ಹುತಾತ್ಮ ಲೆ.ಕ ನಿರಂಜನ್ ಮನೆ ಒಡೆಯುವುದೆ ಬಿಬಿಎಂಪಿ?
ಬೆಂಗಳೂರು, ಆಗಸ್ಟ್ 11 : ಪಠಾಣ್ಕೋಟ್ನಲ್ಲಿ ಜನವರಿ 4ರಂದು ನಡೆದ ಉಗ್ರರ ದಾಳಿಯಲ್ಲಿ ಹತನಾದ, ಬೆಂಗಳೂರಿನ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕುಮಾರ್ ಅವರ ಗೌರವಾರ್ಥವಾಗಿ ಆಗಸ್ಟ್ 15ರಂದು ಕಾರ್ಯಕ್ರಮ ಆಯೋಜಿಸಿರುವಾಗ, ಬರಸಿಡಿಲಿನಂಥ ಸುದ್ದಿಯೊಂದು ಅವರ ಕುಟುಂಬದ ಮೇಲೆರಗಿದೆ.
ಬೆಂಗಳೂರಿನ ವಿದ್ಯಾರಣ್ಯಪುರದ ಬಳಿಯಿರುವ ದೊಡ್ಡಬೊಮ್ಮಸಂದ್ರದಲ್ಲಿರುವ ಅವರ ಮನೆಯ ಮುಂದಿನ ಮೂರು ಪಿಲ್ಲರ್ ಗಳನ್ನು ಧ್ವಂಸ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ನಿರಂಜನ್ ಅವರ ಮನೆಯ ಒಂದು ಭಾಗ ರಾಜಕಾಲುವೆಯನ್ನು ಅತಿಕ್ರಮಿಸಿರುವುದರಿಂದ ಬಿಬಿಎಂಪಿ ಈ ಕಾರ್ಯಾಚರಣೆಗಿಳಿದಿದೆ.[ಲೆ.ಕರ್ನಲ್ ನಿರಂಜನ್ ಹೆಸರು ಶೌರ್ಯ ಪ್ರಶಸ್ತಿಗೆ ಶಿಫಾರಸು!]
ಈ ಮನೆಯಲ್ಲಿ ಕಳೆದ 15 ವರ್ಷಗಳಿಂದ ವಾಸಿಸುತ್ತಿರುವ ನಿರಂಜನ್ ಅವರ ತಂದೆ ಶಿವರಾಜನ್ ಅವರು ಸದ್ಯಕ್ಕೆ ಕೇರಳಕ್ಕೆ ತೆರಳಿದ್ದು, ಅವರ ಹೆಂಡತಿ ರಾಧಾ ಮತ್ತು ಮತ್ತೊಬ್ಬ ಮಗ ಶಶಾಂಕ್ ಅವರು, ಅನ್ಯ ವ್ಯವಸ್ಥೆ ಮಾಡಿಕೊಳ್ಳುವವರೆಗೆ ಮನೆಯ ಭಾಗವನ್ನು ಒಡೆದುಹಾಕಬೇಡಿ ಎಂದು ಬಿಬಿಎಂಪಿ ಅಧಿಕಾರಿಗಳನ್ನು ಕೋರಿದ್ದಾರೆ.
ರಾಜಕಾಲುವೆ ಚರಂಡಿಯ ಮೇಲೆ ನಿರ್ಮಿಸಲಾಗಿರುವ ಸುಮಾರು 25 ಕಟ್ಟಡಗಳನ್ನು ಬುಧವಾರ ಬಿಬಿಎಂಪಿ ಒಡೆದುಹಾಕಿದೆ. ಅಲ್ಲಿ ವಾಸಿಸುತ್ತಿದ್ದ ಜನರೆಲ್ಲ ಈಗ ಬೀದಿಗೆ ಬಿದ್ದಿದ್ದಾರೆ. ಆರು ತಿಂಗಳ ಹಿಂದೆಯೇ ಈ ಕಾರ್ಯಾಚರಣೆಯ ಬಗ್ಗೆ ನೋಟೀಸ್ ನೀಡಲಾಗಿತ್ತು ಎಂದು ಬಿಬಿಎಂಪಿ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. [ಎಂಥಾ ಘೋರ ವಿಧಿ ಲಿಖಿತ,ನಿರಂಜನ್ ಸಾವಿನ ಆಘಾತ]
ಬೃಹತ್ ಚರಂಡಿಯ ಮೇಲೆ ಸ್ವತಃ ಬಿಬಿಎಂಪಿಯೇ ವಾರ್ಡ್ ಕಚೇರಿಗಳನ್ನು ನಿರ್ಮಿಸಿದೆ. ಅಲ್ಲದೆ, ಎರಡು ಪಾರ್ಕ್ ಗಳನ್ನು ಕೂಡ ರಾಜಕಾಲುವೆ ಮೇಲೆ ಸ್ವತಃ ಬಿಬಿಎಂಪಿಯೇ ನಿರ್ಮಿಸಿದೆ. ಆ ಪಾರ್ಕಿನಲ್ಲಿ ಅದರ ಕಚೇರಿಯೂ ಇದೆ. ಅದನ್ನು ಕೆಡವುತಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.
ಬೆಂಗಳೂರಿನಾದ್ಯಂತ ರಾಜ ಕಾಲುವೆ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿರುವ ಕಟ್ಟಡ, ಗೋಡೆಗಳನ್ನು ಬಿಬಿಎಂಪಿ ಸಮರೋಪಾದಿಯಲ್ಲಿ ಧ್ವಂಸ ಮಾಡುತ್ತಿದೆ. ಈಗಾಗಲೆ ಹಲವಾರು ಬಡಾವಣೆಯಲ್ಲಿ ಕಾರ್ಯಾಚರಣೆ ಸಾಗಿದೆ. ಬುಧವಾರ ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ಮಹದೇವಪುರ, ಯಶವಂತಪುರ ಬಡಾವಣೆಗಳನ್ನು ತನ್ನ ಪಟ್ಟಿಯಲ್ಲಿ ಸೇರಿಸಿಕೊಂಡಿದೆ. [ಪಠಾಣ್ ಕೋಟ್ ದಾಳಿ : ಬೆಂಗಳೂರಿನ ನಿರಂಜನ್ ಹುತಾತ್ಮ]