ಲಾರಿ ಮುಷ್ಕರ: ಪೆಟ್ರೋಲ್-ಅಡುಗೆ ಅನಿಲಕ್ಕೂ ತಟ್ಟಲಿದೆಯೇ ಬಿಸಿ?
ದಕ್ಷಿಣ ಭಾರತದ ರಾಜ್ಯಗಳ ಲಾರಿ ಮುಷ್ಕರ ಸೋಮವಾರ (ಏಪ್ರಿಲ್ 4) ಐದನೇ ದಿನಕ್ಕೆ ಕಾಲಿರಿಸಿದೆ. ಈ ಮುಷ್ಕರಕ್ಕೆ ಕ್ಯಾಂಟರ್ ಮಾಲೀಕರು ಬೆಂಬಲ ಸೂಚಿಸುವ ಸಾಧ್ಯತೆ ಇದ್ದು, ಪೆಟ್ರೋಲ್-ಡೀಸೆಲ್-ಅಡುಗೆ ಅನಿಲ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ
ಬೆಂಗಳೂರು, ಏಪ್ರಿಲ್ 4: ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ದಕ್ಷಿಣ ಭಾರತದ ರಾಜ್ಯಗಳ ಲಾರಿ ಮುಷ್ಕರಕ್ಕೆ ಕರೆ ನೀಡಿದ್ದು, ಸೋಮವಾರ (ಏಪ್ರಿಲ್ 4) ಐದನೇ ದಿನಕ್ಕೆ ಕಾಲಿರಿಸಿದೆ. ಥರ್ಡ್ ಪಾರ್ಟಿ ಇನ್ಷೂರೆನ್ಸ್ ಪ್ರೀಮಿಯಂ ಬೆಲೆ ಏರಿಕೆ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದಕ್ಕೆ ವಿರೋಧವೂ ಸೇರಿದಂತೆ ಆಯಾ ರಾಜ್ಯಗಳಲ್ಲಿ ಸಮಸ್ಯೆಗಳನ್ನು ನಿವಾರಿಸಬೇಕು ಎಂಬುದು ಒತ್ತಾಯವಾಗಿದೆ. ಕರ್ನಾಟಕದಲ್ಲಿ ಹೊಸದಾಗಿ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಸರಿಯಲ್ಲ. ಈಗಾಗಲೇ ಟೋಲ್ ಸಂಗ್ರಹಿಸುತ್ತಿರುವುದನ್ನು ಸಹ ನಿಲ್ಲಿಸಬೇಕು ಎಂದು ಮನವಿ ಮಾಡಲಾಗಿದೆ.[ಮರಳು ಮಾಫಿಯಾ ಅಡ್ಡೆ ಮೇಲೆ ದಾಳಿ, ಉಡುಪಿ ಡಿಸಿ ಕೊಲೆ ಯತ್ನ]
ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು, ಪುದುಚೆರಿ, ಗೋವಾ ರಾಜ್ಯಗಳ ಲಾರಿ ಮಾಲೀಕರು ಈ ಬಂದ್ ಗೆ ಕರೆ ನೀಡಿದ್ದಾರೆ. ಅಡುಗೆ ಅನಿಲ ಹಾಗೂ ಪೆಟ್ರೋಲ್-ಡೀಸೆಲ್ ಸರಬರಾಜು ಮಾಡುವ ಟ್ಯಾಂಕರ್ ಗಳ ಮಾಲೀಕರನ್ನೂ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿದ್ದೇವೆ. ಸೋಮವಾರ ಈ ಬಗ್ಗೆ ನಿರ್ಧಾರ ಘೋಷಿಸುವ ಸಾಧ್ಯತೆ ಇದೆ ಎಂದು ಕರ್ನಾಟಕ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘದ ಮೂಲಗಳು ತಿಳಿಸಿವೆ.
ಒಂದು ವೇಳೆ ಟ್ಯಾಂಕರ್ ಗಳ ಮಾಲೀಕರೂ ಮುಷ್ಕರಕ್ಕೆ ಬೆಂಬಲ ಸೂಚಿಸಿದರೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯವಾಗಲಿದೆ. ಇನ್ನು ದಿನ ಬಳಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಎಂದೇನೂ ಆಗದಿದ್ದರೂ ತರಕಾರಿ-ಹಣ್ಣುಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ. ಇದು ಗ್ರಾಹಕರಿಗೆ ಹೊರೆಯಾಗಿದೆ.[ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ವ್ಯತ್ಯಯ]
ಈ ಬಗ್ಗೆ ಒನ್ಇಂಡಿಯಾ ಕನ್ನಡದ ಜತೆ ಮಾತನಾಡಿದ ದಿನಸಿ ಮಳಿಗೆ ಮಾಲೀಕರಾದ ಬಿ.ಎಸ್.ವಿಶ್ವನಾಥ್, ಹೌದು ದಿನ ಬಳಕೆ ವಸ್ತುಗಳ ಬೆಲೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಆಗಿದೆ. ಈ ಹಿಂದೆ ನಮಗೆ ಬಾಳೆಹಣ್ಣು ಸಗಟು ದರ 52ಕ್ಕೆ ಸಿಗುತಿತ್ತು. ಅದನ್ನು 56ಕ್ಕೆ ಏರಿಸಲಾಗಿದೆ. ಬಾಳೆಹಣ್ಣನ್ನು ಬೊಲೆರೋ ವಾಹನದಲ್ಲಿ ಸರಬರಾಜು ಮಾಡಲಾಗುತ್ತಿದೆಯಂತೆ. ಅಗತ್ಯ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ ಎಂದು ಬೆಲೆ ಹೆಚ್ಚಿಸಿರುವುದಾಗಿ ಹೇಳಿತ್ತಾರೆ ಎಂದು ಅವರು ತಿಳಿಸಿದರು.