ಮಹಿಳೆ ಜೀವ ಉಳಿಸಿದ ಬೆಳ್ಳಂದೂರು ಕೆರೆಯ ಕಳೆ ಗಿಡಗಳು
ಬೆಂಗಳೂರು, ಮೇ 19 : ದೇಶದಾದ್ಯಂತ ಕುಖ್ಯಾತಿ ಪಡೆದಿರುವ ಬೆಂಗಳೂರಿನ ಬೆಳ್ಳಂದೂರು ಕೆರೆಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಹಾರಿದ ಮಹಿಳೆಯನ್ನು ಎರಡು ಗಂಟೆ ಪರಿಶ್ರಮ ಪಟ್ಟು, ಪೊಲೀಸರು ರಕ್ಷಣೆ ಮಾಡಿದ್ದಾರೆ. ಯಮಲೂರಿನ ಮಾದಮ್ಮ(60) ಆತ್ಮಹತ್ಯೆಗೆ ಯತ್ನಿಸಿದವರು. ಮನೆಯವರ ಜೊತೆ ಜಗಳ ಆಡಿಕೊಂಡು ಬಂದು, ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಬೆಳ್ಳಂದೂರು ಕೆರೆಗೆ ಹಾರಿದ್ದಾರೆ.
ಆದರೆ, ಕೆರೆಯಲ್ಲಿ ಬೆಳೆದಿದ್ದ ಕಳೆಯಿಂದಾಗಿ ಆಕೆ ಕೂಡಲೇ ನೀರಿನೊಳಗೆ ತಲುಪಿಲ್ಲ. ನಿಧಾನವಾಗಿ ಕೆರೆಯಲ್ಲಿ ಮುಳುಗುತ್ತಿದ್ದ ಆಕೆಯನ್ನು ಕೆರೆಯ ಮೇಲ್ವಿಚಾರಣೆ ನೋಡಿಕೊಳ್ಳಲು ನೇಮಿಸಿದ್ದ ವಿಚಕ್ಷಣಾ ದಳದ ಹೋಂ ಗಾರ್ಡ್ ಗಮನಿಸಿದ್ದಾರೆ. ಶವ ಅಂತ ತಿಳಿದು ಮಾರತ್ ಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಆ ತಕ್ಷಣವೇ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.
ಸಬ್ ಇನ್ ಸ್ಪೆಕ್ಟರ್ ನಾಗರಾಜು ಅಗ್ನಿ ಶಾಮಕ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ, ಆದರೆ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ನೀರಿನಲ್ಲಿ ಮುಳುಗುತ್ತಿರುವುದು ಕಂಡಿದೆ. ಏಣಿ ಹಾಕಿ, ಹಗ್ಗ ಕಟ್ಟಿಕೊಂಡ ಕೆಲವು ಸಿಬ್ಬಂದಿ ಏಣಿಯ ಸಹಾಯದಿಂದ ಮಹಿಳೆಯ ಬಳಿ ತಲುಪಿದ್ದಾರೆ. ಮಹಿಳೆಯನ್ನು ಕೆರೆಯ ದಡಕ್ಕೆ ತಂದ ಸಿಬ್ಬಂದಿ ಆಕೆ ಉಸಿರಾಡುತ್ತಿರುವುದನ್ನು ಗಮನಿಸಿ, ಪೊಲೀಸರು ಹೊಯ್ಸಳ ಕಾರಿನಲ್ಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾದಮ್ಮ ಚೇತರಿಸಿಕೊಳ್ಳುತ್ತಿದ್ದು, ಕುಟುಂಬಸ್ಥರಿಗೆ ವಿಷಯ ತಿಳಿಸಲಾಗಿದೆ.