ಜೂನ್ 20ಕ್ಕೆ ಕಲಾಗ್ರಾಮದಲ್ಲಿ ಬಿಲ್ಜಾಣ ಧನಂಜಯ ಯಕ್ಷಗಾನ ಪ್ರಸಂಗ
ಬೆಂಗಳೂರು, ಜೂನ್ 16: ಬೆಂಗಳೂರಿನ ಸಮಸ್ತರು ರಂಗಸಂಶೋಧನಾ ಕೇಂದ್ರದಿಂದ ಜೂನ್ ಇಪ್ಪತ್ತರಂದು ಮಂಗಳವಾರ ಸಂಜೆ ಆರು ಗಂಟೆಗೆ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಬಿಲ್ಜಾಣ ಧನಂಜಯ ಯಕ್ಷಗಾನ ಪ್ರಸಂಗ ಇದೆ. ಪ್ರವೇಶ ಉಚಿತವಾಗಿರುತ್ತದೆ. ಬೇಗಾರ್ ಶಿವಕುಮಾರ್ ಅವರು ಸಾರಥ್ಯ ವಹಿಸಲಿದ್ದಾರೆ.
ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಯಕ್ಷಗಾನ ಡಿಪ್ಲೋಮಾ ಕೋರ್ಸ್
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾದ ಸಿ.ಬಸವಲಿಂಗಯ್ಯ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಪತ್ರಕರ್ತರಾದ ಗುಡಿಹಳ್ಳಿ ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಹಾಗೂ ನಾಟಕಾರರು-ಸಾಹಿತಿಗಳಾದ ಹೊರೆಯಾಲ ದೊರೆಸ್ವಾಮಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಬಡಗು ಶೈಲಿಯ ಆಟವಾಗಿ ಬಿಲ್ಜಾಣ ಧನಂಜಯ ಎಂಬ ಸಾಂಪ್ರದಾಯಿಕ ಪ್ರಸಂಗದ ಪ್ರಯೋಗ ನಡೆಯಲಿದೆ. ಈ ಆಟವನ್ನು ಬೇಗಾರ್ ಶಿವಕುಮಾರ್ ಅವರು ನಿರ್ದೇಶನ ಮಾಡಲಿದ್ದಾರೆ.
ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯವು ಈ ಪ್ರದರ್ಶನಕ್ಕೆ ಧನ ಸಹಾಯ ನೀಡುತ್ತಿದೆ. ಅಂದಹಾಗೆ ಸಮಸ್ತರು ರಂಗಸಂಶೋಧನಾ ಕೇಂದ್ರವನ್ನು ಗೋಪಾಲಕೃಷ್ಣ ನಾಯರಿಯವರು ಮುನ್ನಡೆಸುತ್ತಿದ್ದಾರೆ. ಇದರ ಪ್ರಾದೇಶಿಕ ಘಟಕ ಬೆಂಗಳೂರು ನಗರ, ಹರಪನಹಳ್ಳಿ, ಸಾಲಿಗ್ರಾಮ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಇದೆ.