವಲ್ಯಮಾನವಾಗಬೇಕು. ಈ ನಿಟ್ಟಿನಲ್ಲಿ ಈ ಶ್ರೇಷ್ಠ ಕಲೆಯನ್ನು ಕಲಿಯುವ ಅವಕಾಶಮಾಡಿಕೊಡುವ ಶಿಬಿರವನ್ನು ವ್ಯವಸ್ಥೆಗೊಳಿದ್ದು ಕಾಲೋಚಿತವಾಗಿದೆ ಎಂದು ವೆಂಕಟರಮಣ ಭಟ್ಟರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಬಡಗುತಿಟ್ಟಿನ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದ ಕೆರೆಮನೆ ಶಿವಾನಂದ ಹೆಗಡೆ, ಭರತನೃತ್ಯ ಇತ್ಯಾದಿ ಕಲೆಗಳು ಬೆಳೆದ ತೆರದಲ್ಲಿ ಯಕ್ಷಗಾನ ವ್ಯಾಪಿಸಬೇಕು. ಕ್ಷಿಪ್ರಕಾಲದಲ್ಲಿ ಸ್ಟಾರ್ ಮಟ್ಟದ ಕಲಾವಿದ ತಯಾರಾಗಬೇಕು ಎಂಬ ಧೋರಣೆ ಸರಿಯಲ್ಲ ಎಂದು ಹೇಳಿದ್ದಾರೆ.
ಬಡಗುತಿಟ್ಟಿನ ಪ್ರಶಿಕ್ಷಕರಾದ ಬಂದ ತೋಟಿಮನೆ ಗಣಪತಿಯವರು ಮಾತನಾಡಿ ಯಕ್ಷಗಾನವೆಂದರೆ ಕುಣಿತವಷ್ಟೇ ಅಲ್ಲ. ಅದಕ್ಕೆ ವೇಷಧಾರಿಗಳು ಬೇಕಾಗಿಲ್ಲ. ಪಾತ್ರಧಾರಿಗಳಾಗಬೇಕಾಗಿದೆ. ತರಬೇತಿಕೇಂದ್ರಗಳು ಸಾಕಷ್ಟಿವೆ ಆದರೆ ಅವೆಲ್ಲ ಧಿಡೀರ್ ಕಲಾವಿದರನ್ನು ನಿರ್ಮಿಸುತ್ತವೆ. ಪಾತ್ರಧಾರಿಗಳನ್ನು ಹುಟ್ಟು ಹಾಕುತ್ತಿಲ್ಲ.ಸರಿಯಾದ ವಿಮರ್ಶಕರು ಹುಟ್ಟಬೇಕು ಎಂದು ಹೇಳಿದ್ದಾರೆ.
ಅಖಿಲ ಹವ್ಯಕ ಮಹಾಸಭಾದ ಅಧ್ಯಕ್ಷರಾದ ಗಿರಿಧರ್ ಕಜೆ ಮಾತನಾಡಿ, ಕಲೆಯನ್ನು ನೈಜ ಮೂಲರೂಪದಲ್ಲಿ ತೋರಿಸಬೇಕು. ಈ ನಿಟ್ಟಿನಲ್ಲಿ ಈ ಯಕ್ಷಸಂಸ್ಕಾರ ಕೇಂದ್ರ ಧ್ಯೇಯಯುತವಾಗಿದೆ. ಪಾರ್ಥೇನಿಯಂ ಕಳೆ ಸ್ವಯಂ ಬೇಗ ಬೆಳೆದು ಹರಡುತ್ತದೆ. ತುಳಸಿ ಬಿಲ್ವಗಳನ್ನು ಕಷ್ಟದಿಂದ ಬೆಳೆಸಬೇಕಾಗುತ್ತದೆ. ಹಾಗೆಯೇ ಒಂದು ಸದ್ವಿಚಾರ ಹರಡಲು ತುಂಬ ಪ್ರಯತ್ನ ಬೇಕಾಗುತ್ತದೆ. ಒಳ್ಳೆಯ ಕಲಾರತ್ನಗಳನ್ನು ಉತ್ಪಾದಿಸುವುದು ಈ ಕೇಂದ್ರದ ಉದ್ದೇಶ ಎಂದು ಹೇಳಿದರು.
ಪ್ರತೀ ಭಾನುವಾರ ಬೆಳಗ್ಗೆಯಿಂದ (ನ. 19ರಿಂದ) ಶಿಬಿರ ನಡೆಯಲಿದ್ದು, ತೆಂಕುತಿಟ್ಟು ಪ್ರಶಿಕ್ಷಕರಾಗಿ ಲಕ್ಷ್ಮೀನಾರಾಯಣ ಕಲ್ಚಾರ್, ಈಶ್ವರಚಂದ್ರ ನಿಡ್ಲೆ, ರವಿಶಂಕರ ಬಡೆಕ್ಕಿಲ. ಬಡಗುತಿಟ್ಟು ಪ್ರಶಿಕ್ಷಕರಾಗಿ ತೋಟಿಮನೆ ಗಣಪತಿ ಹೆಗಡೆ, ಪ್ರಸನ್ನಕುಮಾರ್, ಶ್ರೀ ಮಂಜು ಯಕ್ಷಗಾನ ತರಬೇತಿ ನೀಡಲಿದ್ದಾರೆ. ಯಕ್ಷಗಾನ ಕಲಿಯಲು ಆಸಕ್ತಿ ಇರುವವರು ಹವ್ಯಕ ಮಹಾಸಭೆಯನ್ನು ಸಂಪರ್ಕಿಸಬಹುದಾಗಿದೆ.