ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಬಿಜೆಪಿ ಅಭ್ಯರ್ಥಿ?!
Recommended Video
ಬೆಂಗಳೂರು, ನವೆಂಬರ್ 15: ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಇನ್ನಿಲ್ಲವಾಗಿ ಸರಿಯಾಗಿ ನಾಲ್ಕು ದಿನವೂ ಕಳೆದಿಲ್ಲ. ಆಗಲೇ ಬೆಂಗಳೂರು ದಕ್ಷಿಣಕ್ಕೆ ಅನಂತ್ ಕುಮಾರ್ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ ತೇಜಸ್ವಿನಿ ಅನಂತ್ ಕುಮಾರ್ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ನಾವು ಅವರ ಮನವೊಲಿಸುತ್ತೇವೆ ಎಂದು ಬಿಜೆಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಹೇಳಿದ್ದಾರೆ.
ಅನಂತ್ ಕುಮಾರ್ ಇಲ್ಲದ ಬೆಂಗಳೂರು ದಕ್ಷಿಣಕ್ಕೆ ಉತ್ತರಾಧಿಕಾರಿ ಯಾರು?
ಆದರೆ ತೇಜಸ್ವಿನಿ ಅನಂತ್ ಕುಮಾರ್ ಅವರು ಇದಕ್ಕೆ ಒಪ್ಪುತ್ತಾರಾ? ತಮ್ಮ ಸಾಮಾಜಿಕ ಸೇವೆಯ ಜವಾಬ್ದಾರಿಗಳೇ ಸಾಕಷ್ಟಿರುವಾಗ ರಾಜಕೀಯ ಪ್ರವೇಶಕ್ಕೆ ಅವರು ಮನಸ್ಸು ಮಾಡುತ್ತಾರಾ? ಕೆಲವು ಆಪ್ತ ಮೂಲಗಳ ಪ್ರಕಾರ ಅನಂತ್ ಕುಮಾರ್ ಅವರಿಗೆ ತೇಜಸ್ವಿನಿ ಅವರು ರಾಜಕೀಯಕ್ಕೆ ಬರುವುದು ಇಷ್ಟವಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಳೆದ ಎರಡು ದಶಕಗಳಿಂದ ಬೆಂಗಳೂರು ದಕ್ಷಿಣವನ್ನು ತಮ್ಮ ತೆಕ್ಕೆಯಲ್ಲಿ ಉಳಿಸಿಕೊಂಡಿದ್ದ ಅನಂತ್ ಕುಮಾರ್ ಅವರ ಪರಂಪರೆಯನ್ನು ಉಳಿಸಿಕೊಂಡು ಹೋಗುವುದಕ್ಕೆ ತೇಜಸ್ವಿನಿ ಅವರಿಂದ ಮಾತ್ರ ಸಾಧ್ಯ ಎಂಬುದು ಬಿಜೆಪಿಯ ಕೆಲ ಮುಖಂಡರ ಅಭಿಪ್ರಾಯ.
ತೇಜಸ್ವಿನಿ ಅವರ ಮನವೊಲಿಸುತ್ತೇವೆ
ತೇಜಸ್ವಿನಿ ಅನಂತ್ ಕುಮಾರ್ ಅವರ ಮನವೊಲಿಸಲು ನಾವು ಪ್ರಯತ್ನಿಸುತ್ತೇವೆ. ಅನಂತ್ ಕುಮಾರ್ ವಿಧಿವಶರಾದರೆ ಮೇಲೆ ಅವರ ಸ್ಥಾನಕ್ಕೆ ಸಹಜವಾಗಿ ಕೇಳಿಬರುವ ಆಯ್ಕೆ ಅವರ ಪತ್ನಿಯ ಹೆಸರು. ಆದರೆ ಅವರೊಂದಿಗೆ ರಾಜಕೀಯದ ಬಗ್ಗೆ ಮಾತನಾಡುವುದಕ್ಕೆ ಇದು ಸರಿಯಾದ ಸಮಯವಲ್ಲ. ಕೆಲದಿನಗಳ ಬಳಿಕ ಅವರ ಮನವೊಲಿಕೆಗೆ ಪ್ರಯತ್ನಿಸುತ್ತೇವೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತ್ ಕುಮಾರ್ ಅವರ ಪರಂಪರೆಯನ್ನು ತೇಜಸ್ವಿನಿ ಅವರು ಮಾತ್ರವೇ ಸಮರ್ಥವಾಗಿ ಉಳಿಸಿಕೊಂಡು ಹೋಗಬಲ್ಲರು ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಹೇಳಿದ್ದಾರೆ.
ಪಟ್ಟಿಯಲ್ಲಿ ರವಿಸುಬ್ರಹ್ಮಣ್ಯ?!
ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಸದಸ್ಯ ರವಿ ಸುಬ್ರಹ್ಮಣ್ಯ ಅವರ ಹೆಸರೂ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಕೇಳಿಬರುತ್ತಿದೆ. ತೇಜಸ್ವಿನಿ ಅವರು ಸ್ಪರ್ಧೆಗೆ ಒಲ್ಲೆ ಎಂದರೆ ರವಿ ಸುಬ್ರಹ್ಮಣ್ಯ ಅವರು ನನ್ನ ಎರಡನೇ ಆಯ್ಕೆ ಎಂದು ಆರ್ ಅಶೋಕ್ ಹೇಳಿದ್ದಾರೆ. ಸದ್ಯಕ್ಕೆ ಬಿಜೆಪಿಯ ಗುರಿ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸುವುದಾಗಿದ್ದು, ನಂತರ ಈ ಬಗ್ಗೆ ಯೋಚಿಸುವುದಾಗಿ ಆರ್ ಅಶೋಕ್ ಹೇಳಿದ್ದಾರೆ.
2014ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆ ನೆನಪು
ತೇಜಸ್ವಿನಿ ಅವರ ನಿಲುವು ಅಸ್ಪಷ್ಟ
ತಮಗೆ ರಾಜಕೀಯಕ್ಕೆ ಬರುವ ಇಂಗಿತವಿದೆ ಎಂದು ಈ ಮೊದಲು ಎಂದಿಗೂ ತೇಜಸ್ವಿನಿ ಅನಂತ್ ಕುಮಾರ್ ವ್ಯಕ್ತಪಡಿಸಿಲ್ಲ. ಪತಿಯೊಂದಿಗೆ ರಾಜಕೀಯ ಪ್ರಚಾರದಲ್ಲಿ ಕೈಗೊಂಡು, ಪತಿಯ ಗೆಲುವಿಗೆ ಅವಿರತ ಶ್ರಮಿಸಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರೇ ಹೊರತು, ತಾವಾಗಿಯೇ ರಾಜಕೀಯಕ್ಕೆ ಬರುವ ಬಗ್ಗೆ ಅವರೆಂದಿಗೂ ಯೋಚಿಸಿರಲಿಲ್ಲ. ಅನಂತ್ ಕುಮಾರ್ ಅವರ ಆಪ್ತ ಮೂಲದ ಪ್ರಕಾರ ತೇಜಸ್ವಿನಿ ರಾಜಕೀಯಕ್ಕೆ ಬರುವುದು ಸ್ವತಃ ಅನಂತ್ ಕುಮಾರ್ ಅವರಿಗೇ ಇಷ್ಟವಿರಲಿಲ್ಲ.
ಬೆಂಗಳೂರು ದಕ್ಷಿಣದ ಅಚ್ಚುಮೆಚ್ಚಿನ ನಾಯಕ ಅನಂತ್!
ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಅವರು ನವೆಂಬರ್ 12 ರಂದು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು. 1996 ರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಾಗಿ ಸತತ ಆರು ಬಾರಿ ಗೆದ್ದ ಅನಂತ್ ಕುಮಾರ್ ಈ ಭಾಗದ ಜನರಿಗೆ ಅಚ್ಚುಮೆಚ್ಚಿನ ನಾಯಕ ಎನ್ನಿಸಿದ್ದರು. ಮಧ್ಯಮ ವರ್ಗದ ಹಿಂದು ಮತಗಳೇ ಹೆಚ್ಚಿರುವ ಬೆಂಗಳೂರು ದಕ್ಷಿಣ ಭಾಗದಲ್ಲಿ ಅನಂತ್ ಕುಮಾರ್ ಅವರ ದಾಖಲೆಯನ್ನು ಬಿಜೆಪಿ ಉಳಿಸಿಕೊಂಡು ಹೋಗುತ್ತದೆಯೇ, ಅಥವಾ ಈ ದಾಖಲೆಯನ್ನು ಕಾಂಗ್ರೆಸ್ ಮುರಿಯುತ್ತದೆಯೇ ಎಂಬುದನ್ನು ಲೋಕಸಭಾ ಚುನಾವಣೆಯವರೆಗೆ ಕಾದು ನೋಡಬೇಕಿದೆ.